
ಮಗುವಾಗಿದ್ದ ಕೃಷ್ಣ ಬಾಲಕನಾಗಿದ್ದಾನೆ. ಅವನ ತುಂಟಾಟಗಳು ಮಿತಿಮೀರಿದೆ.ಗೋಪಿಕೆಯರು ನಿತ್ಯವೂ ಕೃಷ್ಣನ ಮೇಲಿನ ದೂರನ್ನು ಯಶೋದಾ ತಾಯಿಗೆ ಹೇಳುತ್ತಿದ್ದರು. ಯಶೋಧಾ ತಾಯಿ ಬೈಯ್ಯುವುದನ್ನು ವಿಧೇಯನಾಗಿ ಕೇಳಿಕೊಂಡು, ಮನೆ ಹೊಸಿಲು ದಾಟುತ್ತಿದ್ದಂತೆ ಆಟ ಶುರು ಮಾಡುತ್ತಿದ್ದ.ಆ ದಿನ ಕೃಷ್ಣ ಮತ್ತು ಅವನ ಗೆಳೆಯರು ಹಸು ಕರುಗಳನ್ನು ಮೇಯಿಸಲು ಕಾಡಿಗೆ ಬರುತ್ತಾರೆ. ಅವನ್ನು ಮೇಯಲು ಬಿಟ್ಟು ಹುಡುಗರೆಲ್ಲ ಚಿನ್ನಿದಾಂಡು, ಬುಗರಿ, ಆಡತೊಡಗಿದರು. ಬಹಳ ಹೊತ್ತು ಆಡಿದಮೇಲೆ ಬಲರಾಮನು, ಕೃಷ್ಣ ನನಗೆ ತುಂಬ ಹಸಿವಾಗ್ತಿದೆ, ಉಳಿದ ಹುಡುಗರು ಹಸಿವು ಕೃಷ್ಣ ಎಂದವು. ಕೃಷ್ಣ ಸುತ್ತಲೂ ನೋಡಿ ಮಾವಿನ ಹಣ್ಣಿನ ಮರ ಹುಡುಕಿದ. ಪುಟ್ಟ ಪುಟ್ಟ ಕಲ್ಲುಗಳನ್ನು ಗುಡ್ಡೆಹಾಕಿಕೊಂಡು, ಕವಣೆ ಕೋಲಿನಿಂದ ಹಣ್ಣಿಗೆ ಹೊಡೆದು ಸಾಕಷ್ಟು ಮಾವಿನಹಣ್ಣುಗಳನ್ನು ಉದುರಿಸಿದ ಎಲ್ಲಾ ಹುಡುಗರು ಸಿಹಿಯಾದ ಮಾವಿನಹಣ್ಣನ್ನು ಹೊಟ್ಟೆ ತುಂಬುವಷ್ಟು ತಿಂದವು. ಗೆಳೆಯರು ಕೃಷ್ಣಾ ನಾಳೆನೂ ಇಲ್ಲಿಯೇ ಬರೋಣ ಎಂದಾಗ, ಬೇಡ ನಾಳೆ ನಿಮಗೆಲ್ಲಾ ಒಳ್ಳೆಯ ಭೋಜನ ಕೊಡಿಸುತ್ತೇನೆ, ಹುಡುಗರೆಲ್ಲ ಎಲ್ಲಿ ಎಂದವು. ಅದೆಲ್ಲ ನಾಳೆ ಗೊತ್ತಾಗುತ್ತೆ ಎಂದು ಮನೆಗೆ ಕರೆದುಕೊಂಡು ಹೊರಟ.
ಎಲ್ಲಾ ಗೋಪಿಕೆಯರ ಮನೆಯಲ್ಲೂ ಕೃಷ್ಣನ ತುಂಟಾಟದ ಮಾತುಕತೆ ನಡೆಯುತ್ತಿತ್ತು. ಕೃಷ್ಣ ಯಾರ ಮನೆಗೆ ಯಾವಕಡೆಯಿಂದ ಯಾವಾಗ ಬರುತ್ತಾನೋ ಗೊತ್ತಿಲ್ಲ. ಅದು ಒಬ್ಬನೇ ಬರದೆ, ಗೆಳೆಯರ ಹಿಂಡು ಕಟ್ಟಿಕೊಂಡು ಬರುತ್ತಿದ್ದ. ತಾನು ತಿನ್ನುವುದಕ್ಕಿಂತ ಹಾಳು ಮಾಡುವುದೇ ಜಾಸ್ತಿಯಾಗಿತ್ತು. ಇಡೀ ಮನೆಯನ್ನು ಜಾಲಾಡಿ, ಹಾಲು, ಮೊಸರು, ಬೆಣ್ಣೆ, ತುಪ್ಪವಂತೂ ಅವನ ಕಣ್ತಪ್ಪಿಸಿ ಎಲ್ಲೂ ಇಡಲು ಸಾಧ್ಯವಿರಲಿಲ್ಲ. ಎಲ್ಲಾ ಕೆಳಗೆ ಬೀಳಿಸಿ, ಹರಡಿ, ತನ್ನ ಗೆಳೆಯರಿಗೆ ಕೊಟ್ಟು, ಮತ್ತಷ್ಟು ಬೆಕ್ಕು ,ದನಕರುಗಳಿಗೆ ತಿನ್ನಿಸಿ ಕಾಣದಂತೆ ಮಾಯವಾಗುತ್ತಿದ್ದ.
ಎಲ್ಲಾ ಗೋಪಿಕೆಯರಿಗೆ ಇದೊಂದೇ ಚಿಂತೆಯಾಗಿತ್ತು. ಒಮ್ಮೆ ಗೋಪಿಕೆ ಕೃಷ್ಣನನ್ನು ಬರದಂತೆ ತಡೆಯಲು ಉಪಾಯ ಮಾಡಿದಳು. ಬೆಳಿಗ್ಗೆ ಎದ್ದವಳೇ ಎಲ್ಲಿಂದಲೋ ಎರಡು ಬಾಳೆ ಕಂಬ, ಮಾವಿನ ಟೊಂಗೆ ತಂದು ಮನೆ ಮುಂದೆ ಬಾಳೆ ಕಂಬ ನೆಟ್ಟು, ಬಾಗಿಲಿಗೆ ತೋರಣ ಕಟ್ಟಿ, ಮಾವಿನ ಟೊಂಗೆ ಸಿಗಿಸಿದಳು. ಅಷ್ಟು ಹೊತ್ತಿಗೆ ಕೃಷ್ಣ ಬಂದ. ನೋಡಪ್ಪ ಕೃಷ್ಣ ಈ ದಿನ ನಮ್ಮ ಮನೆಯೊಳಗೆ ಬರಬೇಡ, ಈ ದಿನ ದೊಡ್ಡ ಪೂಜೆ ಇಟ್ಟುಕೊಂಡಿದ್ದೇವೆ. ಮಡಿಯಲ್ಲಿ ಅಡಿಗೆ ನೈವೇದ್ಯ ಗಳಾಗಬೇಕು ಎಂದಳು. ಕೃಷ್ಣನು ಹೌದಾ ಯಾರು ಪುರೋಹಿತರು ಎಂದು ಕೇಳಿದ. ಮನೆಯಲ್ಲಿ ಪೂಜೆಯೇ ಇಲ್ಲ , ಯೋಚಿಸಿ ನೆನಪಿಗೆ ಬಂದ ಪಕ್ಕದ ಹಳ್ಳಿ ಶ್ರೀನಿವಾಸ ಶಾಸ್ತ್ರಿಗಳ ಹೆಸರು ಹೇಳಿದಳು. ಕೃಷ್ಣನು ನಾನು ಹೋಗಿ ಸ್ವಲ್ಪ ಹೊತ್ತಿಗೆ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೊರಟ. ಹಳ್ಳಿಯಲ್ಲಿದ್ದ ಶಾಸ್ತ್ರಿಗಳ ಮನೆಗೆ ಹೋಗಿ, ಈ ದಿನ ನಮ್ಮ ಹಳ್ಳಿಯಲ್ಲಿ ಪೂಜೆ ಇಟ್ಟುಕೊಂಡಿದ್ದ ಮನೆಯವರಿಗೆ ‘ವೃದ್ಧಿ’ ಬಂದಿದೆ. ಈ ದಿನ ಪೂಜೆ ಇರುವುದಿಲ್ಲ ನಿಮಗೆ ಬರಲು ಇನ್ನೊಂದು ದಿನ ಹೇಳುತ್ತಾರಂತೆ ಎಂದ. ಯಾವ ಮನೆಯಪ್ಪ ನನಗೆ ನೆನಪಿಲ್ಲ ಒಳ್ಳೆದಾಯ್ತು ಬಿಡು ಎಂದರು .
