ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 14ನೇ ಘಟಕೋತ್ಸವ :

ಯಲಹಂಕ : ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಶರವೇಗದ ಅನುಷ್ಠಾನದಿಂದಾಗಿ ನಿತ್ಯ ಜೀವನದಲ್ಲಿ ಸುಲಭವಾಗಿ ಅಗತ್ಯ ಮಾಹಿತಿ, ನಿರ್ದಿಷ್ಟ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತಿದೆ, ಈ ಮಹತ್ವದ ಕಾರ್ಯಕ್ಕಾಗಿ ನಮ್ಮ ತಂತ್ರಜ್ಞರನ್ನು ಅಭಿನಂದಿಸಲೇಬೇಕು ಎಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್.ದೇಸಾಯ ಅಭಿಪ್ರಾಯಪಟ್ಟರು.

ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಕೃತಕ ಬುದ್ಧಿಮತ್ತೆಯ ಸೃಷ್ಟಿ ಮತ್ತು ಸುಧಾರಣಾ ಪ್ರಕ್ರಿಯೆಯಲ್ಲಿ ಭಾರತದ ಪ್ರಾಚೀನ ಜ್ಞಾನದ ಸಾಕ್ಷರತೆ ಅಡಗಿದೆ. ಭಾರತೀಯ ಪ್ರಾಚೀನ ವಿದ್ವಾಂಸರು, ವಿಜ್ಞಾನಿಗಳು, ಗಣಿತಜ್ಞರು ಮಾಡಿರುವ ಸಾಧನೆ ಅದ್ಭುತವಾದುದು. ಲೋಹಶಾಸ್ತ್ರ, ಗಣಿತ, ವೈದ್ಯಕೀಯ, ಕಟ್ಟಡ ನಿರ್ಮಾಣ ಸೇರಿದಂತೆ ಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪೂರ್ವಿಕರು ಅತ್ಯದ್ಭುತ ಸಂಶೋಧನೆಗಳನ್ನು ಅಂದಿನ ದಿನಮಾನದಲ್ಲೇ ಕೈಗೊಂಡಿದ್ದು, ಅವರ ಸಾಧನೆಯ ಫಲವಾಗಿ ಕೃತಕ ಬುದ್ಧಿಮತ್ತೆ ಅಧ್ಯಯನ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಭಾರತೀಯರು ಮೇಲುಗೈ ಸಾಧಿಸಲು ಸಹಕಾರಿಯಾಗಿದೆ. ನಮ್ಮ ಪ್ರಾಚೀನ ದೇಗುಲಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ, ಕೇವಲ ನಾಲ್ಕು ಅಡಿಗಳ ತಳಪಾಯ ಹೊಂದಿರುವ ಬೃಹದೀಶ್ವರ ದೇಗುಲ ನಿರ್ಮಾಣಗೊಂಡು ಹಲವು ಶತಮಾನಗಳಾಗಿದ್ದರೂ ಯಾವುದೇ ಭೂಕಂಪ, ಸುನಾಮಿಗೂ ಅಲುಗಾಡದೆ ನಿಂತಿದೆ. ಇದಕ್ಕೆ ಕಾರಣ ನಮ್ಮ ಪ್ರಾಚೀನ ತಂತ್ರಜ್ಞರು ಬಳಸುತ್ತಿದ್ದ ಪರಿಪೂರ್ಣ ಸಂಕಲನ, ವ್ಯವಕಲನ ತಂತ್ರಗಳು ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರು ಮತ್ತು ಗೋವಾ, ಅಗರ್ತಲದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಗೋಪಾಲ್ ಮುಗೆರಾಯ ಘಟಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗುವುದು ಅವುಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಗುಣಮಟ್ಟದ ಶಿಕ್ಷಕರಿಂದಲೇ ಹೊರತು, ಅವುಗಳ ಬಾಹ್ಯ ಆಕಾರ, ಗಾತ್ರಗಳಿಂದಲ್ಲ. ಈ ನಿಟ್ಟಿನಲ್ಲಿ ಯುವ ಶಿಕ್ಷಕರು, ತಂತ್ರಜ್ಞರು ತಮ್ಮ ಜ್ಞಾನದ ಪರಿಧಿ ಮತ್ತು ಕೌಶಲವನ್ನು ಸದಾ ವೃದ್ಧಿಸಿಕೊಳ್ಳುತ್ತಾ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಿ.ಎನ್.ನಾಗಭೂಷಣ್ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕ ಸ್ವೀಕರಿಸಿದರು. ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸುಧೀಕ್ಷಾ ಕೆ. ಸ್ವೀಕರಿಸಿದರು. ಅತ್ಯುತ್ತಮ ವಿದ್ಯಾರ್ಥಿಗೆ ಸಲ್ಲುವ ಜಸ್ಟಿಸ್ ಕೆ.ಎಸ್.ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಅಶ್ವಿನ್ ಆರ್.ಬಿ.ಪಡೆದರು. ಕಾರ್ಯಕ್ರಮದಲ್ಲಿ ಸ್ನಾತಕ ಪದವಿಯ 7 ಮತ್ತು ಸ್ನಾತಕೋತ್ತರ ಪದವಿಯ 7 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಪ್ರತಿ ವಿಭಾಗದ ಪ್ರಥಮ 10 ರ್ಯಾಂಕ್ ಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ವಿ.ಶ್ರೀಧರ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ.ನಾಗರಾಜ್, ನಿಟ್ಟೆ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜಾ, ಶೈಕ್ಷಣಿಕ ನಿರ್ದೇಶಕ ಡಾ.ಸಂದೀಪ್ ಶಾಸ್ತ್ರಿ, ಪರೀಕ್ಷಾ ನಿಯಂತ್ರಕ ಡಾ.ಪ್ರಶಾಂತ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *