ಬಳ್ಳಾರಿ ಜು,29: ರಾಜ್ಯದಲ್ಲಿ ಈಗ ಅರ್ಜಿ ಸಲ್ಲಿಕೆ ಸುಗ್ಗಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಸಂಬಂಧಿಸಿ ಪ್ರತಿಯೊಂದಕ್ಕೂ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಎಲ್ಲರೂ ದಾಖಲೆ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರ ನಡುವೆಯೇ ಈ ಅರ್ಜಿ ಸಲ್ಲಿಕೆಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವವರೂ ಜಾಲ ಹುಟ್ಟಿಕೊಂಡಿದೆ.

ಬಳ್ಳಾರಿಯ ವಿವಿಧೆಡೆ ಈ ವಂಚಕರು ಮಹಿಳೆಯರಿಂದ ಅರ್ಜಿ ಸಲ್ಲಿಕೆ ಹೆಸರಲ್ಲಿ 150 ರೂ. ವಸೂಲಿ ಮಾಡಿದ ಪ್ರಸಂಗ ನಡೆದಿದೆ. ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿಯೋಜನೆಯನ್ನು ಆಗಸ್ಟ್ 17 ಅಥವಾ 18ರಂದು ಉದ್ಘಾಟನೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಈ ಯೋಜನೆಯ ಅರ್ಜಿ ಸಲ್ಲಿಕೆ ಜೂನ್ 16ರಿಂದ ಆರಂಭವಾಗಬೇಕಾಗಿದ್ದು, ತಾಂತ್ರಿಕ ಕಾರಣಗಳಿಂದ ಮುಂದಕ್ಕೆ ಹೋಗಿದೆ. ಸರ್ಕಾರಿ ಸೇವಾ ಸಿಂಧು ಪೋರ್ಟಲ್ ಜತೆಗೆ ಒಂದು ವಿಶೇಷ App ಮೂಲಕ ನೋಂದಣಿ ಮಾಡಿಸಲು ಅವಕಾಶ ನೀಡಲು ಎಲ್ಲ ವ್ಯವಸ್ಥೆ ಸಿದ್ಧವಾಗಿದೆ. ಜೂನ್ 28ರಂದು ಸಂಪುಟ ಸಭೆಯ ಬಳಿಕ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಹೇಳಿದ್ದರು. ಆದರೆ, ಇನ್ನೂ ಬಿಡುಗಡೆ ಆಗಿಲ್ಲ. ಇಷ್ಟರ ನಡುವೆಯೇ ಗೃಹಲಕ್ಷ್ಮಿ ಯೋಜನೆ ನೋಂದಣಿ ಹೆಸರಿನಲ್ಲಿ ವಂಚನೆ ಮಾಡುವ ತಂಡಗಳು, ಏಜೆನ್ಸಿಗಳು ಹುಟ್ಟಿಕೊಂಡಿವೆ. ಬಳ್ಳಾರಿ ನಗರದಲ್ಲಿ ಕೆಲವು ಯುವಕರು ಗೃಹಲಕ್ಷ್ಮಿ ಯೋಜನೆ ಅರ್ಜಿ ಭರ್ತಿ ಮಾಡಿಸುವ ಹೆಸರಿನಲ್ಲಿ ನೂರಾರು ಜನರಿಂದ ಹಣ ವಸೂಲಿ ಮಾಡಿದ್ದಾರೆ. ಏಜೆನ್ಸಿಯೊಂದರ ಹೆಸರಿನಲ್ಲಿ ಮನೆ ಮನೆಗೂ ಭೇಟಿ ನೀಡಿ ಅರ್ಜಿಯಲ್ಲಿ ಹೆಸರು ಮತ್ತು ಇತರ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ. ನಿಜವೆಂದರೆ, ಗೃಹ ಲಕ್ಷ್ಮಿ ಯೋಜನೆಯ ಅಪ್ಲಿಕೇಶನೇ ಇನ್ನೂ ಬಿಡುಗಡೆ ಆಗಿಲ್ಲ. ಅರ್ಜಿ ಯಾವ ರೀತಿ ಇರುತ್ತದೆ ಎನ್ನುವುದರ ಸ್ಪಷ್ಟತೆ ಇಲ್ಲ ಯಾವ ಯಾವ ವಿವರಗಳು ಬೇಕು ಎನ್ನುವ ನಿಖರತೆಯೂ ಇಲ್ಲ. ಹೀಗಿರುತ್ತಲೇ ಬಳ್ಳಾರಿ ನಗರದಲ್ಲಿ ಕೆಲವರು ಅರ್ಜಿಯೊಂದನ್ನು ಹಿಡಿದುಕೊಂಡು ಬಂದು ಅದರಲ್ಲಿ ಮಾಹಿತಿಗಳನ್ನು ಸಂಗ್ರಹಿಸುವುದರ ಜತೆಗೆ ಒಂದು ಅರ್ಜಿ ತುಂಬಿದ್ದಕ್ಕೆ 150 ರೂ. ಪಡೆಯುತ್ತಿದ್ದರು.

ಬಳ್ಳಾರಿಯ ವಿವಿಧೆಡೆ ಮಹಿಳೆಯರಿಂದ ವಸೂಲಿ ಮಾಡಿದ ಮಾಡಿದ ಖಾಸಗಿ ಏಜೆನ್ಸಿಯ ಯುವಕರನ್ನು ತಡೆದು ಬಳ್ಳಾರಿಯ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ದಿಶಾ ಒನ್ ಎಂಬ ಹೆಸರಿನ ಖಾಸಗಿ ಏಜೆನ್ಸಿಯವರು ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇತರೆ ಕ್ಕೀಂ ಫಾರಂ ತುಂಬುತ್ತೇವೆಂದು ಹಣ ಸಂಗ್ರಹ ಮಾಡಿದ್ದಾರೆ. ಹೀಗೆ ಹಣ ಪೀಕಿದವರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *