



ಸುರಕ್ಷತಾ ಸೌಲಭ್ಯ ಒದಗಿಸದಿದ್ದರೆ ಟೋಲ್ ಮುಚ್ಚಿ : ಶಾಸಕ ವಿಶ್ವನಾಥ್ ಆಗ್ರಹ
ಯಲಹಂಕ : ಯಲಹಂಕ-ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕಡತನಮಲೆ ಗೇಟ್ ಬಳಿಯಿರುವ ಟೋಲ್ ನಿರ್ವಾಹಕರು ಯಾವುದೇ ಟೋಲ್ ನಿಯಮ ಅಥವಾ ರಸ್ತೆ ನಿಯಮಗಳನ್ನು ಪಾಲಿಸದೆ ಟೋಲ್ ಸಂಗ್ರಹ ಮಾಡುತ್ತಿದ್ದು, ನಿರ್ವಹಣೆಯ ಕೊರತೆಯಿಂದ ವಾಹನ ಸಂಚಾರಿಗಳು ಮತ್ತು ಪಾದಚಾರಿಗಳ ಸಾವಿಗೆ ಕಾರಣವಾಗುತ್ತಿದ್ದಾರೆ, ಕೂಡಲೇ ಸೂಕ್ತ ರೀತಿಯ ರಸ್ತೆ ನಿಯಮಗಳು ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒದಗಿಸದಿದ್ದರೆ ಟೋಲ್ ಮುಚ್ಚಬೇಕೆಂದು ಒತ್ತಾಯಿಸಿ ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಯಲಹಂಕ-ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕಡತನಮಲೆ ಗೇಟ್ ಬಳಿಯಿರುವ ಇರುವ ಟೋಲ್ ನಿರ್ವಾಹಕರು ರಸ್ತೆ ನಿಯಮಗಳು ಮತ್ತು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡದೆ ಟೋಲ್ ವಸೂಲಿ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಅಳವಡಿಸಿರುವ ಡಿವೈಡರ್ ಗಳು ಮತ್ತು ಯು ಟರ್ನ್ ಗಳಿಂದ ಪ್ರತಿನಿತ್ಯ ಹತ್ತಾರು ಅಪಘಾತಗಳು ಸಂಭವಿಸಿ ಪಾದಚಾರಿಗಳು, ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾರ್ಗದ ಮೇಲೆ ಅಂಗಡಿ ಮುಂಗಟ್ಟುಗಳಿಗೆ ಅನುಮತಿ ನೀಡಿ ಅವರಿಂದ ಟೋಲ್ ನವರು ಹಣ ವಸೂಲಿ ಮಾಡುತ್ತಿದ್ದಾರೆ. ರಸ್ತೆಗಾಗಿ ಭೂಮಿ ನೀಡಿರುವ ಹಲವು ರೈತರಿಗೆ ಐದು ವರ್ಷಗಳು ಕಳೆದಿದ್ದರೂ ಪರಿಹಾರದ ಹಣ ನೀಡಿಲ್ಲ. ರಸ್ತೆ ಸ್ವಚ್ಛಗೊಳಿಸುತ್ತಿಲ್ಲ, ರಸ್ತೆ ದೀಪಗಳಿಲ್ಲ, ಎಲ್ಲಿಯೂ ಸಮರ್ಪಕ ಶೌಚಾಲಯ ನಿರ್ಮಿಸಿಲ್ಲ, ಅಪಘಾತ ವಾದಾಗ ಅವರನ್ನು ಸಾಗಿಸಲು ಆಂಬುಲೆನ್ಸ್ ಇಟ್ಟಿರ ಬೇಕು ಮತ್ತು ವಾಹನ ತೆರವುಗೊಳಿಸಲುಟೋಯಿಂಗ್ ವಾಹನ ಇಟ್ಟೀರಬೇಕೆಂಬ ನಿಯಮವಿದೆ ಅದರೆ ಟೋಯಿಂಗ್ ವಾಹನವಿಲ್ಲ. ರಸ್ತೆ ಬದಿಯಲ್ಲಿ ಡ್ರೈನೇಜ್ ನಿರ್ಮಿಸಿಲ್ಲ, ರಸ್ತೆಯ ಇಕ್ಕೆಲಗಳಲ್ಲಿನ 20 ಅಡಿಗಳ ಸರ್ವೀಸ್ ರಸ್ತೆಯಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಮುಚ್ಚಿ ಹೋಗಿದೆ. ಪೆಡೆಸ್ಟ್ರಿಯನ್ ಕ್ರಾಸಿಂಗ್ ವ್ಯವಸ್ಥೆ ಯಿಲ್ಲ, ಬ್ಲಿಂಕಿಂಗ್ ದೀಪಗಳಿಲ್ಲ ರಸ್ತೆ ನಿರ್ವಹಣೆ ಯಂತೂ ಶೂನ್ಯವಾಗಿದೆ. ಈ ರೀತಿಯ ಶೂನ್ಯ ನಿರ್ವಹಣೆಗೆ ಟೋಲ್ ಕಟ್ಟಬೇಕಾ ಎಂದು ಆಕ್ರೋಶ ಹೊರಹಾಕಿದರು.
