

ಆರೋಗ್ಯ ಇಲಾಖೆಯ ಸೇವೆ ಅನನ್ಯವಾದದು : ಸಿಇಓ ಲತಾಕುಮಾರಿ
ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ 13 ಗ್ರಾ.ಪಂ.ಗಳಿಗೆ ಕ್ಷಯಮುಕ್ತ ಗ್ರಾಮ ಪಂಚಾಯತಿ ಪ್ರಶಸ್ತಿ
ಬ್ಯಾಟರಾಯನಪುರ : ಆರೋಗ್ಯ ಇಲಾಖೆಯ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರ ಸೇವೆ ಅನನ್ಯವಾದುದು, ಅವರ ಪ್ರಾಮಾಣಿಕ ಸೇವೆಯಿಂದಾಗಿ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಓ ಲತಕುಮಾರಿ ಆರೋಗ್ಯ ಇಲಾಖೆಯ ಸೇವೆಯನ್ನು ಶ್ಲಾಘಿಸಿದರು.
ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 13 ಗ್ರಾ.ಪಂ.ಗಳಿಗೆ ಕ್ಷಯಮುಕ್ತ ಗ್ರಾಮ ಪಂಚಾಯತಿ ಪ್ರಶಸ್ತಿ ನೀಡಿ ಮಾತನಾಡಿದ ಅವರು ‘ಕಳೆದ ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಯಲಹಂಕ ಕ್ಷೇತ್ರದ ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಟಯನ್ನು ಕ್ಷಯಮುಕ್ತ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡಬೇಕೆಂಬ ಚಿಕ್ಕದೊಂದು ನಿರ್ಧಾರ ತೆಗೆದುಕೊಂಡೆವು. ಆ ನಿರ್ಧಾರ ತೆಗೆದುಕೊಂಡು ಕೇವಲ ಮೂರು ತಿಂಗಳಾಗಿದೆ ಅಷ್ಟೇ ಆದರೆ ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿಗಳಾಗಿ ಮಾಡಿ, ಇಂದು ಆ ಪಂಚಾಯಿತಿ ಗಳಿಗೆ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ನೀಡುತ್ತಿದ್ದೇವೆ. ಇದು ಸಾಮಾನ್ಯವಾದ ವಿಷಯವಲ್ಲ ಪ್ರಶಸ್ತಿಗಳನ್ನು ಸುಮ್ಮನೆ ನೀಡಲಾಗುವುದಿಲ್ಲ ಅದಕ್ಕೆ ಮಾನದಂಡಗಳಿರುತ್ತವೆ. ಈ ಸಾಧನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆ ಯರಿಗೆ ಕೃತ್ಮಜ್ಞತಾ ಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ನಾವು ಮೊದಲು ನಮ್ಮ ಗ್ರಾಮವನ್ನು, ನಂತರ ತಾಲ್ಲೂಕು, ಬಳಿಕ ನಮ್ಮ ಜಿಲ್ಲೆಯನ್ನು ಕ್ಷಯಮುಕ್ತ ವಾಗುವಂತೆ ಮಾಡುತ್ತಾ ಹೋದರೆ ಮುಂದೊಂದು ದಿನ ನಮ್ಮ ದೇಶವೇ ಕ್ಷಯಮುಕ್ತವಾಗುತ್ತದೆ, ಈ ದಿಸೆಯಲ್ಲಿ ನಾವು ನಮ್ಮ ಪ್ರದೇಶ ವನ್ನು ಕ್ಷಯಮುಕ್ತ ಮಾಡುವ ದಿಸೆಯಲ್ಲಿ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್ ಕ್ಷಯರೋಗ ನಿರ್ಮೂಲನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳಿಗೆ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಕ್ಷಯರೋಗಿ ಗಳಿಗೆ ಪೌಷ್ಟಿಕ ಆಹಾರ ಮತ್ತು ಔಷಧಿಗಳ ಕಿಟ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ರವೀಂದ್ರ ಮೇಠಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ(ಡಿಟಿಓ) ಡಾ.ಎಚ್.ರಮೇಶ್,ಯಲಹಂಕ ತಾಲ್ಲೂಕು ವೈದ್ಯಾಧಿಕಾರಿ ಡಾ.ಶೈಲೇಂದ್ರಕುಮಾರ್, ತಾ.ಪಂ.ಕಾರ್ಯ ನಿರ್ವಹಣಾ ಅಧಿಕಾರಿ ಮಧು ಎಲ್., ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶಸ್ವಿನಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರೇವಣ್ಣ, ಡಿಪಿಸಿ ಅರುಣಾ ಕುಮಾರಿ, ಪಿಪಿಎಂಸಿ ಜಾನಕಿರಾಮ್, ಶವರಾಜ್, ಬೆಟ್ಟಹಲಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಮೀನುಕುಂಟೆ ಗ್ರಾ.ಪಂ.ಅಧ್ಯಕ್ಷ ವಸಂತ್ ಕುಮಾರ್, ಗಂಟಿಗಾನಹಳ್ಳಿ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಪತಿ, ಬೆಟ್ಟಹಲಸೂರು ಪಿಡಿಓ ಲೋಕನಾಥ್, ಕಾರ್ಯದರ್ಶಿ ಸುಬ್ರಮಣ್ಯ ಸೇರಿದಂತೆ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ಹಾಗೂ ವಿವಿಧ ಗ್ರಾ.ಪಂ.ಗಳ ಪಿಡಿಓ ಗಳಿದ್ದರು.