ಡಾ. ಶೀಲಾದೇವಿ ಮಳೀಮಠ –

ಒಂದು ಕ್ಲಿಪ್ತ ವ್ಯಕ್ತಿಚಿತ್ರ

ಇವರನ್ನು ತಟ್ಟನೆ ನೋಡಿದರೆ ಸಾಮಾನ್ಯ ಭಾರತೀಯ ನಾರಿಯನ್ನು ನೋಡಿದ ಹಾಗೆಯೇ ಆಗುತ್ತದೆ. ಇವರನ್ನು ಮಾತಿಗೆ ಎಳೆದರೆ ಇವರ ಜ್ಞಾನಪ್ರಪಂಚ, ತನ್ನ ವಿದ್ವತ್ ವಿಶ್ವರೂಪವನ್ನು ತಳೆಯುತ್ತಾ, ಬೆಳಕಿನ ಲೇಸರ್ ಕಿರಣಗಳಂತೆ, ನಮ್ಮೆದುರು ತೆರೆದುಕೊಳ್ಳುತ್ತಾ ಸಾಗುತ್ತದೆ. “ಅದ್ಭುತ ಎನ್ನುವುದು ಸರಳತೆಯ ಮತ್ತೊಂದು ಮೂರ್ತರೂಪ” ಎನ್ನುವ ಮಾತನ್ನು ಇವರನ್ನು ನೋಡಿಯೇ ಹೇಳಿರಬೇಕು ಅನ್ನಿಸುತ್ತದೆ. ಇವರ ಸೌಜನ್ಯಭರಿತ, ಸವಿನಯಪೂರ್ವಕ ಮತ್ತು ಸಮಯಪ್ರಜ್ಞೆಯನ್ನು ಪ್ರತಿ ಪದಪುಂಜದಲ್ಲಿಯೂ ಹೊರಸೂಸುವ ಮೆಲ್ನುಡಿಗಳು, ಇವರಲ್ಲಿರುವ ಸಂಸ್ಕಾರದ ಗಾಢ ಛಾಯೆಯನ್ನು, ಇವರೊಟ್ಟಿಗೆ ಸಂವಾದದಲ್ಲಿ ತಲ್ಲೀನರಾದವರನ್ನು ತಟ್ಟುತ್ತಾ, ತೀಡುತ್ತಾ, ಸಾಗುತ್ತದೆ. ಸಂವಾದದ ಕೊನೆಯಲ್ಲಿ ಎಂತಹುದೋ ಧನ್ಯತೆಯ ಭಾವಕ್ಕೆ, ಇವರೊಟ್ಟಿಗೆ ಸಂವಾದ ನಡೆಸಿದವರು ಒಳಗಾಗುತ್ತಾರೆ. ಈ ಎಲ್ಲಾ ಕ್ರಿಯೆಗಳೂ ಅನೈಚ್ಛಿಕ ನೆಲೆಯಲ್ಲಿಯೇ, ನೈಜ ಸಮಯದಲ್ಲಿಯೇ ಘಟಿಸುತ್ತವೆ.

