ಚಿಕ್ಕಬಳ್ಳಾಪುರ, ಮಾ 04: ಚುನಾವಣಾ ಕರ್ತವ್ಯದಲ್ಲಿ ಅತಿಯಾದ ಆತ್ಮ ವಿಶ್ವಾಸ ತರವಲ್ಲ,ಪ್ರತಿ ಚುನಾವಣೆಯು ವಿಭಿನ್ನ ಸ್ವರೂಪದ್ದಾಗಿರುತ್ತದೆ. ಇದನ್ನರಿತು ಸಂದರ್ಭೋಚಿತವಾಗಿ ನಿಯೋಜಿತ ಅಧಿಕಾರಿಗಳು,ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ರವರು ಸಲಹೆ ಸೂಚನೆಗಳನ್ನು ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ “ಲೋಕಸಭಾ ಚುನಾವಣಾ ಪೂರ್ವ ಸಿದ್ದತಾ ಸಂಬಂಧ ಶಿಡ್ಲಘಟ್ಟ-ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಬರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಅಧಿಕಾರಿಗಳು ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯತೆಯೊಂದಿಗೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಈ ಸಭೆಯನ್ನು ಎರಡು ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ. ಚುನಾವಣಾ ಕರ್ತವ್ಯಗಳನ್ನು ಶೇ. 99.99 ರಷ್ಟು ಸಮರ್ಪಕವಾಗಿ ಮಾಡಿದರೂ ಕೂಡ ದೋಷ ಪೂರಿತ ಚುನಾವಣಾ ಪ್ರಕ್ರಿಯೆ ಎಂದು ಕರೆಯುತ್ತಾರೆ. ಆದ್ದರಿಂದ ಚುನಾವಣೆ ಕಾರ್ಯಗಳನ್ನು ಶೇ. 100 ರಷ್ಟು ಕರಾರುವಕ್ಕಾಗಿ ನಿರ್ವಹಿಸಲೇಬೇಕು. ಪ್ರತಿ ಚುನಾವಣೆಗೂ ಚುನಾವಣಾ ಕರ್ತವ್ಯಗಳಲ್ಲಿ, ತಾಂತ್ರಿಕತೆಯಲ್ಲಿ , ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳು ಸುಧಾರಣೆಗಳು ಆಗುತ್ತಿರುತ್ತವೆ. ಅವುಗಳನ್ನು ಅರಿತು ಕೆಲಸ ಮಾಡುವ ಜವಾಬ್ದಾರಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೆ ಆಗಿರುವ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿರುತ್ತದೆ. ಮತದಾರ ಪಟ್ಟಿ ಸಿದ್ದತೆ, ಮತಗಟ್ಟೆಗಳ ಸಿದ್ದತೆ, ಚುನಾವಣಾ ತರಬೇತಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಸೇರಿದಂತೆ ಚುನಾವಣಾ ಆಯೋಗ ನೀಡಿರುವ ಚುನಾವಣಾ ಪೂರ್ವ ತಯಾರಿ ನಿರ್ದೇಶನಗಳನ್ನು ಈವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮಾಡಿರುವುದು ಶ್ಲಾಘನೀಯ. ಯಾವಾಗ ಬೇಕಾದರೂ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಬಹುದು, ಸಂಹಿತೆ ಜಾರಿಯ ಆರಂಭದಿಂದ ಕೊನೆಯಾಗುವವರೆಗೆ ಚಿಂತಾಮಣಿ-ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರಗಳ ಮಟ್ಟದಲ್ಲಿ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ತಟಸ್ಥ ದೋರಣೆ ಇರಲಿ:
ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗಿರುವ, ಮುಂದೆ ನಿಯೋಜನೆ ಆಗುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಚಲನವಲನದ ಮೇಲೆ ತಾವೇ ನಿಗಾ ಇಡಬೇಕು. ಚುನಾವಣಾ ನೀತಿ ಸಂಹಿತೆ ಘೋಷಣೆ ಆದ ಮೇಲೆ ತಾವು ಯಾವುದೇ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಗ್ರೂಪ್ ಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿದ್ದರೆ ಅದರಿಂದ ಕೂಡಲೆ ಹೊರಬರಬೇಕು. ಆಡಳಿತಾತ್ಮಕ, ಕೌಟುಂಬಿಕ ಗ್ರೂಪ್ ಗಳಿದ್ದರೆ ಅಡ್ಡಿಯಿಲ್ಲ. ಆದರೆ ರಾಜಕೀಯ ಪ್ರೇರಿತ ತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ತಟಸ್ಥ ದೋರಣೆ ಅನುಸರಿಸಬೇಕು.