ಆರಂಭದಲ್ಲಿ ಇಲ್ಲಿನ ಸುತ್ತಮುತ್ತಲಿನ ರೈತರು ಮತ್ತು ನಾಗರೀಕರಿಗೆ ಟೋಲ್ ಫ್ರೀ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ ಕೆಲವು ದಿನಗಳಲ್ಲೇ ಅದನ್ನು ಸ್ಥಗಿತಗೊಳಿಸಿ ಸ್ಥಳೀಯ ರೈತರು ನಾಗರೀಕರಿಂದ ಟೋಲ್ ಸಂಗ್ರಹಿಸುತ್ತಿದ್ದಾರೆ. ಹತ್ತಾರು ಬಾರಿ ಇದೇ ರಸ್ತೆಯಲ್ಲಿ ಓಡಾಡಬೇಕಿರುವ ಇಲ್ಲಿನ ರೈತರು ನಾಗರೀಕರು ಹತ್ತಾರು ಬಾರಿಯೂ ಟೋಲ್ ನೀಡ ಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಕೆ.ಆರ್.ಡಿ.ಎಲ್.ಗೆ ಮನವಿ ಪತ್ರ ನೀಡಿದ್ದೇವೆ, ಸ್ಥಳೀಯ ಗ್ರಾ.ಪಂ.ವತಿಯಿಂದ ಟೋಲ್ ನಿರ್ವಾಹಕ ರಿಗೂ ಸಹ ಮನವಿ ಪತ್ರ ನೀಡಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸು ತ್ತಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಹದಿನೈದು ದಿನಗಳ ಗಡುವು ನೀಡುತ್ತೇವೆ ಅಷ್ಟರೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಇಲ್ಲಿ ಸಂಭವಿಸುವ ಅಪಘಾತಗಳಲ್ಲಿ ಮರಣಿಸುವ ಜನರಿಗೆ ಟೋಲ್ ನವರೇ ಐವತ್ತು ಲಕ್ಷ ಪರಿಹಾರ ನೀಡಬೇಕಾಗುತ್ತದೆ. ಇಂದು ನೀಡಿರುವ ಆಗ್ರಹ ಪತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸರ್ಕಾರಕ್ಕೆ ನೀಡಿರುವ ಠೇವಣಿ ಹಣವನ್ನು ಹಿಂಪಡೆದು ಟೋಲ್ ಮುಚ್ಚಿಕೊಂಡು ಹೋಗಿ, ನಿರ್ವಹಣೆಯೇ ಇಲ್ಲದ ನಿಮ್ಮ ಟೋಲ್ ನ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ ಎಂದರು.
ಸುರಕ್ಷತಾ ಕ್ರಮಗಳು ಮತ್ತು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಪೋಲಿಸ್ ಅಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ವಿಶ್ವನಾಥಪುರ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಕೆ.ಆರ್. ತಿಮ್ಮೇಗೌಡ, ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ, ಮುನಿದಾಸಪ್ಪ, ಪ್ರಶಾಂತ್ ರೆಡ್ಡಿ, ವಸಂತ್ ಅರಕೆರೆ, ರಾಜೇಂದ್ರ ಬೈರಾಪುರ, ಜಗದೀಶ್, ಜಯಣ್ಣ, ಅಪ್ಪಣ್ಣಗೌಡ, ಪವನ್ ಸೇರಿದಂತ ಅರಕೆರೆ ಸಿಂಗನಾಯಕನಹಳ್ಳಿ, ರಾಜಾನುಕುಂಟೆ ಪಂಚಾಯಿತಿಗಳ ಸದಸ್ಯರು, ಚುನಾಯಿತ ಪ್ರತಿನಿಧಿ ಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳಿದ್ದರು.