



ಬೆಂಗಳೂರು – ದಿ ಇಂಡಿಯನ್ ಸೊಸೈಟಿ ಆಫ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ’ ಕರ್ನಾಟಕ ರಾಜ್ಯ ಶಾಖೆ ಇಂದು ಬೆಂಗಳೂರಿನಲ್ಲಿ ಕ್ಲಿನಿಕಲ್ ಇಂಟರ್ವೆನ್ಷನಲ್ ರೇಡಿಯಾಲಜಿ’ ಸಮ್ಮೇಳನ 2024 ಅನ್ನು ಯಶಸ್ವಿಯಾಗಿ ನಡೆಸಿತು.
ಇಂಟರ್ವೆನ್ಷನಲ್ ರೇಡಿಯಾಲಜಿ’ ವಿಭಾಗವು ವೈದ್ಯಕೀಯ ವಿಜ್ಞಾನ ಸಾಧಿಸಿರುವ ಅದ್ಭುತವಾದ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಇಂಟರ್ವೆನ್ಷಲ್ ರೇಡಿಯಾಲಜಿಯ ಹೆಗ್ಗಳಿಕೆ ಎಂದರೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಲ್ಲಿ ಇರುವಂತೆ ದೇಹವನ್ನು ಕತ್ತರಿಸದೇ, ಸೂಕ್ಷ್ಮ ರಂಧ್ರಗಳ ಮೂಲಕ ಚಿಕಿತ್ಸೆ ನೀಡುವ ಪರ್ಯಾಯ ಮಾರ್ಗ. ಈ ವಿಧಾನ ಅತ್ಯಾಧುನಿಕ ಸ್ಕ್ಯಾನಿಂಗ್ ಉಪಕರಣಗಳ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಈ ಚಿಕಿತ್ಸೆಯು ಅತ್ಯಂತ ನಿಖರವಾಗಿರುತ್ತದೆ.
ದೇಹವನ್ನು ಛೇದಿಸಿ ಮಾಡುವ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ, ಈ ವಿಭಾಗದ ವೈದ್ಯರು ಸಂಕೀರ್ಣ ರೋಗ ಮೂಲವನ್ನು ಪತ್ತೆ ಮಾದುವುದಲ್ಲದೆ ರೋಗಕ್ಕೆ ಅದೇ ಸಮಯದಲ್ಲಿ ಚಿಕಿತ್ಸೆ ನೀಡುತ್ತಾರೆ. ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸೆಗಳಿಗೆ ಹೋಲಿಸಿದರೆ, ಈ ನವೀನ ವಿಧಾನ ಚೇತರಿಕೆಯ ಸಮಯವನ್ನು, ಅಡ್ಡಪರಿಣಾಮಗಳನ್ನು ಮತ್ತು ಚಿಕಿತ್ಸೆಯ ವೆಚ್ಚವನ್ನು ಕಡಿಮೆಗೊಳಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಡಾ. ರೋಹಿತ್ ಮಧುರ್ಕರ್ ‘ಥೈರಾಯ್ಡ್ ಗಂಟುಗಳು, ಗರ್ಭಾಶಯದ ಫೈಬ್ರಾಯ್ಡ್ಗಳು, ಉಬ್ಬಿರುವ ರಕ್ತನಾಳಗಳು, ಸ್ತನ ಗಡ್ಡೆಗಳು, ಪಿತ್ತಜನಕಾಂಗದ ಖಾಯಿಲೆಗಳು ಮತ್ತು ಕೆಲವು ಕ್ಯಾನ್ಸರ್ಗಳಂತಹ ರೋಗಗಳಿಗೆ ಈಗ ಸೂಕ್ಷ್ಮ ರಂಧ್ರದ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಈ ಕ್ರಾಂತಿಕಾರಿ ಚಿಕಿತ್ಸೆಯು ಅಡ್ಡಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ ಮತ್ತು ರೋಗಿಗೆ ವೇಗವಾಗಿ ಚೇತರಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಕೈಗೆಟುವ ಚಿಕಿತ್ಸೆಯಾಗಿದೆ ಎಂದು ವಿವರಿಸಿದರು.
ಕಾರ್ಯದರ್ಶಿ ಡಾ. ರಾಜೇಶ್ ಹೆಳವರ್ ಮಾತನಾಡಿ ‘ದುರದೃಷ್ಟವಶಾತ್ ಇಂಟರ್ವೆನ್ಷಲ್ ರೇಡಿಯಾಲಜಿ ಪ್ರಯೋಜನಗಳ ಬಗ್ಗೆ ಅನೇಕ ಜನರಿಗೆ ಇನ್ನೂ ತಿಳಿದಿಲ್ಲ. ಈ ವಿಭಾಗದ ಪ್ರಚಾರವನ್ನು ಪ್ರಾಥಮಿಕ ಗುರಿಯಾಗಿಸಿಕೊಂಡು ಸಾರ್ವಜನಿಕರಿಗೆ ಮಾಹಿತಿಯ ಕೊರತೆ ನೀಗಿಸುವ ಪ್ರಯತ್ನವನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಖಜಾಂಚಿ ಡಾ. ಮಧು ಎಸ್.ಡಿ. ರವರು ಮಾತನಾಡಿ ‘ಇಂಟರ್ವೆನ್ಷನಲ್ ರೇಡಿಯಾಲಜಿ’ ಅತ್ಯಂತ ಕೌಶಲ್ಯ ಬೇಡುವ ವಿಭಾಗವಾಗಿದ್ದು ಇದರಲ್ಲಿ ತರಬೇತಿ ಪಡೆದ ವೈದ್ಯರುಗಳು ರೋಗವನ್ನು ನಿಖರವಾಗಿ ಗುರುತಿಸುವುದರಲ್ಲಿ ಮಾತ್ರವಲ್ಲದೆ ಅದಕ್ಕೆ ಚಿಕಿತ್ಸೆ ನೀಡುವುದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಈ ಚಿಕಿತ್ಸೆಗಳು ಈಗ ಸರ್ಕಾರಿ ಸಂಸ್ಥೆಗಳಾದ ಕಿದ್ವಾಯಿ ಸ್ಮಾರಕ ಆಂಕೋಲಾಜಿಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಈ ವರ್ಷದ ಸಮ್ಮೇಳನದಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ನಡೆಸಲಾಯಿತು ಮತ್ತು ಈ ಚಿಕಿತ್ಸೆಗಳ ಮೂಲಕ ರೋಗಿಗಳ ಜೀವನವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಅನಾವರಣಗೊಳಿಸಲಾಯಿತು.