ಕೃಷ್ಣ ಮತ್ತೆ ಗೋಪಿಕೆ ಮನೆಗೆ ಬಂದು ಈ ದಿನ ಶಾಸ್ತ್ರಿಗಳು ಪೂಜೆ ಮಾಡಲು ಬರುವುದಿಲ್ಲವಂತೆ ಅವರಿಗೆ ಪುರುಡು ಬಂದಿದೆಯಂತೆ. ನೀವು ಪೂಜೆ ನಿಲ್ಲಿಸುವುದು ಬೇಡ ನಾನೇ ಮಾಡುತ್ತೇನೆ. ಸ್ವಲ್ಪ ಹೊತ್ತಿಗೆ ಬರುತ್ತೇನೆ ಎಂದು ಹೊರಟೇ ಬಿಟ್ಟ. ಅಯ್ಯೋ ದೇವರೇ ಏನೋ ಮಾಡಲು ಹೋಗಿ ಏನೋ ಆಗುತ್ತಿದೆಯಲ್ಲ ಎಂದು ಗೋಪಿಕೆ ಹೆದರಿದಳು. ಕೃಷ್ಣ ತಾನು ಹಾಕಿಕೊಂಡ ಶರಟಿನ ಮೇಲೆ ಮಗುಟ, ಶಲ್ಯ, ಸುತ್ತಿಕೊಂಡ, ಹಣೆಗೆ ಗಂಧ, ಕುಂಕುಮ ಇಟ್ಟುಕೊಂಡ, ಗ್ರಾಮದ ಹುಡುಗರನ್ನೆಲ್ಲಾ ಕರೆದುಕೊಂಡು ಗೋಪಿಕೆಯ ಮನೆಗೆ ಬಂದನು.
ಪೂಜೆಗೆ ಬೇಕಾದ ಹೂ, ತುಳಸಿ, ಹಣ್ಣು, ಪಂಚಪಾತ್ರೆ ಉದ್ದರಣೆ, ಗಂಧ, ಸಾಣೆ ಕಲ್ಲು, ಕೂರಲು ಮಣೆ ಹೀಗೆ ಎಲ್ಲವನ್ನೂ ಕೇಳಿ ಪಡೆದು ಪೂಜೆ ಮಾಡಲು ಕುಳಿತ. ಸಂಕಲ್ಪ ಮಾಡಿಕೊಂಡು ದೇವರ ಅಭಿಷೇಕ ಮಾಡಲು ಪಂಚಾಮೃತ ತರಲು ಹೇಳಿದ. ಗೋಪಿಕೆ ಹಾಗೂ ಅವಳ ಗಂಡ ಹೆದರಿ ಬಿಟ್ಟರು. ಆದರೂ ಸಾವರಿಸಿಕೊಂಡು ಮನೆಯಲ್ಲಿದ್ದ ಸ್ವಲ್ಪ ಹಾಲು, ಮೊಸರು, ತುಪ್ಪ,ಜೇನುತುಪ್ಪ, ಸಕ್ಕರೆ ಎಲ್ಲಾ ಕೊಟ್ಟರು. ಹಾಲಿಗೆ ಹೂವನ್ನು ಅದ್ದಿ ಕ್ಷೀರಂ ಸಮರ್ಪಯಾಮಿ ಎಂದು ಹಾಲು ಪ್ರೋಕ್ಷಣೆ ಮಾಡಿ ಉಳಿದ ಹಾಲನ್ನು ತಾನೇ ಕುಡಿದ. ಹಾಗೇ ದಧ್ನಾ, ಆಜ್ಯೇ, ಮಧು, ಶರ್ಕರ, ಫಲಸ್ನಾನಂ ಸಮರ್ಪಯಾಮಿ ಎಂದು ಎಲ್ಲವನ್ನೂ ಹೂವಿನಿಂದ ಪ್ರೋಕ್ಷಣೆ ಮಾಡಿ ತಾನೆ ಕುಡಿಯುತ್ತಿದ್ದ. ಕೊನೆಯಲ್ಲಿ
ಶುದ್ಧೋದಕ ಸ್ನಾನ ಎಂದು ಬಂದಾಗ ನೀರು ಉದ್ಧರಣೆಯಲ್ಲಿ ಹಾಕಿ ಉಳಿದಿದ್ದನ್ನು ಹಾಗೆ ಇಟ್ಟಾಗ, ಗೋಪಿಕೆ ಮತ್ತು ಅವಳ ಗಂಡ ನೀರನ್ನು ಯಾಕೆ ಕುಡಿಯುತ್ತಿಲ್ಲ ಕೃಷ್ಣ ಎಂದು ಕೇಳಿದರು. ಅದು ನಿಮಗೆಲ್ಲ ತೀರ್ಥ ಕೊಡಲು ಬೇಕಲ್ಲ ಎಂದ. ಅಂತೂ ಕೃಷ್ಣ ಪೂಜೆ ಮಾಡಿ ನೈವೇದ್ಯ ತರಲು ಹೇಳಿದ. ಇನ್ನು ಮುಚ್ಚಿಟ್ಟರೆ ಪ್ರಯೋಜನವಿಲ್ಲ ಆಗಲೇ ಹುಡುಗರ ದಂಡು ಬಂದಿದೆ ಅವುಗಳಿಗೆಲ್ಲಾ ಊಟ ಹಾಕುವುದೆಂದರೆ ತಮಾಷೆ ಹೋಗಿ ಅಮಾಸೆ ಆಗಿಬಿಡುತ್ತೆ ಎಂದುಕೊಂಡ ಗೋಪಿಕೆ ಮತ್ತು ಆಕೆಯ ಗಂಡ ಕೃಷ್ಣನಲ್ಲಿ ಕ್ಷಮೆ ಕೇಳಿದರು. ಕೃಷ್ಣನು ಕಣ್ಣು ಮುಚ್ಚಿ ಅನ್ನಪೂರ್ಣೆಯನ್ನು ಧ್ಯಾನಿಸಿದ. ಬಂಗಾರದ ತಟ್ಟೆ ತುಂಬಾ ಪಂಚಭಕ್ಷ ಪರಮಾನ್ನಗಳನ್ನು ಕ್ಷಣದಲ್ಲೇ ತಂದಿಟ್ಟಳು. ನೈವೇದ್ಯ ಮಂಗಳಾರತಿ, ಮಹಾಮಂಗಳಾರತಿ ಎಲ್ಲಾ ಕ್ರಮವಾಗಿ ಮಾಡಿದ.
