


ಮನವಿಗೆ ಸ್ಪಂದಿಸಿದ ಜಯಪ್ಪರೆಡ್ಡಿ ರವರಿಗೆ ಅಭಿನಂದಿಸಿದ ನಿವಾಸಿಗಳು :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕೆಂಪಾಪುರದ ಕಾಫಿ ಬೋರ್ಡ್ ಬಡಾವಣೆಯ ಜೈನ್ ಹೆರಿಟೇಜ್ ಶಾಲೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಬಂದ್ ಆಗಿದ್ದ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸುವ ಮೂಲಕ ಅಲ್ಲಿ ದಿನನಿತ್ಯ ಆಗುತ್ತಿದ್ದ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಸ್ಪಂದಿಸುವಂತೆ ಕಾಫಿ ಬೋರ್ಡ್ ಬಡಾವಣೆಯ ಸುತ್ತಮುತ್ತಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡರು ಭಾನುವಾರ ಇಲ್ಲಿನ ಉದ್ಯಾನವನದಲ್ಲಿ ಸಭೆ ಸೇರಿ, ಸಭೆಗೆ ಮಾಜಿ ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ ಯವರನ್ನು ಆಹ್ವಾನಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡರು.
ಮಾಜಿ ಬಿಬಿಎಂಪಿ ಸದಸ್ಯೆ ಮಾರಿಮುತ್ತು ರಸ್ತೆ ಜಾಗವನ್ನು ತಮ್ಮದೆಂದು ಹೇಳಿಕೊಂಡು, ಕಾಂಪೌಂಡ್ ನಿರ್ಮಿಸಲು ಆರಂಭಿಸಿದ್ದ ಹಿನ್ನೆಲೆಯಲ್ಲಿ, ಸಭೆ ಸೇರಿದ ನಿವಾಸಿಗಳು ಕಾಂಪೌಂಡ್ ನಿರ್ಮಾಣ ಸ್ಥಗಿತಗೊಳಿಸಿ, ಜಾಗವನ್ನು ಸಾರ್ವಜನಿಕ ರಸ್ತೆಗೆ ಮುಕ್ತಗೊಳಿಸಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡ ರಿಗೆ ಮನವಿ ಸಲ್ಲಿಸಿದ್ದರು, ಸಚಿವರು ಸಮಸ್ಯೆಯನ್ನು ಸ್ಥಳೀಯವಾಗಿ ಚರ್ಚಿಸಿ ಪರಿಹರಿಸಿಕೊಳ್ಳಲು ಪ್ರಯತ್ನಿಸಿ, ಬಗೆ ಹರಿಯದಿದ್ದರೆ ಜಾಗವನ್ನು ಸರ್ವೆ ಮಾಡಿಸಿ, ಮುಂದಿನ ಅಗತ್ಯ ಕ್ರಮ ಕೈಗೊಳಲ್ಳುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಕಾಫಿ ಬೋರ್ಡ್ ಮತ್ತು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆ ಸೇರಿದ್ದರು.
ಸದರಿ ರಸ್ತೆಗೆ ಹೊಂದಿಕೊಂಡಂತೆ ಮಾಜಿ ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ ರವರ ಜಾಗವಿದ್ದು, ಅಗತ್ಯವಿರುವ ರಸ್ತೆಯನ್ನು ನಿರ್ಮಿಸಲು ಜಾಗದ ಅಭಾವವಾಗುವ ಪ್ರಮೇಯ ಎದುರಾಗಿರುವುದರಿಂದ ಜಯಪ್ಪರೆಡ್ಡಿ ಯವರು ರಸ್ತೆಗೆ ಅಗತ್ಯವಿರುವ ಸ್ವಲ್ಪ ಜಾಗವನ್ನು ನೀಡುವಂತೆ ನಿವಾಸಿಗಳು ಅವರಿಗೆ ಮನವಿ ಮಾಡಿಕೊಂಡರು.
ನಿವಾಸಿಗಳ ಮನವಿಗೆ ಓಗೊಟ್ಟ ಜಯಪ್ಪರೆಡ್ಡಿ ಯವರು ‘ಜನತಾ ಜನಾರ್ಧನರಿಗಿಂತ ನಾನು ದೊಡ್ಡವನಲ್ಲ, ಸಾರ್ವಜನಿಕ ಹಿತಕ್ಕಾಗಿ ಈ ಹಿಂದೆಯೂ ಹಲವು ಬಾರಿ ರಸ್ತೆ ಅಗಲೀಕರಣಕ್ಕೆ ಜಾಗ ನೀಡಿ ಸ್ಪಂದಿಸಿದ್ದೇನೆ. ಆದರೆ ಸದರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿ ರುವವನು ನಾನಲ್ಲ, ನನ್ನ ಜಾಗವನ್ನು ಈ ಹಿಂದೆಯೂ ಸರ್ವೆ ಮಾಡಿಸಿದ್ದು, ನಾನು ಸ್ಪಷ್ಟವಾಗಿ ದ್ದೇನೆ. ರಸ್ತೆ ಒತ್ತುವರಿ ಮಾಡಿಕೊಂಡಿರುವವರಿಂದ ಉಪದೇಶ ಮಾಡಿಸಿಕೊಳ್ಳುವ ಅಗತ್ಯ ನನಗಿಲ್ಲ, ಸಾರ್ವಜನಿಕರ ಒಳಿತಿಗಾಗಿ ನನ್ನ ಜಾಗವನ್ನು ರಸ್ತೆ ನಿರ್ಮಾಣದ ಅಗತ್ಯತೆಗೆ ಸ್ಪಂದಿಸಿ ನೀಡುತ್ತೇನೆಯೇ ಹೊರತು, ಒತ್ತುವರಿದಾರರ ಉಪದೇಶವನ್ನು ಮನ್ನಿಸಿ ನೀಡುತ್ತಿಲ್ಲ. ಅಗತ್ಯವಿದ್ದರೆ ಜಾಗವನ್ನು ಸರ್ವೆ ಮಾಡಿಸಿ ನೋಡಿ, ರಸ್ತೆ ಒತ್ತುವರಿದಾರರು ಯಾರೆಂದು ತಿಳಿಯಲಿದೆ’ ಎಂದರು.
ಇದೇ ವೇಳೆ ಕಾಫಿ ಬೋರ್ಡ್ ಮತ್ತು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸದರಿ ರಸ್ತೆಗೆ ಅಗತ್ಯವಿರುವ ಜಾಗ ನೀಡಿ ಸಹಕರಿಸುವಂತೆ ಬಿಬಿಎಂಪಿ ಮಾಜಿ ಸದಸ್ಯ ಜಯಪ್ಪರೆಡ್ಡಿ ಯವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಯಪ್ಪರೆಡ್ಡಿ ರಸ್ತೆ ನಿರ್ಮಾಣಕ್ಕೆ ಅಗತ್ಯ ಜಾಗ ನೀಡಿ ಸಹಕರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕುವೆಂಪು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಯ್ಯ, ಮಾಜಿ ನಗರಸಭಾ ಸದಸ್ಯ ಕೆ.ಎನ್. ಪರಮೇಶ್, ಒಕ್ಕಲಿಗ ವೇದಿಕೆಯ ಗೌರವಾಧ್ಯಕ್ಷ ಎ.ಎಸ್. ಗೋವಿಂದೇಗೌಡ, ಎಂ.ಎಸ್.ಜಯಪ್ರಕಾಶ್, ಜೆಡಿಎಸ್ ಓಬಿಸಿ ಅಧ್ಯಕ್ಷ ಕೆ.ಎಂ.ವೇಣುಗೋಪಾಲ್, ಕಾಂಗ್ರೆಸ್ ಮುಖಂಡರಾದ ಕಾಣಿಕರಾಜ್, ರಮೇಶ್, ವಿನೋದ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗೋಪಿನಾಥ್, ಕಾಫಿ ಬೋರ್ಡ್ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಕಾಂತ್, ಸಾಯಿನಾಥ್, ಚನ್ನಬಸವ ಆರಾಧ್ಯ, ಪ್ರಿಯದರ್ಶಿನಿ ಶಾಲೆಯ ಸಂಸ್ಥಾಪಕ ಬಸವರಾಜು, ಯೂತ್ ಬ್ರಿಗೇಡ್ ನ ಪುನೀತ್, ದೇವರಾಜ್, ಮಾಧವರಾಜ್, ಎಚ್ ಸಿ ರಾಮಯ್ಯ, ಸೊಣ್ಣೇಗೌಡ, ಶಿವಕುಮಾರ್ ಸೇರಿದಂತೆ ಕಾಫಿ ಬೋರ್ಡ್ ಬಡಾವಣೆ ಮತ್ತು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಮತ್ತು ನಿವಾಸಿಗಳಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತು
9845085793