










ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜನಮಾನಸ ಕಾರ್ಯಕ್ರಮ :
ಯಲಹಂಕ : ದೇಶಕ್ಕೆ ಸಂವಿಧಾನ, ಸೇನೆ, ಗಡಿ, ಭೂಪಟ, ಬಡವರಿಗೆ ಭೂಮಿ ಮುಂತಾದ ಮಹತ್ವದ ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಮಂಜುನಾಥ್ ಅದ್ದೆ ಅಭಿಪ್ರಾಯಪಟ್ಟರು.
ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಯಲಹಂಕ ಕ್ಷೇತ್ರದ ಮಾರಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ‘ಜನಮಾನಸ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ವಿಚಾರ, ವ್ಯಾಯಾಮ, ಆಲಿಕೆ, ಉಪಹಾರ ಈ ನಾಲ್ಕು ಪ್ರತಿ ಮನುಷ್ಯನಿಗೆ ಅತ್ಯವಶ್ಯಕವಾದ ಅಂಶಗಳಾಗಿದ್ದು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರೊಂದಿಗೆ ವ್ಯಾಯಾಮ, ಪಕ್ಷದ ತತ್ವ ಸಿದ್ಧಾಂತಗಳ ವಿಚಾರ ಮಂಥನ, ಅವರ ಸಮಸ್ಯೆಗಳ ಆಲಿಕೆ, ಸಮಾನತೆಯ ದ್ಯೋತಕವಾಗಿ ಸಹಭೋಜನ ಮಾಡುವುದು ಜನಮಾನಸ ಕಾರ್ತಕ್ರಮದ ಪ್ರಮುಖ ಧ್ಯೇಯವಾಗಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಇಂದು ಚಾಲನೆ ನೀಡಲಾಗಿದ್ದು, ಪ್ರತಿವಾರ ಒಂದೊಂದು ಗ್ರಾ.ಪಂ.ವ್ಯಾಪ್ತಿಯಲ್ಲಿ ಜನಮಾನಸ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳ ಮನನ ಮಾಡುವುದರ ಜೊತೆಗೆ ಪಕ್ಷದ ಬಲವರ್ಧನೆಗೆ ಶ್ರಮಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಚುನಾವಣೆ ವೇಳೆಯಲ್ಲಿ ಮಾತ್ರ ಜನರ ಬಳಿ ಹೋಗಿ, ಚುನಾವಣೆ ಮುಗಿಯುತ್ತಿದ್ದಂತೆ ಕಣ್ಮರೆಯಾಗುವುದು ನಮ್ಮ ರಾಜಕಾರಣದ ಪರಿ ಆಗಬಾರದು, ಸದಾ ಜನರೊಟ್ಟಿಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಜನಮಾನಸ ಕಾರ್ಯಕ್ರಮದ ಬಹುಮುಖ್ಯ ಗುರಿಯಾಗಿದೆ. ಸದ್ಯಕ್ಕೆ ಯಲಹಂಕ ಭಾಗದಲ್ಲಿ ಇದಕ್ಕೆ ಚಾಲನೆ ನೀಡಲಾಗಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ, ಈ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕೆಪಿಸಿಸಿ ಮಾದ್ಯಮ ವಕ್ತಾರ ನಟರಾಜ್ ಗೌಡ ಮಾತನಾಡಿ ‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿದ್ದು, ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ತ್ಯಾಗ, ಬಲಿದಾನ ಮಾಡಿ ಪಕ್ಷವನ್ನು ಕಟ್ಟಿದ್ದಾರೆ. ಶಾಂತಿ, ಸಮಾನತೆ, ಸಹಬಾಳ್ವೆಯ ಧ್ಯೇಯದೊಂದಿಗೆ ಶತವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದು, ಸರ್ವಜನಾಂಗದ ಶಾಂತಿಯ ತೋಟ ಎನಿಸಿದೆ. ಕೋಮುವಾದಿ ಗಳಿಂದ ಸಂವಿಧಾನ ಸಂರಕ್ಷಣೆಯ ದಿಸೆಯಲ್ಲಿ ಜನಮಾನಸ ದಂತಹ ವಿನೂತನ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ. ಈ ಮೂಲಕ ಪಕ್ಷದ ಕಾರ್ಯಕರ್ತರಿಗೆ ಪಕ್ಷದ ತತ್ವಸಿದ್ಧಾಂತಗಳ ಮನವರಿಕೆ ಮಾಡುವುದು ಮತ್ತು ಜನರ ಸಮಸ್ಯೆಗಳನ್ನು ಆಲಿಸಲು ಜನಮಾನಸ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ ಎಂದ ಅವರು ದೇಶಕ್ಕೆ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿಯವರು ನೀಡಿರುವ ಕೊಡುಗೆ, ಮಾಡಿರುವ ತ್ಯಾಗ, ಬಲಿದಾನ ಕುರಿತು ಸ್ಮರಿಸಿದರು.
ಜನಮಾನಸ ಕಾರ್ಯಕ್ರಮದ ಅಂಗವಾಗಿ ಮಾರಸಂದ್ರ ವೃತ್ತದಿಂದ ಪಿ.ಕೆ.ಶಾಲೆಯ ವರೆಗೆ ಜಾಗೃತಿ ಜಾಥಾ ನಡೆಸಿದರು.
ಕಾರ್ಯಕ್ರಮದಲ್ಲಿ ಬೆಂ.ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾತಿ ಘಟಕದ ಅಧ್ಯಕ್ಷ ಕೋಗಿಲು ವೆಂಕಟೇಶ್, ಯಲಹಂಕ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಕಾಂಗ್ರೆಸ್ ಮುಖಂಡರು, ಗ್ರಾ.ಪಂ.ಸದಸ್ಯರಾದ ಪ್ರಕಾಶ್ ಮಾರಸಂದ್ರ,ಭೂನ್ಯಾಯ ಮಂಡಳಿ ಸದಸ್ಯ ವೈ.ಸಿ.ವೆಂಕಟೇಶ್, ಮಾಜಿ ಗ್ರಾ.ಪಂ.ಸದಸ್ಯರಾದ ಕೆ.ಎಚ್.ಚಂದ್ರಶೇಖರ್(ಕಾರ್ಲಾಪುರ), ಚಲ್ಲಹಳ್ಳಿ ಚೆಲುವಮೂರ್ತಿ, ಹೆಸರಘಟ್ಟ ಬ್ಲಾಕ್ ಎಸ್.ಸಿ.ಘಟಕದ ಅಧ್ಯಕ್ಷ ಗೋವಿಂದರಾಜು, ಅನಿಲ್ ಅದ್ದೆ, ಲಿಂಗರಾಜು, ತಿರುಮಳಾಪುರ ವಿಶ್ವನಾಥ್, ಮಂಜುನಾಥ್, ಚೇತನ್, ಬ್ಯಾಲಕೆರೆ ಸುಬ್ರಮಣಿ, ಅರಕೆರೆ ಶ್ರೀನಿವಾಸ್, ಕಾಕೋಳು ಬಾಬು, ಬೈರಾಪುರ ಮುನಿರಾಜು, ಶಿವು, ವಿರೂಪಾಕ್ಷ, ಅಶ್ವಥ್ ಸೇರಿದಂತೆ ಇನ್ನಿತರರಿದ್ದರು.