ಚುನಾವಣಾ ಆಯೋಗ ಈ ಹಿಂದಿನಿಂದ ಚುನಾವಣಾ ಕಾರ್ಯಗಳನ್ನು,ಚುನಾವಣೆಗಳನ್ನು ಸಮರ್ಪಕವಾಗಿ ಪರಿಣಾಮಕಾರಿಯಾಗಿ ಕಾಲಕಾಲಕ್ಕೆ ನಡೆಸುತ್ತಾ ಬಂದಿದೆ. ಆಯೋಗವು ಚುನಾವಣೆಯಿಂದ ಚುನಾವಣೆಗೆ ಅತಿಯಾದ ಪಾರದರ್ಶಕತೆಯನ್ನು ಬಯಸುತ್ತದೆ. ಆದ್ದರಿಂದ ಕಾಲೋಚಿತವಾಗಿ ಆಯೋಗವು ನೀಡುವ ನಿರ್ದೇಶನಗಳನ್ನು ನಾವೆಲ್ಲರೂ ಪಾಲಿಸಬೇಕು. “ಯುದ್ದಕಾಲೇ ಶಸ್ತ್ರ ಅಭ್ಯಾಸ” ಎನ್ನುವಂತಾಗಬಾರದು. ಕಾಲಕಾಲಕ್ಕೆ ಆಯೋಗ ನೀಡುವ ತರಬೇತಿಗಳನ್ನು ಪಡೆದು ಅರ್ಥೈಸಿಕೊಳ್ಳಬೇಕು. ಅದೇ ರೀತಿ ಕಾರ್ಯವನ್ನು ಅನುಷ್ಠಾನ ಮಾಡಬೇಕು ಎಂದು ಸೂಚನೆಗಳನ್ನು ನೀಡಿದರು. ಚುನಾವಣಾ ಕರ್ತವ್ಯಕ್ಕೆ ಈಗಾಗಲೇ ನಿಯೋಜಿಸಿರುವ ಎಲ್ಲ ತಂಡಗಳಿಂದ ಸಮಗ್ರವಾಗಿ ಮಾಹಿತಿ ಪಡೆದರು.ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದಗಳನ್ನು ಅವರು ಈ ವೇಳೆ ತಿಳಿಸಿದರು.
ಶಿಡ್ಲಘಟ್ಟ- ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ನೀಡುತ್ತಾ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾನತಾಡಿ, ಈ ಎರಡು ಕ್ಷೇತ್ರಗಳಲ್ಲಿ ಒಟ್ಟು 4,30,422ಮತದಾರರಿದ್ದು, ಈ ಪೈಕಿ 2,12,955 ಪುರುಷರು, 2,17,418 ಮಹಿಳೆಯರು, 49 ತೃತೀಯ ಲಿಂಗಿಗಳು ಇದ್ದಾರೆ. ಆಯೋಗದ ನಿರ್ದೇನದಂತೆ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಭಾರಿ 9,464 ಯುವ ಮತದಾರರು ಈ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಿದ್ದಾರೆ. ಈಗಾಗಲೇ ಅಂತರ್ ರಾಜ್ಯ ಗಡಿ ಜಿಲ್ಲೆಗಳಲ್ಲಿ ಅಧಿಕಾರಿಗಳೊಂದಿಗೆ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಮಾಹಿತಿ ನೀಡಲಾಗಿದೆ. ಎಲೆಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಬೇಕು. ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳು, ಸಿಬ್ಬಂದಿಯ ನಿಯೋಜನೆ ಮತ್ತು ತರಬೇತಿ ನೀಡಿಕೆ ಕುರಿತು ಅಗತ್ಯ ಕ್ರಮತೆಗೆದು ಕೊಳ್ಳಲಾಗಿದೆ. ಒಟ್ಟಾರೆ ಮುಂಬರುವ ಲೋಕಸಭಾ ಚುನಾವಣೆಯ ಸಂಬಂಧ ಅಗತ್ಯ ಎಲ್ಲ ಸಹಕಾರ ನೀಡಿ ಸಮರ್ಪಕವಾಗಿ ಚುನಾವಣಾ ಕಾರ್ಯಗಳನ್ನು ಮಾಡುವುದಾಗಿ ಕೋಲಾರ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಕೋಲಾರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಸೇರಿದಂತೆ ಚಿಂತಾಮಣಿ-ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *