

ಶ್ರೀ ರಾಧಾಕೃಷ್ಣ ಯಾದವ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜಯಂತಿ :
ಬ್ಯಾಟರಾಯನಪುರ : ದೇಶ, ಧರ್ಮ ಮತ್ತು ಯಾದವ ಕುಲದ ಒಳಿತಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ವಕ್ತಾರರಾದ ಎಂ.ನಾಗರಾಜ್ ಯಾದವ್ ತಿಳಿಸಿದರು.
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಯಾದವ ಕುಲಬಾಂಧವರು ಮತ್ತು ಶ್ರೀ ರಾಧಾಕೃಷ್ಣ ಯಾದವ ಸೇವಾ ಟ್ರಸ್ಟ್ ವತಿಯಿಂದ ಕ್ಷೇತ್ರದ ಪಾಲನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 6ನೇ ವರ್ಷದ ಶ್ರೀ ಕೃಷ್ಣ ಜಯಂತಿ ಮತ್ತು ಯಾದವ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ‘ದೇಶದ ಜನಸಂಖ್ಯೆಯಲ್ಲಿ ಪ್ರತಿಶತ 25%ರಷ್ಟಿರುವ ಯಾದವ ಕುಲಬಾಂಧವರು, ಭಾಷೆ, ರಾಜ್ಯ, ಒಳಪಂಗಡಗಳ ಭೇದವನ್ನು ಮರೆತು ಸುಸಂಘಟಿತರಾಗಬೇಕು. ರಾಜಕಾರಣ ಅಥವಾ ವಿವಿಧ ಕ್ಷೇತ್ರಗಳಲ್ಲಿ ಯಾದವ ಸಮುದಾಯದ ಯುವಕರನ್ನು ಬೆಳೆಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ. ಯಾದವ ಭವನ ನಿರ್ಮಾಣಕ್ಕೆ ಸಚಿವ ಕೃಷ್ಣಬೈರೇಗೌಡ ರವರು ಜಾಗ ನೀಡುವ ಭರವಸೆ ನೀಡಿದ್ದಾರೆ, ಇದಕ್ಕಾಗಿ ನಾನು ಸಹ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ ಅವರು ಜನ್ಮತಃ ನಾಯಕತ್ವದ ಗುಣವಿರುವ ದೇಶದ ಯಾವುದಾದರೊಂದು ಸಮುದಾಯವಿದ್ದರೆ ಅದು ಯಾದವ ಸಮುದಾಯ ಎಂದು ಹೆಮ್ಮೆಯಿಂದ ಹೇಳಲಿಚ್ಛಸುತ್ತೇನೆ. ನಮ್ಮ ಕುಲಗುರು ಶ್ರೀ ಕೃಷ್ಣ ನಮಗಷ್ಟೇ ಗುರುವಲ್ಲ ಜಗತ್ತಿಗೇ ಗುರು ಎಂಬುದಕ್ಕೆ ಹೆಮ್ಮೆ ಪಡಬೇಕಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಯಾದವಾನಂದ ಸ್ವಾಮೀಜಿ ಮಾತನಾಡಿ ‘ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ಬಾಯಿ ತೆರೆದಾಗ ಬ್ರಹ್ಮಾಂಡದ ದರ್ಶನವಾಯಿತು, ಆದರೆ ಇಂದಿನ ಯುವ ಜನತೆ ಬಾಯ್ತೆರೆದರೆ ಗುಟ್ಕಾ ಕಾಣುತ್ತದೆ. ಯುವಜನತೆ ಸಂಸ್ಕಾರ ವಂತರಾಗಬೇಕು, ನೀರಿಗೆ ಸಂಸ್ಕಾರ ನೀಡಿದರೆ ತೀರ್ಥವಾಗುತ್ತದೆ, ಸಗಣಿಗೆ ಸಂಸ್ಕಾರ ನೀಡಿದರೆ ವಿಭೂತಿಯಾಗುತ್ತದೆ, ಅದೇ ರೀತಿ ಮನುಷ್ಯರಾದ ನಾವು ಸಂಸ್ಕಾರ ಪಡೆದು ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮಬೇಕು, ಜಗತ್ತಿಗೆ ಜ್ಞಾನಸುಧೆಯನ್ನು ನೀಡಬೇಕು ಎಂದರು.
ದಕ್ಷಿಣ ಭಾರತದ ಖ್ಯಾತ ಚಿತ್ರನಟ ಸುಮನ್ ಮಾತನಾಡಿ ‘ಜಗತ್ತಿಗೆ ಗೋವಿನ ಮಹತ್ವ, ಹಾಲು, ಮೊಸರು, ಬೆಣ್ಣೆ, ತುಪ್ಪದ ಅಮೂಲ್ಯತೆಯನ್ನು ಸಾರಿದ ಯಾದವಕುಲ. ತುಪ್ಪದ ಬಳಕೆಯಿಲ್ಲದೆ ಆಯುರ್ವೇದ, ಹೋಮ, ಹವನ ನಡೆಯಲು ಸಾಧ್ಯವಿಲ್ಲ. ಹಸುವಿನ ಹಾಲು ತಾಯಿ ಹಾಲಿಗಿಂತ ಸರ್ವಶ್ರೇಷ್ಠ, ಈ ದಿಸೆಯಲ್ಲಿ ಗೋಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.
ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ಪಾಲನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ರಾಜಬೀದಿಗಳಲ್ಲಿ ಶ್ರೀ ಕೃಷ್ಣನ ಪುತ್ತಳಿಯ ಮೆರವಣಿಗೆ, ಅನ್ನಸಂತರ್ಪರ್ಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತ ಚೈತನ್ಯ ಯುವಜನ ಪಕ್ಷದ ಅಧ್ಯಕ್ಷ ಬೋಡೇ ರಾಮಚಂದ್ರ ಯಾದವ್, ವೈದ್ಯರಾದ ಡಾ.ಕಿಶೋರ್ ಎನ್.ಎಲ್., ಶ್ರೀ ರಾಧಾಕೃಷ್ಣ ಯಾದವ ಸೇವಾ ಟ್ರಸ್ಟ್ ಗೌರವಾಧ್ಯಕ್ಷ, ತಾ.ಪಂ.ಮಾಜಿ ಸದಸ್ಯ ಪಾಲನಹಳ್ಳಿ ಬಿ.ಈರಪ್ಪ, ಅಧ್ಯಕ್ಷ ಎಂ.ಸುಬ್ರಮಣಿ, ತಾ.ಪಂ.ಮಾಜಿ ಅಧ್ಯಕ್ಷರು, ಟ್ರಸ್ಟ್ ನ ಉಪಾಧ್ಯಕ್ಷ ಮಾರೇನಹಳ್ಳಿ ನಾಗರಾಜ್, ಜಯಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಸಿ.ಎಸ್. ಮುನಿರಾಜು, ಖಜಾಂಚಿ ಇ.ಕೃಷ್ಣ, ಕಾರ್ಯಾಧ್ಯಕ್ಷ ಸಂತೋಷ್ ಬಿ., ಸಹ ಕಾರ್ಯದರ್ಶಿ ಕೇಶವಮೂರ್ತಿ, ಕಾರ್ಯದರ್ಶಿ ವೆಂಕಟೇಶ್ವರುಲು, ಸದಸ್ಯರಾದ ನಂಜಪ್ಪ, ಪರಮೇಶ್, ರಾಜೇಶ್, ಟಿ.ಗೋಪಿ, ಜಿ.ಬಾಲಯಾಮಯ್ಯ, ಭಾರತಮ್ಮ ಕೆಂಪಣ್ಣ, ಶಶಿಕಲಾ, ಮುನಿರಾಜು ಸೇರಿದಂತೆ ಯಾದವ ಸಮುದಾಯದ ಮುಖಂಡರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
ಆರ್ ಹನುಮಂತು
9845085793
7349337989