ನಾನು ಮೇಲೆ ವಿವರಿಸಿದ ಘನವ್ಯಕ್ತಿತ್ವದ ಧಣಿ, ನಮ್ಮೆಲ್ಲರ ಅಂತ್ಯವಿಲ್ಲದ ಹೆಮ್ಮೆಗೆ ಕಾರಣರಾದ, ಡಾ. ಶೀಲಾದೇವಿ ಮಳೀಮಠರವರು. “ಒಬ್ಬ ಹೆಣ್ಣು ವಿದ್ಯಾವಂತಳಾದರೆ ಆಕೆಯ ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ” ಎನ್ನುವ ಜನಪ್ರಿಯ ನಾಣ್ನುಡಿಯ ವಿಸ್ತಾರದ ಹರಿವನ್ನು ನಾವು ಶೀಲಾ ಮೇಡಂನಲ್ಲಿ ಸಾಕ್ಷಾತ್ಕರಿಸುತ್ತೇವೆ. ತಮ್ಮ ದಣಿವರಿಯದ ಸಾರ್ಥಕ ಶ್ರಮದ ಕಾರಣ ಮೇಡಂ ಇಂದು ಒಂದು ಇಡೀ ತಲೆಮಾರಿನ ಜನರನ್ನು ಸುಶಿಕ್ಷಿತರನ್ನಾಗಿ ಮಾಡಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದ ಅನೇಕ ಪ್ರತಿಭೆಗಳಿಗೆ, ಹೇರಳವಾದ ಅವಕಾಶಗಳನ್ನು ನೀಡಿ, ಅವರ ಬಹುಮುಖದ ಸಮಾಜಮುಖೀ ಬದುಕಿಗೆ ಪ್ರೇರಣಾ ಶೋತ್ರುವಾಗಿದ್ದಾರೆ. ಕಡಲಾಚೆಯ ಕನ್ನಡ ಮನಸ್ಸುಗಳಿಗೆ ಶರಣ ಚಿಂತನೆಯ ಸಿಂಚನವನ್ನು ಧಾರೆಯೆರೆದಿದ್ದಾರೆ. ಜಗದಗಲ ಮಂಟಪವೇ ಮೊದಲಾದ ಸೃಜನಾತ್ಮಕ, ಸದುದ್ದೇಶಪೂರಿತ ಸಂಘಟನೆಗಳ ಮೂಲಕ, ಸಾವಿರಾರು ಸಹೃದಯರ, ಸಾಹಿತ್ಯಾಸಕ್ತರ, ಶರಣರ ಮನಸ್ಸುಗಳಲ್ಲಿ ಜ್ಞಾನದೀವಿಗೆಯನ್ನು ಹೊತ್ತಿಸಿ, ಅದನ್ನು ಪ್ರಜ್ವಲವಾಗಿ ಬೆಳಗಿಸಿದ ಕೀರ್ತಿಯನ್ನೂ ಸದೈವ ತಮ್ಮದಾಗಿಸಿ ಕೊಂಡಿದ್ದಾರೆ “ವಚನ ಸಾಹಿತ್ಯದ ನಡೆದಾಡುವ ಗಣಕಯಂತ್ರ”, ಮಳೀಮಠ ಮೇಡಂ.

