





ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆವಿಷ್ಕಾರ ಮಾತ್ರವಲ್ಲ ಎಲ್ಲರ ಬದುಕು ರೂಪಿಸುವ ಮೂಲಭೂತ ಶಕ್ತಿ : ಶಶಿಶೇಖರ್ ವೆಂಪತಿ
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವ :
ಯಲಹಂಕ : ಕೃತಕ ಬುದ್ಧಿಮತ್ತೆ ಕೇವಲ ತಂತ್ರಜ್ಞಾನದ ಆವಿಷ್ಕಾರ ಮಾತ್ರವಲ್ಲ, ಅದು ಎಲ್ಲರ ಬದುಕನ್ನು ಬದಲಿಸುವ, ಹೊಸ ಆಯಾಮಗಳ ಮೂಲಕ ಪುನರ್ ರೂಪಿಸುವ ಮೂಲಭೂತ ಶಕ್ತಿಯಾಗಿದೆ ಎಂದು ಡೀಪ್ ಟೆಕ್ ಫಾರ್ ಭಾರತ್ ಫೌಂಡೇಶನ್ ನ ಸಹ ಸಂಸ್ಥಾಪಕ, ಪ್ರಸಾರ ಭಾರತಿಯ ವಿಶ್ರಾಂತ ಸಿಇಓ ಶಶಿಶೇಖರ್ ವೆಂಪತಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ನಾವು ಅಂದುಕೊಂಡದ್ದನ್ನು ತುರ್ತಾಗಿ ಅನ್ವೇಷಿಸಲು ಕೃತಕ ಬುದ್ಧಿಮತ್ತೆ ವೇಗವರ್ಧಕದ ರೀತಿಯಲ್ಲಿ ಕೆಲಸ ಮಾಡುತ್ತದೆ, ಸೃಜನಾತ್ಮಕವಾಗಿ ಮತ್ತಷ್ಟು ಯೋಚಿಸಲು ಮತ್ತು ಅನ್ವೇಷಿಸಲು ಪ್ರೇರೇಪಿಸುತ್ತದೆ. ತಂತ್ರಜ್ಞಾನ ಕಲಿಸುವ ನಮ್ಮ ಶಿಕ್ಷಣ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ನೆರವಿನಿಂದ ವಿದ್ಯಾರ್ಥಿಗಳನ್ನು ಅನ್ವೇಷಣಾ ಕ್ಷೇತ್ರದಲ್ಲಿ ದಾಪುಗಾಲಿಡುವಂತೆ ಸಜ್ಜುಗೊಳಿಸಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮತ್ತು ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದ್ದು, ಇದರ ಈಡೇರಿಕೆಗಾಗಿ ಶೀಘ್ರದಲ್ಲೇ 1 ಲಕ್ಷ ಕೋಟಿ ರು.ಗಳ ಅನುದಾನ ನೀಡಲಿದ್ದಾರೆ. ಸ್ವಾತಂತ್ರ್ಯದ ನೂರನೇ ವರ್ಷಾಚರಣೆ(2047) ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು, ವಿಶ್ವಗುರು ಆಗಬೇಕೆಂಬುದು ಅವರ ಮಹತ್ವಾಕಾಂಕ್ಷೆಯಾಗಿದೆ.
2001ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಇಂದು ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ದೇಶವಿದೇಶಗಳ ತಂತ್ರಜ್ಞರ ಗಮನ ಸೆಳೆದಿದೆ. 24 ವರ್ಷಗಳ ಹಿಂದೆ ಬಿತ್ತಿದ್ದ ಕನಸಿನ ಬೀಜ ಇಂದು ನನಸಾಗಿ ಬೃಹತ್ ವೃಕ್ಷವಾಗಿ ಸಹಸ್ರಾರು ವಿದ್ಯಾರ್ಥಿಗಳನ್ನು ಅತ್ಯುತ್ತಮ ತಂತ್ರಜ್ಞನರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿ, ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ಲೋಬಲ್ ಮೀಡಿಯಾ ಎಜುಕೇಶನ್ ಕೌನ್ಸಿಲ್ ನ ಅಧ್ಯಕ್ಷ ಡಾ.ಕೆ.ಜಿ.ಸುರೇಶ್ ಮಾತನಾಡಿ ‘ನಮ್ಮ ಶಿಕ್ಷಣ ಸಂಸ್ಥೆಗಳು ಸಹಸ್ರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಭಾರತೀಯ ಜ್ಞಾನ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿ ಪರಿಚಯಿಸಬೇಕು, ಹಾಗೆಂದ ಮಾತ್ರಕ್ಕೆ ಹಾಲಿ ಇರುವ ಪಠ್ಯಕ್ರಮವನ್ನು ಬದಲಿಸಬೇಕು ಎಂದಲ್ಲ, ಇರುವ ಶಿಕ್ಷಣದ ಜತೆಗೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸಮ್ಮಿಲನಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ನೈತಿಕ ತಳಪಾಯ ಒದಗಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ 20 ವರ್ಷಕ್ಕೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ್ ಶೆಟ್ಟಿ ವಹಿಸಿದ್ದು, ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ಮುಡಿತ್ತಾಯ,ನಿಟ್ಟೆ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ.ನಾಗರಾಜ್, ತಂತ್ರಜ್ಞಾನ ಕಲಿಕೆ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ, ಬೆಂಗಳೂರು ಕ್ಯಾಂಪಸ್ ನ ಉಪಾಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.
