ಬೆಂ. ಉತ್ತರ ಕ್ಷೇತ್ರ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ :

ಹೆಬ್ಬಾಳ : ಸಿಲ್ಕ್ ಸಿಟಿ ಖ್ಯಾತಿಯಿಂದ ಆರಂಭಗೊಂಡು ಸಿಲಿಕಾನ್ ಸಿಟಿ ಖ್ಯಾತಿಯವರೆಗೆ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಬೆಂಗಳೂರು ನಗರಕ್ಕೆ ಕಾಂಗ್ರೆಸ್ ಕೊಡುಗೆ ಸ್ಮರಣೀಯವಾದುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯ ಪಟ್ಟರು.

ಹೆಬ್ಬಾಳ ಕ್ಷೇತ್ರದ ರಾಧಾಕೃಷ್ಣ ವಾರ್ಡ್ ವ್ಯಾಪ್ತಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ‘ನಿವೃತ್ತರ ನಗರ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರದಲ್ಲಿ ಸಿಲ್ಕ್ ಉದ್ಯಮ ಆರಂಭಿಸುವ ಮೂಲಕ ನಗರಕ್ಕೆ ಸಿಲ್ಕ್ ಸಿಟಿ ಎಂಬ ಖ್ಯಾತಿ ತಂದುಕೊಡುವಲ್ಲಿ, ನಂತರ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆಭಿಸುವ ಮೂಲಕ ವಿಜ್ಞಾನ ನಗರ ಎಂಬ ಖ್ಯಾತಿ ತಂದು ಕೊಡುವಲ್ಲಿ, ಪ್ರಸಕ್ತವಾಗಿ ಜಗತ್ತಿನ ಎರಡನೇ ಸಿಲಿಕಾನ್ ರಾಜಧಾನಿ ಯಾಗಿ ಬೆಂಗಳೂರು ಹೊರ ಹೊಮ್ಮುವಲ್ಲಿ ಕಾಂಗ್ರೆಸ್ ಕೊಡುಗೆ ಸ್ಮರಣೀಯವಾದುದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ, ಬಿಇಎಲ್, ಬಿಎಚ್ ಇಎಲ್, ಎಚ್ ಎಂ ಟಿ ಹೀಗೆ ಬೆಂ. ನಗರದಲ್ಲಿ ಹಲವು ಮಹತ್ತರವಾದ ಸಂಸ್ಥೆಗಳನ್ನು ಆರಂಭಿಸಿ ನಗರದ ಜನತೆಗೆ ಉದ್ಯಮ ಕಲ್ಪಿಸಿಕೊಡು ವಲ್ಲಿ ಕಾಂಗ್ರೆಸ್ ಪಕ್ಷದ ಮಹತ್ತರ‌ ವಾದ ಕೊಡುಗೆ ಇದೆ.

ಬೆಂ.ಉತ್ತರ ಲೋಕಸಭಾ ಕ್ಷೇತ್ರ ಮೂಲತಃ ಕಾಂಗ್ರೆಸ್ ಭದ್ರಕೋಟೆ ಯಾಗಿತ್ತು, ಬೆಂ.ಉತ್ತರ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್ ಗೌಡರವರ ದೊಡ್ಡಪ್ಪ ಎಂ.ವಿ. ಕೃಷ್ಣಪ್ಪ ಇಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆ ಯಾಗಿದ್ದರು. ನಂತರ ಸಿ.ಕೆ. ಜಾಫರ್ ಷರೀಫ್ ರವರು ಇಲ್ಲಿ ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆ‌ ಯಾಗಿದ್ದರು. ಕೇಂದ್ರ ರೈಲ್ವೆ ಸಚಿವ ರಾಗಿ ದೇಶದಾದ್ಯಂತ ಬ್ರಾಡ್ ಗೇಜ್ ರೈಲು ಹಳಿ ನಿರ್ಮಾಣದ ಮೂಲಕ ದೇಶದ ರೈಲ್ವೆ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಖ್ಯಾತಿ ಅವರದ್ದು. ಅವರು ತಮ್ಮ ಸೇವಾವಧಿಯಲ್ಲಿ ಎಲ್ಲಾ ಧರ್ಮ ಗಳನ್ನು ಸಮಾನ ವಾಗಿ ಕಾಣುವ ಮೂಲಕ ಧಾರ್ಮಿಕ ಸಾಮರಸ್ಯ ಮೂಡಿಸಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಯವರು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಯ ವಿಷಯಕ್ಕೆ ಬದಲಾಗಿ ಧರ್ಮ ಬೇಧ ಹುಟ್ಟ ಹಾಕಿ ಚುನಾವಣೆ ಗೆದ್ದಿದ್ದಾರೆ, ಈ ಬಾರಿ ಇದಕ್ಕೆ ಅವಕಾಶ ಕೊಡಬಾರದು. ಕಳೆದ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ, ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದ ಕುಮಾರಿ ಶೋಭಾ ಕರಂದ್ಲಾಜೆಯವರು ಗೆದ್ದ ನಂತರ ಕ್ಷೇತ್ರದ ಕಡೆಗೆ ಮುಖ ಮಾಡದ ಹಿನ್ನೆಲೆಯಲ್ಲಿ ಅಲ್ಲಿಂದ ಗೋಬ್ಯಾಕ್ ಎನಿಸಿಕೊಂಡು, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾರಿ ಬಂದಿದ್ದಾರೆ, ಗೆದ್ದ ಎಲ್ಲಾ ಕಡೆಯೂ ಸಹ ಅವರದ್ದು ಇದೇ ಹವ್ಯಾಸವಾಗಿದ್ದು, ಈ ಬಾರಿ ಬೆಂ. ಉತ್ತರ ಕ್ಷೇತ್ರದ ಮತದಾರರು ಅವರನ್ನು ಸೋಲಿ ಸುವ ಮೂಲಕ ಗೋಬ್ಯಾಕ್ ಮಾಡಬೇಕಿದೆ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಮಾತನಾಡಿ ‘ನಾನು ಬೆಂಗಳೂರು ನಗರದಲ್ಲೇ ಹುಟ್ಟಿ ಬೆಳೆದವನಾಗಿದ್ದು, ನಗರದ ಅಭಿವೃದ್ಧಿಯ ಬಗ್ಗೆ ವಿಶೇಷ ದೃಷ್ಟಿಕೋನ ಹೊಂದಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರಲು ಗೆಲುವಿನ ಅವಶ್ಯಕತೆ ಇದೆ. ಇಂದು ಕಾಂಗ್ರೆಸ್ ಚುನಾವಣಾ ಕಚೇರಿ ಆರಂಭಿಸಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರತಿ ಮತದಾರನ್ನು ಸಂಪರ್ಕಿಸಿ ಮತಯಾಚನೆ ಮಾಡುವ ಮೂಲಕ ಗೆಲುವಿಗೆ ಶ್ರಮಿಸಬೇಕೆಂದು ಎಂದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮಾಜಿ ಶಾಸಕಿ ಪೂರ್ಣಿಮಾ, ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಉಪಮೇಯರ್ ಆನಂದ್ ಕುಮಾರ್, ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ, ರಾಧಕೃಷ್ಣ ವಾರ್ಡ್ ಕಾಂಗ್ರೆಸ್ ಮುಖಂಡ ಎನ್ ಎಂ ಗಿರಿ, ಜಿಲ್ಲಾಧ್ಯಕ್ಷ ಅಬ್ದುಲ್ ವಾಜೀದ್, ಬಾಲಾಜಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *