ಪರಮಾತ್ಮನ ಆ ಜಗನ್ನಾಟಕ ಕೇವಲ ಮಾಯೆಯಿಂದ ಕೂಡಿದೆ. ಅದರ ನೃತ್ಯ ಬರೀ ತೋರಿಕೆಯಷ್ಟೇ!. ಯಾರಿಗಾದರೂ ಪರಮ ಚೇತನದ ಮೂಲ ರೂಪದ ಅರಿವಾದರೆ ದ್ವಂದ್ವಗಳಾಗಲೀ ಸಂದೇಹಗಲಾಗಲೀ ಇರುವುದಿಲ್ಲ. ಏಕೆಂದರೆ, ತನ್ನ ನಿಜರೂಪದಲ್ಲಿ ಆ ಪರಮಾತ್ಮ ತನ್ನ ಸೃಷ್ಟಿಯಿಂದ ನಿರ್ಲಿಪ್ತ, ಆದರೆ ಈ ಜಗನ್ನಾಟಕದ ಚಿತ್ರ ವಿಚಿತ್ರ ನಾಟ್ಯ ಮತ್ತು ನಡಿಗೆಯನ್ನು ತನ್ನ ವಿನೋದಕ್ಕಾಗಿ ಲೀಲೆಯಂತೆ ನಡೆಸುತ್ತಿದ್ದಾನೆ ಎಂದು ಈ ಕಗ್ಗದಲ್ಲಿ ಪಾನ್ಯ ಗುಂಡಪ್ಪನವರು ವ್ಯಾಖ್ಯಾನಮಾಡಿದ್ದಾನೋಡಿ ಈ ಜಗತ್ತು ಎಷ್ಟೊಂದು ಸುಂದರ, ನೋಡುವವರಿಗೆ. ಎಷ್ಟೊಂದು ರೂಪಗಳು ಎಷ್ಟೊಂದು ಬಣ್ಣಗಳು ಎಷ್ಟೊಂದು ಭಾವಗಳು ಎಷ್ಟೊಂದು ರಾಗಗಳು. ಎಲ್ಲವೂ ಅವನೇ ಆದರೂ ತಾನು ಯಾವುದೂ ಅಲ್ಲ ” ಅದು ಅದೇ” ಎನ್ನುವ ಭಾವವನ್ನು ಬಿತ್ತಿ ಪ್ರತಿಯೊಂದೂ ಮೂಲದಿಂದ ಬೇರೆಯಾಗಿ ಇದು “ಅದೇ” ಎನ್ನುವಭಾವವನ್ನು ತೋರುತ್ತಾ, ಆ ಪರಮಾತ್ಮ ತನ್ನ ಲೀಲೆಯನ್ನು ಮೆರೆಯುತ್ತಿದ್ದಾನೆ. ನಾವು ಕಾಣುವ ಜಗತ್ತು, ನಾ ಹಿಂದೆ ಹೇಳಿದಂತೆ ಜಡ ಮತ್ತು ಜೀವ (ಚೇತನ ) ದಿಂದಾಗಿದೆ, ಎರಡಕ್ಕೂ ಮೂಲ ಆ ಪರಮ ಚೇತನವೇ! ಆದರೆ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುತ್ತೇವೆ. ಆಕಾಶ, ಬೆಟ್ಟ, ನದಿ, ಸಮುದ್ರ, ಕಾಡು, ಮರ. ಗಿಡ, ಬಳ್ಳಿ, ಹೂ, ಬಣ್ಣ, ರುಚಿ, ಗುಣ ಸ್ವಭಾವ ಹಾವು, ಚೇಳು ಆನೆ, ಇರುವೆ, ಹಲ್ಲಿ,ಪಕ್ಷಿ, ಪ್ರಾಣಿ, ಮನುಷ್ಯ, ಕ್ರಿಮಿ, ಕೀಟ, ಹೆಣ್ಣು, ಗಂಡು ಮುಂತಾದವುಗಳಾಗಿ ಎಲ್ಲವನ್ನೂ ಅದರ ಬಾಹ್ಯ ಸ್ವರೂಪದಿಂದ ಗುರುತಿಸುತ್ತೇವೆ. ಏಕೆಂದರೆ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದು ಕೇವಲ ಬಾಹ್ಯ ರೂಪವಷ್ಟೇ. ಆದರೆ ಈ ಬಾಹ್ಯ ರೂಪಗಳೆಲ್ಲವೂ ಕೇವಲ ತಾತ್ಕಾಲಿಕ ರೂಪಗಳಷ್ಟೇ. ಅಂದರೆ ಅವು ನಿತ್ಯವಲ್ಲ. ನಿತ್ಯವಲ್ಲದಾದ್ದರಿಂದ ಸತ್ಯವಲ್ಲ. ಅಂದರೆ ಅಸತ್ಯ. ಅಸತ್ಯವನ್ನು ಸತ್ಯವನ್ನು ನಂಬುವುದೇ ಮಾಯೆ ಅಥವಾ ಭ್ರಮೆ. ಅಂತಹ ಭ್ರಮೆಗೆ ಕಾರಣನಾದ ಪರಮಾತ್ಮ, ತಾನೂ ಈ ಭ್ರಮೆಯಲ್ಲಿ, ಚೇತನನಾಗಿ ಇದ್ದೂ ಕಾಣದಂಗೆ, ತೋರದಂಗೆ, ಗುರುತಿಸಲ್ಪಡದಂಗೆ ಇದ್ದು ತನ್ನ ಲೀಲಾವಿನೋದವನ್ನು ಮೆರೆದಿದ್ದಾನೆ. ತೋರಿಕೆಗೆ ಎಲ್ಲದರಲ್ಲಿ ಇದ್ದೇನೆ ಎನ್ನುವ ಭಾವ ಬಿತ್ತಿ, ಯಾವುದರಲ್ಲಿ ಇದ್ದಾನೋ ಅದನ್ನು ನಾಶಪಡಿಸಿ ಕಾಣದಂತೆ ಮಾಯವಾಗುವುದು ಅವನ ಲೀಲಾವಿನೋದವಲ್ಲದೆ ಮತ್ತೇನು ವಾಚಕರೆ, ಆದರೆ ಅವನು “ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ” ಎಂದಿದ್ದಾರೆ ಗುಂಡಪ್ಪನವರು. ಅಂದರೆ ಮೂಲದಲ್ಲಿ ಅವನು ಯಾವುದಕ್ಕೂ ಅಂಟದೆ ಇದ್ದೂ ಇಲ್ಲದಂಗೆ ಇದ್ದು, ಈ ಜಗನ್ನಾಟಕವನ್ನು ತಾನೇ ರಚಿಸಿದ ಒಂದು ನಿಯಮಕ್ಕೆ ಅನುಸಾರವಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ. ಅದನ್ನು ನಾವು ಸತ್ಯವೆಂದು ನಂಬಿ ಈ ಪ್ರಪಂಚಕ್ಕೆ ಮತ್ತು ಇದರೊಳಗಿನ ಎಲ್ಲಕ್ಕೂ ಅಂಟಿಕೊಂಡು ತೊಲಳುತ್ತಿದ್ದೇವೆ. ಅದೂ ಸಹ ಅವನ ನಾಟಕದ ನಿರ್ದೇಶನದ ಒಂದು ಭಾಗ . ಮಹಾ ಮಾಯಾವಿ ಅವನು. ಆದರೆ ಆ ಬೃಹತ್ ಚೇತನದ ಮೂಲರೂಪವನ್ನು ಅರಿತವರಿಗೆ ಸಂದೇಹವಿಲ್ಲದೆ, ಅವನ ಅಂದರೆ ಆ ಪರಮ ಚೇತನದ ನಿಜ ಸ್ವರೂಪ ಅರಿವಿಗೆ ಬಂದರೆ ಭ್ರಾಂತಿ ಭ್ರಮೆಗಳಿಂದ ಹೊರಬರಬಹುದು. ಇಡೀ ಸೃಷ್ಟಿಯ ಸಮಗ್ರತೆಯನ್ನೂ ಮತ್ತು ಏಕತ್ವವನ್ನೂ ನಾವು ಕಾಣಲು ಪ್ರಯತ್ನಿಸಬೇಕು. ನಾವೂ ಈ ರೀತಿಯ ಪ್ರಯತ್ನ ಮಾಡಬಹುದು. ಇಂದಲ್ಲ, ಎಂದೋ ಒಂದು ದಿನ ನಮಗೂ ಅರಿವುಂಟಾಗಬಹುದು.