



ಬ್ಯಾಟರಾಯನಪುರ : ಕೊತ್ತನೂರಿನ ಶ್ರೀ ಸಿದ್ಧಾರ್ಥ ಸನ್ನಿವಾಸ ಪ್ರೌಢಶಾಲೆಯ 1999-2000 ಸಾಲಿನ ಸುಮಾರು ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಬ್ಯಾಟರಾಯನಪುರ ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ ‘ಆ ದಿನಗಳ ನೆನಪು’ ಸ್ನೇಹಿತರ ತಂಡದಿಂದ ಭಾನುವಾರ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಏರ್ಪಡಿಸಿ, ಮೊದಲಿಗೆ ನಮ್ಮನ್ನು ಹಗಲಿದಂತಹ ಸ್ನೇಹಿತರಿಗೆ ಐದು ನಿಮಿಷಗಳ ಕಾಲ ಮೌನದೊಂದಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಯೊಬ್ಬರು ತಮ್ಮ ಜೀವನದ ಜಂಜಾಟಗಳನ್ನು ಮರೆತು ಆ ದಿನಗಳ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ಮನಸ್ಸನ್ನು ತಲ್ಲಣ ಗೊಳಿಸುವಂತಹ, ಸಂಭ್ರಮಿಸುವಂತಹ, ವಿವಿಧ ಮನರಂಜನಾ ಆಟಗಳು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಚಟುವಟಿಕೆಗಳಲ್ಲಿ ಹಿಂಜರಿಕೆ ಇಲ್ಲದೆ ಸಂತಸದಿಂದ ಎಲ್ಲರೂ ಭಾಗವಹಿ ಸುವುದರ ಮೂಲಕ ಮತ್ತೊಮ್ಮೆ ವಿದ್ಯಾರ್ಥಿಗಳಾದರು.
ಪಾಲ್ಗೊಂಡಿದ್ದ ಎಲ್ಲಾ ಸ್ನೇಹಿತರಿಗೂ ಸವಿಯಾದ ರುಚಿಯಾದಂತಹ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಊಟ ಮಾಡುವುದರೊಂದಿಗೆ ತಮ್ಮ ಮನದಾಳದ ಮಾತುಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾ ಬಾಂಧವ್ಯವನ್ನ ಮತ್ತಷ್ಟು ವೃದ್ಧಿಸಿಕೊಂಡರು.
ಪ್ರತಿಯೊಬ್ಬರೂ ಸಹ 25 ವರ್ಷಗಳಲ್ಲಿ ತಮ್ಮ ಜೀವನದಲ್ಲಿ ತಾವು ಮಾಡಿದಂತಹ ಸಾಧನೆ ಹಾಗೂ ಅವರ ಬದುಕನ್ನು ಎಲ್ಲರೊಂದಿಗೆ ಹಂಚಿಕೊಂಡರು. ಎಷ್ಟೋ ಸ್ನೇಹಿತರು ಸರ್ಕಾರಿ ವೃತ್ತಿಯನ್ನು ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಹೆಮ್ಮೆಪಟ್ಟರು.
ಅನೇಕ ಸ್ನೇಹಿತರು ತಮ್ಮದೇ ಆದ ವ್ಯವಹಾರದಲ್ಲಿ ತೊಡಗಿ ಸಮಾಜ ದಲ್ಲಿ ಉನ್ನತಮಟ್ಟದಲ್ಲಿ ಇರುವುದು ಎಲ್ಲರಿಗೂ ಸಂತಸವಾಯಿತು. ಇನ್ನೂ ಕೆಲವು ಸ್ನೇಹಿತರು ರಾಜಕೀಯದಲ್ಲಿ ತೊಡಗಿದ್ದು ಸಮಾಜ ಸೇವೆ ಮಾಡುತ್ತಿರುವ ಬಗ್ಗೆ ತಮ್ಮ ಸಂತಸ ಹಂಚಿಕೊಂಡರು.
ಮಹಿಳೆಯರು ಸಹ ತಾವು ಮಾಡಿರುವ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಹಾಗೆಯೇ ಇನ್ನು ಅನೇಕ ಮಹಿಳೆ ಯರು ಗೃಹಿಣಿಯರಾಗಿದ್ದು ತಾವು ಕಂಡಂತಹ ಕನಸುಗಳನ್ನು ತಮ್ಮ ಮಕ್ಕಳಲ್ಲಿ ಈಡೇರಿಸಬೇಕೆಂದು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ವನ್ನು ಕೊಡಿಸುತ್ತಿರುವುದು ಹಾಗೂ ಉತ್ತಮವಾಗಿ ಕೌಟುಂಬವನ್ನು ನಿರ್ವಹಿಸುತ್ತಿರುವುದನ್ನು ಹಂಚಿಕೊಂಡರು.
ಶಾಲಾ ದಿನಗಳಲ್ಲಿ ಸಿದ್ಧಾರ್ಥ ಸನಿವಾಸ ಶಾಲೆಯಲ್ಲಿ ತಾವು ಕಳೆದ ಸಿಹಿಕ್ಷಣಗಳು, ತಲೆಹರಟೆಗಳು, ಆಟೋಟಗಳು, ವಿದ್ಯಾಭ್ಯಾಸ, ತಮಗೆ ಕಲಿಸಿದ ಗುರುವೃಂದವನ್ನು ಸ್ಮರಿಸುತ್ತಾ ಗುರುಗಳಿಗೆ ನಮನ ಸಲ್ಲಿಸಿದರು.
ಈ ಸ್ನೇಹ ಸಮ್ಮಿಲನ ಹೀಗೆಯೇ ಮುಂದುವರಿಯಬೇಕೆಂದು ಪ್ರತಿ ವರ್ಷ ಇದೇ ರೀತಿ ಸ್ನೇಹ ಸಮ್ಮಿಲನ ಮಾಡಲು ನಿಶ್ಚಯಿಸುತ್ತಾ ಮುಸ್ಸಂಜೆ ವಿವಿಧ ರೀತಿಯ ಲಘು ಉಪಹಾರವನ್ನು ಕಾಪಿ, ಟೀ ಯೊಂದಿಗೆ ಸೇವಿಸುತ್ತಾ ಎಲ್ಲರೂ ಒಬ್ಬೊಬ್ಬರನ್ನು ಬೀಳ್ಕೊಡುವಾಗ ಎಲ್ಲರಿಗೂ ಸಂತಸದ ಕಂಬನಿ ಕಣ್ಣಿನ ಅಂಚಿನಲ್ಲಿ ಸುಳಿದಾಡುತ್ತಿತ್ತು.