ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಸಿಬ್ಬಂದಿಗಳಿಂದ ಸ್ವಚ್ಛತಾ ನಡಿಗೆ :
ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಯಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ದಕ್ಷಿಣ ವಲಯ-2ರ ಸಿಬ್ಬಂದಿಗಳು ಗಾಂಧಿ ಜಯಂತಿ ಪ್ರಯುಕ್ತ, ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದ ಅಡಿಯಲ್ಲಿ ಬುಧವಾರ ಸ್ವಚ್ಛತಾ ನಡಿಗೆ ಕಾರ್ಯಕ್ರಮ ನಡೆಸುವ ಮೂಲಕ ಸ್ವಚ್ಛತೆಯ ಮಹತ್ವ ಕುರಿತು ಜನಜಾಗೃತಿ ಮೂಡಿಸಿದರು.
ಸ್ವಚ್ಛತಾ ಅಭಿಯಾನ ಕುರಿತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಆರ್.ಕೃಷ್ಣಕುಮಾರ್ ಮಾತನಾಡಿ ‘ಸ್ವಚ್ಛತೆ ನಮ್ಮ ಬದುಕಿನ ಭಾಗವಾಗಬೇಕು. ಸ್ವಚ್ಛತೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿರವಾಗಿರುತ್ತದೆ. ಗಾಂಧಿ ಜಯಂತಿಯ ಈ ಶುಭದಿನ ದಂದು ಮಹಾತ್ಮ ಗಾಂಧಿಯವರ ಬದುಕಿನ ಆಧ್ಯತೆಯಾಗಿದ್ದ ‘ಸ್ವಚ್ಛತೆಯೇ ಸೇವೆ’ ಕುರಿತು ಜನಜಾಗೃತಿ ನಡಿಗೆ ನಡೆಸುತ್ತಿರುವ ಬಗ್ಗೆ ಸಂತೋಷವಿದೆ. ಪ್ರತಿ ವರ್ಷವೂ ಸಹ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಗಳ ಎಲ್ಲಾ ಕಚೇರಿಗಳಲ್ಲೂ ಸ್ವಚ್ಛತಾ ನಡಿಗೆ ಕಾರ್ಯಕ್ರಮ ಆಯೋಜಿಸ ಲಾಗುತ್ತಿದ್ದು, ಈ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಸ್ವಚ್ಛತೆ ಎಂಬುದು ಕೇವಲ ನಮ್ಮ ಮನೆಯ ಒಳಗಿದ್ದರೆ ಸಾಲದು, ನಮ್ಮ ಮನೆಯ ಅಕ್ಕಪಕ್ಕ,, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಇದರಿಂದ ನಮ್ಮ ಗ್ರಾಮ ಸ್ವಚ್ಛವಾಗಿರುತ್ತದೆ. ಇದೇ ರೀತಿ ದೇಶದ ಎಲ್ಲಾ ಗ್ರಾಮಗಳು ಸ್ವಚ್ಛವಾಗಿದ್ದರೆ ಇಡೀ ದೇಶವೇ ಸ್ವಚ್ಛವಾಗಿರುತ್ತದೆ, ತನ್ಮೂಲಕ ದೇಶದ ಜನತೆಯ ಆರೋಗ್ಯ ಸುರಕ್ಷಿತವಾಗಿರುತ್ತದೆ. ಈ ದಿಸೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸಲ್ಲಿಸಿದ ನಂತರ ಸ್ವಚ್ಛತಾ ನಡಿಗೆಗೆ ಚಾಲನೆ ನೀಡಲಾಯಿತು. ಸ್ವಚ್ಛತೆಯ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಈ ಕಾರ್ಯಕ್ರಮದ ಅಂಗವಾಗಿ ನಾಗರೀಕರಿಗೆ ಕಸದ ಬುಟ್ಟಿಗಳ ವಿತರಣೆ, ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ, ಶ್ರಮದಾನ, ಸಸಿನೆಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.
ಸ್ವಚ್ಛತಾ ನಡಿಗೆಯ ಈ ಕಾರ್ಯಕ್ರಮದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಬೆಂಗಳೂರು ಕಚೇರಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ತನ್ವೀರ್ ಎಂ., ಹಿರಿಯ ವ್ಯವಸ್ಥಾಪಕ ಧನಂಜಯ ಜಿ. ಸೇರಿದಂತೆ ಕಚೇರಿಯ ಸಿಬ್ಬಂದಿಗಳಿದ್ದರು.