ಈಗ ಎಲ್ಲರೂ ಊಟಕ್ಕೆ ಕೂರುವ ಸಮಯ. ಕೃಷ್ಣನ ಆದೇಶದಂತೆ ಬಂದ ಹುಡುಗರು ಎಲ್ಲರಿಗೂ ಎಲೆ ಹಾಕಿದವು. ಅನ್ನಪೂರ್ಣ ತಂದಿಟ್ಟ ತಟ್ಟೆಯಲ್ಲೇ ತೆಗೆದು ತೆಗೆದು ಹಾಕುತ್ತಾ ಬಂದರು. ಯಾರು ಎಷ್ಟೇ ಜನ ಬಂದು ತಿಂದರು ಅದರೊಳಗೆ ಅಕ್ಷಯವಾಗುತ್ತಲೇ ಇತ್ತು. ಹುಡುಗರಲ್ಲದೆ ಊರವರೆಲ್ಲ ಬಂದು ಸಂತೋಷದಿಂದ ಊಟ ಮಾಡಿದರು. ಆ ಮನೆಯ ಗೋಪಿಕೆ ಮತ್ತು ಆಕೆಯ ಗಂಡನನ್ನು ನನ್ನ ಪೂಜೆ ಹೇಗಾಯಿತು ಎಂದು ಕೇಳಿದ. ಗೋಪಿಕೆ ಮತ್ತು ಅವಳ ಗಂಡ, ಕೃಷ್ಣ ಇನ್ನು ಮೇಲಿಂದ ನೀನೇ ಬಂದು ದಿನಾ ಪೂಜೆ ಮಾಡು ಎಂದು ಸಂತೋಷದಿಂದ ಹೇಳಿ, ಕೃಷ್ಣನಲ್ಲಿ ಕ್ಷಮೆ ಕೇಳಿ, ನೀನು ಕೇವಲ ಬಾಲಕನಲ್ಲ. ಮಹಾವಿಷ್ಣುವೇ ಅವತರಿಸಿ ಬಂದಿರುವ ಎಂದು ಕೈಮುಗಿದರು. ಕೃಷ್ಣನು ಏನೋ ಗೊತ್ತಿಲ್ಲದ ಪುಟ್ಟ ಬಾಲಕನಂತೆ, ಗೋಪಿಕೆಗೆ ಇನ್ನೊಂದು ಸಾರಿ ಪೂಜೆ ಮಾಡಿದ್ರೆ ನನ್ನೇ ಕರೆಯಿರಿ ಎಂದು ನಗುತ್ತಾ ಹುಡುಗರ ದಂಡಿನೊಂದಿಗೆ ಹೊರಟುಹೋದನು.
ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ
ಸಾಲಿಗ್ರಾಮಕೆ ಹಾಲಭಿಷೇಕ ಕೋಲಣ್ಣ ಕೋಲ, ಕೋಲಣ್ಣ ಕೋಲ,
ಅಟ್ಟದ ಮೇಲಿನ ನೆಲವಲ್ಲಾಡಿಸಿ ಸಕ್ಕರೆಗಳ ಸವಿದಾ
ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೇಕ್ಕೇನೋ ಎಂದ!
ಬೇಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ
ಮಕ್ಕಳು ಮಲಗ್ಯಾರೆಬ್ಬಿಸಬೇಡೆನೆ ಬಟ್ಟಲು ಬಾರಿಸಿದಾ!
ಹಪ್ಪಳ ಸಂಡಿಗೆ ಹರವಿದ ಮನೆಯಲಿ ತಪ್ಪದೆ ತಾ ಪೋದ
ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ
ಸಾರಿಸಿದ ಮನೆಯಲಿ ಸುಣ್ಣವ ಚೆಲ್ಲಿ ಧೂಳನು ಹರವಿದಾ
ಕಾಲಲ್ಲಿ ರಂಗೋಲಿ ಹಾಕಿದೆ ಯಶೋದೆ ನೋಡು ಬಾ ಎಂದು ಕರೆದಾ!
ಅಭಿಷೇಕ ಕೆಂದು ಅಘ್ರೋದಕ ತಂದರೆ ಆಚಮನ ಮಾಡಿದಾ
ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ ಶ್ರೀ ತುಳಸಿಯ ತಾ ಮುಡಿದ!
ನೈವೇದ್ಯಕ್ಕೆಂದು ಅಮೃತಾನ್ನ ಮಾಡಲು ಬಾಯ್ತೆರೆದೆ ಎಂದಾ
ನೈವೇದ್ಯಕ್ಕೆಲ್ಲಣಿಯಾಗಿದೆ ಯಶೋದೆ ನೋಡು ಬಾ ಎಂದು ಕರೆದ!
ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ ಒಬ್ಬಂತೆ ತಾ ನಿಂತ
ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು ಹಬ್ಬವು ಏನೆಂದ!
ಒಬ್ಬನೇ ತಿಂದು ಒಳಗಿದ್ದವರಿಗೆ ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ ಅಜ್ಜನ ಮಗನೆಂದಾ!
ಉಪ್ಪು ಸಾಕು ಸಾಲದು ನೋಡೆನೆ ಅಪ್ಪಟವನೆ ಮೆದ್ದ
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ ನಿಮ್ಮಪ್ಪನ ಮಗನೆಂದಾ!