

ಸಂವಿಧಾನ ಜಾಗೃತಿಗಾಗಿ ಪಿವಿಸಿ(ಎಸ್.) ಸಂಘಟನೆಯಿಂದ ಕರಪತ್ರ ಚಳವಳಿ :
ಯಲಹಂಕ : 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಜಾ ವಿಮೋಚನಾ ಚಳವಳಿ(ಸ್ವಾಭಿಮಾನ)ಯ ನೂರಾರು ಕಾರ್ಯಕರ್ತರು ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಅವರ ನೇತೃತ್ವದಲ್ಲಿ ಯಲಹಂಕದ ಅಂಬೇಡ್ಕರ್ ಭವನದ ಬಳಿ ಭಾರತ ಸಂವಿಧಾನ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳ ಕುರಿತು ಜಾಗೃತಿ ಮೂಡಿಸಲು ಕರಪತ್ರ ಚಳವಳಿ ನಡೆಸಿದರು.
ಭಾನುವಾರ ಬೆಳಿಗ್ಗೆ ಸಂಘಟನೆಯ ಕಾರ್ಯಕರ್ತರು ನೂರಾರು ಶಾಲಾ ಮಕ್ಕಳೊಂದಿಗೆ ಅಂಬೇಡ್ಕರ್ ಭವನದ ಬಳಿ ಜಮಾವಣೆಗೊಂಡು, ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕರಪತ್ರ ಚಳವಳಿಗೆ ಚಾಲನೆ ನೀಡಲಾಯಿತು.
ಕೈಯಲ್ಲಿ ಹಿಡಿದಿದ್ದ ಸಂವಿಧಾನ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳ ಸಾರವನ್ನು ಒಳಗೊಂಡ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಸಂವಿಧಾನ ಮತ್ತು ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಕುರಿತು ಜನಜಾಗೃತಿ ಮೂಡಿಸಿದರು.
ಕರಪತ್ರ ಚಳವಳಿ ಕುರಿತು ಪಿವಿಸಿ(ಎಸ್.) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ ‘ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕಂಡ ಮರೆಯಲಾಗದ ಮಾಣಿಕ್ಯ, ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅವರ ಕೊಡುಗೆ ಅಪಾರವಾದುದು. ಅವರು ವಿಶ್ವದಲ್ಲೇ ಅತಿದೊಡ್ಡ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
ಆದರೆ ಇತ್ತೀಚಿನ ರಾಜಕೀಯ ಪಕ್ಷಗಳು ಕೇವಲ ಮತರಾಜಕಾರಣ ಕ್ಕಾಗಿ ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಂವಿಧಾನ ಸಂರಕ್ಷಣೆಯ ಬಗ್ಗೆ ಕೃತಕ ಓಲೈಕೆ ಮಾಡುತ್ತಿರುವುದನ್ನು ಕಾಣುತ್ತೇವೆ. ದೇಶದ ಒಂದು ರಾಷ್ಟ್ರೀಯ ಪಕ್ಷದ ಮುಖಂಡರು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡುತ್ತಾರೆ. ಇದಕ್ಕೆ ಇತ್ತೀಚೆಗೆ ದೇಶದ ಗೃಹ ಮಂತ್ರಿಗಳು ಪಾರ್ಲಿಮೆಂಟ್ ಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿರುವ ರೀತಿ ಜ್ವಲಂತವಾಗಿ ನಮ್ಮ ಕಣ್ಮುಂದೆ ಇದೆ. ಆದರೆ ಚುನಾವಣೆ ವೇಳೆ ಬಂದಾಗ ಸಂವಿಧಾನ ರಕ್ಷಣೆ, ಸಂವಿಧಾನ ಸಮ್ಮಾನ್ ಎನ್ನುತ್ತಾರೆ, ಇಂಥವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರು ಹಿಂದುಳಿದ ಸಮುದಾಯಗಳ ಮತ ಸೆಳೆಯಲು ಇರುವ ದೊಡ್ಡ ಮಾರ್ಗದಂತೆ ಕಾಣುತ್ತಾರೆಯೇ ವಿನಃ ಅವರ ಬಗ್ಗೆ ನೈಜವಾದ ಕಾಳಜಿಯಾಗಲಿ, ಗೌರವವಾಗಲಿ ಇಲ್ಲ.
ಇನ್ನೊಂದು ರಾಷ್ಟ್ರೀಯ ಪಕ್ಷ ಅಂಬೇಡ್ಕರ್ ಆವರ ಸಮಾದಿಗೆ ದೇಶದ ರಾಜಧಾನಿಯಲ್ಲಿ ಸೂಕ್ತ ಜಾಗ ನೀಡುವ ಉದಾರತೆ ತೋರಿಲ್ಲ, ಆದರೂ ಅಂಬೇಡ್ಕರ್ ಅವರನ್ನು ತಮ್ಮ ಪಕ್ಷದ ಆಸ್ತಿಯಂತೆ ಮಾತನಾಡುತ್ತಾರೆ. ಇವರದ್ದೆಲ್ಲಾ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಕೃತಕ ಪ್ರೀತಿ ಅಷ್ಟೇ, ಇಂತಹ ರಾಜಕೀಯ ಪಕ್ಷಗಳ ಬಗ್ಗೆ ದೇಶದ ಬಹುಸಂಖ್ಯಾತ ತಳಸಮುದಾಯದ ಜನತೆ ಜಾಗೃತರಾಗಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ, 76ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ‘ಕರಪತ್ರ ಚಳವಳಿ’ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದ.ಸಂ.ಸ. ಭೀಮಶಕ್ತಿ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್, ಪಿವಿಸಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಿವಿಸಿ(ಎಸ್.) ಯಲಹಂಕ ತಾಲ್ಲೂಕು ಅಧ್ಯಕ್ಷ ಕಾಂತರಾಜು, ಬೆಂ.ನಗರ ಜಿಲ್ಲಾ ಉಪಾಧ್ಯಕ್ಷ ವಸೀಂ ಬೇಗ್, ನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಲಾಶ್ ಕುಮಾರ್, ಉಪಾಧ್ಯಕ್ಷ ಸತೀಶ್, ಸಂಘಟನೆಯ ಮುಖಂಡರಾದ ಚಂದ್ರು ಥಣಿಸಂದ್ರ, ಶಿವು, ಮಹಿಳಾ ಘಟಕದ ಅಧ್ಯಕ್ಷೆ ಮುನಿಲಕ್ಷ್ಮಮ್ಮ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರು ಹಾಗೂ ಶಾಲಾ ಮಕ್ಕಳಿದ್ದರು.