



ವಸತಿಗೃಹ ಉದ್ಘಾಟಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ :
ಹೆಬ್ಬಾಳ : ನಗರದ ಹೆಬ್ಬಾಳದ ಭೂಪಸಂದ್ರದ ನಂದಿನಿ ವಸತಿಗೃಹದ ಆವರಣದಲ್ಲಿ ಕೆಎಂಎಫ್ ನಿಂದ ನಿರ್ಮಿಸಲ್ಪಟ್ಟು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ದಿಂದ ನಿರ್ವಹಿಸಲ್ಪಡುವ ನೂತನ ವಿದ್ಯಾರ್ಥಿನಿಯರ ವಸತಿ ಗೃಹವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೋಮವಾರ ಸಂಜೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಬೆಂಗಳೂರು ನಗರದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಹೆಣ್ಣುಮಕ್ಕಳ ಹಿತದೃಷ್ಟಿಗಾಗಿ ಇಂದು ವಿದ್ಯಾರ್ಥಿನಿಯರ ವಸತಿಗೃಹ ಉದ್ಘಾಟಿಸಿರುವುದು ನಿಜಕ್ಕೂ ಸಂತೋಷ ಉಂಟು ಮಾಡಿದೆ. ಹಾಲು ಉತ್ಪಾದಕರ ಹಿತ ಕಾಯುವ ದಿಸೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಈ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ನಾಲ್ಕೂ ದಿಕ್ಕುಗಳ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಉತ್ಪಾದಕರ ಮಕ್ಕಳಿಗಾಗಿ ವಸತಿ ಗೃಹಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟ ನಿ.ದ ಅಧ್ಯಕ್ಷ, ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ‘ನಮ್ಮ ಒಕ್ಕೂಟದ ವತಿಯಿಂದ ಈ ಹಿಂದಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣದ ಉದ್ದೇಶಕ್ಕಾಗಿ ಯಲಹಂಕದಲ್ಲಿ ಜಾಗ ನೀಡಲು ಮನವಿ ಸಲ್ಲಿಸಲಾಗಿತ್ತು, ಇದುವರೆಗೂ ತಡೆಹಿಡಿಯಲಾಗಿದ್ದ ಜಾಗ ಮಂಜೂರಾತಿ ಪ್ರಕ್ರಿಯೆ ಇದೀಗ ಮಂಜೂರಾಗಿ, ನೋಂದಣಿ ಸಹ ಪೂರ್ಣಗೊಂಡಿದೆ. ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದಲ್ಲಿ ಕಳೆದ ಐದು ವರ್ಷಗಳಿಂದ ಇರುವ ಈಗಿನ ಆಡಳಿತ ಮಂಡಳಿಯ ಅವಧಿಯಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿರುವ ಹಲವು ಮಹತ್ವದ ಕಾರ್ಯಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಮಕ್ಕಳ ವ್ಯಾಸಂಗಕ್ಕೆ ಸಹಕರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ವಸತಿಗೃಹ ಆರಂಭಿಸಿರುವುದು ಸಕಾಲಿಕ ಮತ್ತು ಮಹತ್ವದ ಕಾರ್ಯವಾಗಿದೆ ಎಂದು ಒಕ್ಕೂಟದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎನ್.ಗೋಪಾಲಮೂರ್ತಿ, ಕಾರ್ಯದರ್ಶಿ ಡಾ.ಎ.ಸಿ.ಶ್ರೀನಿವಾಸ ಗೌಡ, ಖಜಾಂಚಿ ಕೆ.ವಿ.ಮುರಳಿ, ಒಕ್ಕೂಟದ ಸದಸ್ಯರಾದ ಕೆ.ಎನ್.ನಾಗರಾಜ್, ಜೆ.ಕಾಂತರಾಜ್, ಆರ್.ಶ್ರೀನಿವಾಸ್, ಎನ್.ಸಿ.ವೆಂಕಟೇಶ್, ಆದಿನಾರಾಯಣರೆಡ್ಡಿ, ಕಾಂತಮ್ಮ, ಎನ್.ನಾಗೇಶ್, ಜೈಸಿಂಹಕೃಷ್ಣಪ್ಪ, ವಿ.ಮಂಜುನಾಥ ರೆಡ್ಡಿ, ವೈ.ಬಿ.ಅಶ್ವಥನಾರಾಯಣ, ಡಿ.ವಿ.ಹರೀಶ್, ಎನ್.ಹನುಮೇಶ್, ಸುನಂದಮ್ಮ, ಯುನೂಸ್ ಷರೀಫ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
ಆರ್ ಹನುಮಂತು
9845085793
7349337989
9035282296