




ಇ-ಖಾತಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಿ : ಕೆ.ಅಶೋಕನ್
ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಭಾರತಿನಗರದಲ್ಲಿ ಇ-ಖಾತಾ ಅಭಿಯಾನ :
ಬ್ಯಾಟರಾಯನಪುರ : ಕಂದಾಯ ಇಲಾಖೆಯ ಕೆಲಸಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸುಲಭವಾಗಿ ಜನತೆಗೆ ತಲುಪುವಂತೆ ಮಾಡುವ ದಿಸೆಯಲ್ಲಿ ಇ-ಖಾತ ಅಭಿಯಾನ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳು ವಂತಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಅಶೋಕನ್ ತಿಳಿಸಿದರು.
ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಭಾರತಿನಗರದಲ್ಲಿ ಬುಧವಾರ ಏರ್ಪಡಿಸಿದ್ದ ಇ-ಖಾತಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು ‘ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ಅವರು ಹೆಚ್ಚು ಕಾಳಜಿ ವಹಿಸಿ, ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳನ್ನು ಸರಳೀಕೃತಗೊಳಿಸಿ, ಸ್ವತ್ತುಗಳ ಮಾಲೀಕರು ತಮ್ಮ ಸ್ವತಿನ ಕಂದಾಯ ಪಾವತಿಸಿ, ಸಮರ್ಪಕ ದಾಖಲೆ ಸಲ್ಲಿಸಿ ಸುಲಭವಾಗಿ ಇ-ಖಾತಾ ಪಡೆಯಲು ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ, ಹೆಚ್ಚಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಹುಣಸಮಾರನಹಳ್ಳಿ ಪುರಸಭೆಯ ಮುಖ್ಯ ಅಧಿಕಾರಿ ಕಾಂತರಾಜು ಮಾತನಾಡಿ ‘ಇದೊಂದು ಮಹತ್ವಪೂರ್ಣವಾದ ಅಭಿಯಾನವಾಗಿದ್ದು ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ, ಮನೆ, ಸೇರಿದಂತೆ ಹಲವು ರೀತಿಯ ಆಸ್ತಿಗಳನ್ನು ಹೊಂದಿರುವವರು ಮನೆ ಬಾಗಿಲಲ್ಲೇ, ಶೀಘ್ರವಾಗಿ ಇ-ಖಾತಾ ಪಡೆಯುವ ಸದವಕಾಶ ಕಲ್ಪಿಸಲಾಗಿದೆ. ಜನತೆ ದಾಖಲೆ ಸಮೇತ ಅರ್ಜಿ ಸಲ್ಲಿಸಿ ಕೂಡಲೇ ಇ ಖಾತಾ ಪಡೆದುಕೊಳ್ಳ ಬಹುದಾಗಿದೆ. ಮೇ ಅಂತ್ಯದವರೆಗೂ ಈ ಅಭಿಯಾನ ಜಾರಿಯಲ್ಲಿರಲಿದ್ದು,ಜನತೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ನಿಮ್ಮ ಮನೆ, ನಿವೇಶನಗಳ ಖಾತೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಜೆ.ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಮುನಿರಾಜು, ಶ್ರೀನಿವಾಸ ಮೂರ್ತಿ,ಗ್ರಾ.ಪಂ.ಮಾಜಿ ಸದಸ್ಯ ವೆಂಕಟೇಶ್, ಹುಣಸಮಾರನಹಳ್ಳಿ ಪುರಸಭೆಯ ವ್ಯವಸ್ಥಾಪಕ ಮಾರುತಿ, ಕಂದಾಯ ಅಧಿಕಾರಿ ನಾಗೇಶ್, ದ್ಯಾವಪ್ಪ, ಮುಖಂಡರಾದ ಮಹಮದ್ ಅಲಿ, ಕೇಶವರಾವ್, ಸಾಯಿಬಾಬ, ಕರವಸೂಲಿಗಾರ ಅಶೋಕ್ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಗು ಗ್ರಾಮಸ್ಥರಿದ್ದರು.