ಕನ್ನಡದ ಪ್ರಾಧ್ಯಾಪಕರಾಗಿ, ಸುಧೀರ್ಘ ವೃತ್ತಿಜೀವನವನ್ನು ವ್ಯಥಿಸುತ್ತಾ ಬಂದಿರುವ ಶೀಲಾ ಮೇಡಂ, ಕೇವಲ ತಾನು ಬೋಧಿಸಿದ ಮಕ್ಕಳಿಗೆ ಅವರ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತಹ ಆದರ್ಶ ಶಿಕ್ಷಕಿಯಾಗಿಯೇ ಗುರುತಿಸಿ ಕೊಂಡವರಲ್ಲ. ನೂರು, ಸಾವಿರದ ಸಂಖ್ಯೆಯಲ್ಲಿ ಅಂತಹ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ನೆಲೆಗಳನ್ನು ಅರಸುವುದರಲ್ಲಿಯೂ ಊರುಗೋಲಿನ ಕೆಲಸ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಾಗದು. ತನ್ನ ಅನೇಕ ವಿದ್ಯಾರ್ಥಿಗಳನ್ನು ಸಂಶೋಧನೆಗಳಂತಹ ಗಹನ ವಿಷಯಗಳ ಹಾದಿಯಲ್ಲಿ ನಡೆಸಿದ ಮತ್ತು ಅವರಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ತಾವೇ ಖುದ್ದು ಸಂಶೋಧನಾ ಮಾರ್ಗದರ್ಶಕರಾಗಿ, ಡಾಕ್ಟರೇಟ್ ಪದವಿಗಳವರೆಗೆ, ಅವರ ಬೆರಳುಗಳನ್ನು ಹಿಡಿದು ಕರೆದುಕೊಂಡು ಹೋಗಿರುವುದು ಅಲ್ಪ ಸಾಧನೆಯೇನಲ್ಲ, ಬದಲಾಗಿ ಸಾಧನೆಯ ಶಿಖರರೂಪದಲ್ಲಿರುವಂತಹುದು. ಸ್ವಸ್ಥ ಮನಸ್ಸಿನ ನೂರು ಮುಖಗಳ ಢಾಳಾದ ವ್ಯಕ್ತಿತ್ವದ ಅನಾವರಣ ಪ್ರಜ್ಞೆಯಲ್ಲಿ ಮಿಂದೆದ್ದಿರುವಂತೆ ತೋರುವ ಮೇಡಂ, ಒಬ್ಬ ಅಪ್ರತಿಮ ಸಾಧಕಿಯ ರೂಪದಲ್ಲಿ ನಮ್ಮ ಕಣ್ಣೆದುರು ನಿಲ್ಲುತ್ತಾರೆ. ಒಬ್ಬ ಗೃಹಿಣಿಯಾಗಿ, ತಾಯಿಯಾಗಿ ತಮ್ಮ ಕರ್ತವ್ಯಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಲೇ, ಶರಣಲೋಕದ ಧ್ರುವತಾರೆಯ ಮಟ್ಟಕ್ಕೆ ಏರಿದ ಶೀಲಾದೇವಿಯವರ ಸಾಧನೆಯ ಹಿಂದೆ ಅವರ ಅವಿರತ ಕಾಯಕಶ್ರದ್ಧೆ ಒಡೆದು ಕಾಣುತ್ತದೆ. “ಜ್ಞಾನವನ್ನು ಜಂಗಮದಲ್ಲಿ ಹಂಚಬೇಕು” ಎನ್ನುವ ತಮ್ಮ ಅತುಲ ಕುಕ್ಕಲಾತಿಯಲ್ಲಿ ದಾಸೋಹಪ್ರಜ್ಞೆಯನ್ನೂ ಧಾರಾಳವಾಗಿ ಪ್ರದರ್ಶಿಸುತ್ತಿರುವ ಡಾಕ್ಟರ್ ಅವರ ವ್ಯಕ್ತಿಚಿತ್ರವನ್ನು ಕಡೆಯಲು ಎಲ್ಲಿಂದ ಅಕ್ಷರಗಳ ಹುಳಿಯನ್ನು ಬಾರಿಸಲು ಶುರು ಹಚ್ಚಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ನಾನೂ ಬಿದ್ದಿದ್ದೇನೆ.

ಮೇಡಂ ಸಂಘಟನಾ ಚತುರರು. ಹಲವಾರು ಸಂಘಟನೆಗಳನ್ನು ಕಟ್ಟಿ ಬೆಳೆಸಿದವರು. ಜನಸಮೂಹಕ್ಕೆ ಸಾತ್ವಿಕ ವಿಚಾರಗಳ ರಸದೂಟವನ್ನು ಮಮತಾ ಪೂರ್ವಕವಾಗಿ ಉಣಬಡಿಸಿದವರು. ತಮ್ಮಿಂದ ಪ್ರಚಾರಕ್ಕೆ ಬಂದ ಪ್ರತಿಭೆಗಳ ಉನ್ನತಿಯನ್ನು, ಉತ್ಕರ್ಷವನ್ನು ಕಂಡು ಬೆನ್ನು ತಟ್ಟಿದವರು. ಹರ್ಷದ ಹೂಮಳೆಗೈದವರು. ಒಬ್ಬ ಹೆಣ್ಣಿನಲ್ಲಿರುವ ಪ್ರಕೃತಿಜನ್ಯ ಸೃಜನಶೀಲತೆ ಸರಿಯಾದ ದಿಕ್ಕಿನಲ್ಲಿ ಹರಿದಾಗ ಎಂತಹ ಸತ್ಪರಿಣಾಮಗಳು ಅವಳ ಸುತ್ತಲ ಸಮಾಜ ಜೀವನದಲ್ಲಿ ಘಟಿಸುತ್ತವೆ ಎನ್ನುವುದಕ್ಕೆ ಸಾಕ್ಷೀಭೂತರಾದವರು. ಅವಜ್ಞೆಯ ಕಾರಣದಿಂದಾಗಿ ಕಮರಿ ಹೋಗಬಹುದಾಗಿದ್ದ ಅಸಂಖ್ಯ ಪ್ರತಿಭೆಯ ಸಸಿಗಳಿಗೆ ಜಲಪೋಷಣ ಮಾಡಿ, ಅವುಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದವರು. ಹೀಗಾಗಿ ಮೇಡಮ್ ಒಬ್ಬ ಉನ್ನತ ಶ್ರೇಣಿಯ ಮಾಲಿಯೂ ಹೌದು. ಇವರ ಹೂದೋಟದ ವಿವಿಧ ಪುಷ್ಪಗಳು ತಮ್ಮ ಸುವಾಸನೆಯ ಕಾರಣದಿಂದಾಗಿ ನಮ್ಮ ಮನಸ್ಸನ್ನು ಸೂರೆಗೊಳ್ಳುವ ಬದಲಾಗಿ ತಮ್ಮ ವಿಚಾರಶಕ್ತಿಯ ಕಾರಣದಿಂದಾಗಿ ನಮ್ಮನ್ನು ತಮ್ಮ ಆಪ್ತವಲಯದಲ್ಲಿ, ಅನಾಯಾಸವಾಗಿ, ಸಮೀಕರಿಕೊಳ್ಳುತ್ತವೆ.

ಸಹಜವಾಗಿಯೇ ಇವರು ತಮ್ಮ ಸೃಜನಾತ್ಮಕ ಅಭಿವ್ಯಕ್ತಿ ಹಾಗೂ ಕ್ರಿಯೆಗಳ ಮೂಲಕ ಮಾಡಿದ ಸಮಾಜಮುಖೀ ಕೆಲಸ ಕಾರ್ಯಗಳಿಗೆ ವ್ಯಾಪಕವಾದ ಪ್ರಶಂಶೆಗಳ ಮಹಾಪೂರವೇ ಹರಿದು ಬಂದಿದೆ. ಇವರ ಮಹೋನ್ನತ ಕಾರ್ಯಗಳಿಂದ ಉಪಕೃತವಾದ ಸಮಾಜ, ಇವರಿಗೆ ಅನೇಕ ಪ್ರಶಸ್ತಿಗಳನ್ನೂ, ಬಿರುದು- ಬಾವಲಿಗಳನ್ನೂ ಪ್ರಧಾನ ಮಾಡುವ ಮೂಲಕ ತನ್ನನ್ನು ತಾನೇ ಗುರುತಿಸಿ ಕೊಂಡಿದೆ, ತನ್ನನ್ನು ತಾನೇ ಗೌರವಿಸಿಕೊಂಡಿದೆ. ಮೇಡಂರವರಿಗೆ ಬಂದ ಪ್ರಶಸ್ತಿ, ಪುರಸ್ಕಾರಗಳ ಪಟ್ಟಿ ಸಾಕಷ್ಟು ಸುಧೀರ್ಘವಾಗಿದೆಯಾದರೂ, ಶೀಲಾದೇವಿಯವರ ಬಹುಮುಖ ಪ್ರತಿಭೆಯನ್ನು ಪೂರ್ಣ ರೂಪದಲ್ಲಿ ಅಳೆಯುವುದರಲ್ಲಿ ಇವು ಸೋತಿವೆ ಎಂದೇ ನನ್ನ ಪಾರದರ್ಶಕ ಅಭಿಪ್ರಾಯ. ಇಂತಹ ಸಾಧಕಿಯ ಸಾಧನೆಗಳನ್ನು ಪ್ರಶಸ್ತಿಗಳ ಬೆಳಕಿನಲ್ಲಿ ನೋಡದೆ ಇವರಿಂದ ಉಪಕೃತರಾದ ತಲೆಮಾರುಗಳ ಸದಭಿಪ್ರಾಯಗಳ ಹಿನ್ನೆಲೆಯಲ್ಲಿ ನೋಡಿದರೆ, ಇವರ ಹಿರಿವ್ಯಕ್ತಿತ್ವದ ಸತ್ಯದ ಹೆಚ್ಚಿನಂಶ ವಿದಿತವಾದೀತು ಎಂದು ನಾನಾದರೂ ಭಾವಿಸಿದ್ದೇನೆ.

ಮತ್ತದೇ ಕೋರಿಕೆ, “ಕ್ಲೀಷೆ” ಎಂದೇ ಹೇಳಬೇಕಾದ ಒತ್ತಾಸೆಯ ಸಾಂಪ್ರದಾಯಿಕ ನುಡಿಗಳೊಂದಿಗೆ, ನನ್ನ ಈ ಕ್ಲಿಪ್ತ ವ್ಯಕ್ತಿಚಿತ್ರಕ್ಕೆ ಮುಕ್ತಾಯ ಹಾಡುತ್ತೇನೆ. ತಮಗೆ ಶಕ್ಯವಿರುವ ಎಲ್ಲವನ್ನೂ, ತಮ್ಮ ಸಮಸ್ತ ಶಕ್ತಿ, ಚೈತನ್ಯವನ್ನೂ ಧಾರೆಯೆರೆದು ಸಾಧಿಸಿರುವ ಈ ಮಹಾಶಕ್ತಿ ಸ್ವರೂಪಿಣಿಗೆ, “ಇವರಿಂದ ಮತ್ತಷ್ಟು ಮಗದಷ್ಟು ಸಮಾಜಕ್ಕೆ ಸೇವೆ ಸಲ್ಲಲಿ” ಎನ್ನುವ ಸವಕಲು ಆಶಯವನ್ನು ಒಕ್ಕಣಿಸುವಾಗ, ನನ್ನ ಸಾಕ್ಷಿಪ್ರಜ್ಞೆ ಇನ್ನಿಲ್ಲದ ತೊಳಲಾಟಕ್ಕೆ, ನರಳಾಟಕ್ಕೆ ಸಿಕ್ಕಿ ಒದ್ದಾಡುತ್ತಿದೆ. ಆದರೂ, ಬಗೆಬಗೆದು ನೀಡಿದರೂ ಮತ್ತಷ್ಟು ಮಗದಷ್ಟು ನೀಡುವ ಕಸುವುಳ್ಳ ಅಕ್ಷಯಪಾತ್ರೆಯನ್ನು ಸ್ಮರಿಸುತ್ತಾ, ಡಾಕ್ಟರ್ ಶೀಲಾ ಮಳೀಮಠರವರಿಗೆ, ನನ್ನಿಂದ ಈ ಸಂಪ್ರದಾಯಬದ್ಧ ಕೋರಿಕೆಯನ್ನು, ಆರ್ತಮನಸ್ಸಿನ ಮುಖೇನ ಸಲ್ಲಿಸುತ್ತಿದ್ದೇನೆ, ದಯವಿಟ್ಟು ಸ್ವೀಕರಿಸಿ ನನ್ನನ್ನು ಹರಸಿ ಮೇಡಂ.

ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್
(ನಿಮ್ಮಿಂದ ಉಪಕೃತವಾದ ಅಸಂಖ್ಯರಲ್ಲಿ ಒಬ್ಬ)

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

9035282296

7349337989

Leave a Reply

Your email address will not be published. Required fields are marked *