: ಜ್ಞಾನಕ್ಕೆ ಅಜ್ಞಾನದ ಆವರಣ ಸುತ್ತಿಕೊಂಡಿದೆ. ಮಹತ್ತರ ಕಾರ್ಯಗಳನ್ನು ಸಾಧಿಸ ಹೊರಟಾಗ, ಅಜ್ಞಾನ ನಮ್ಮ ಮನಸ್ಸನ್ನು ಮೋಡದಂತೆ ಮುಸುಕಿಬಿಡುತ್ತದೆ. ಅಜ್ಞಾನ ನಮ್ಮನ್ನು ಸುತ್ತಿಕೊಂದಿರುವಾಗ, ಜ್ಞಾನವನ್ನು ಬೆದಕಿ, ಕೆದಕಿ ತೆಗೆಯುವುದು ಬಲು ಕಷ್ಟ. ಇಡೀ ಜಗತ್ತೇ ಜ್ಞಾನಾಜ್ಞಾನಗಳ ಮಿಶ್ರಣವೆಂಬುದೆ ಗುಂಡಪ್ಪನವರ ಈ ಕಗ್ಗದ ಹೂರಣ.
ಜ್ಞಾನವೆಂದರೆ ಏನು? ಎಂಬುದು ಪ್ರಶ್ನೆ ಯಾವ ವಿಷಯಗಳು ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ ಕೊಂಡುಹೋಗುತ್ತದೋ, ಯಾವ ವಿಷಯಗಳು ನಮ್ಮನ್ನು ಅಂಧಕಾರದಿಂದ ಬೆಳಕಿಗೆ ಕೊಂಡುಹೋಗುತ್ತದೋ ಅದೇ ಜ್ಞಾನ. ನಮ್ಮ ಅರಿವಿಗೆ ಬಂದದ್ದೆಲ್ಲ ಜ್ಞಾನವಾಗುವುದಿಲ್ಲ. ಅಂತಹ ಶುದ್ಧ ಜ್ಞಾನವು ಎಲ್ಲೆಡೆಯಲ್ಲಿ ಇದೆ. ಆದರೆ ಅದನ್ನು ಅಜ್ಞಾನದ ಆವರಣ ಸುತ್ತಿಕೊಂಡಿದೆ, ಎಂದರೆ, ನಮಗೆ ಒಂದು ವಿಷಯದ ಅರಿವಿದ್ದರೂ ಅದು ನಮ್ಮ ಅಂತರ್ಯದಲ್ಲಿ ನೆಲೆಯಾಗಿ ಗಟ್ಟಿಯಾಗುವುದಿಲ್ಲ. ಕಾರಣವೇನೆಂದರೆ ಅದನ್ನು ಸಂಪೂರ್ಣವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು, ನಮ್ಮ ಪೂರ್ವಾಗ್ರಹಗಳೆಂಬ, ಅಹಂಕಾರವೆಂಬ, ಮಮತೆ ಮೋಹಗಳೆಂಬ, ಅಜ್ಞಾನದ ತುಣುಕುಗಳು, ನಮ್ಮ ಅರಿವನ್ನು ಸುತ್ತುವರಿದು, ಮಾಯೆಯಂಬ ಮುಸುಕಿಂದ ಕವಿದುಬಿಟ್ಟಿರುತ್ತದೆ. ಅದನ್ನು ತೊಲಗಿಸುವವರೆಗೂ ನಮಗೆ ಸತ್ಯದ ದರ್ಶನವಾಗುವುದಿಲ್ಲ.ಅಸತ್ಯವೆಂದರೆ ಅಜ್ಞಾನವೆಂದರೆ ಏನು? ಇಲ್ಲದ್ದನ್ನು ಇದೆಯಂದೂ, ಅಲ್ಲದನ್ನು ಹೌದೆಂದೂ ಭಾವಿಸುವುದೇ ಅಜ್ಞಾನ. ವಾಚಕರೆ, ನೋಡಿ ನಮ್ಮ ಬದುಕಿನಲ್ಲಿ ಇಂತಹ ಅಜ್ಞಾನ ಹೇರಳವಾಗಿ ತುಂಬಿಕೊಂಡಿದೆ. ನಮ್ಮ ಅಚಾರ, ವಿಚಾರ, ವ್ಯವಹಾರದಲೆಲ್ಲ, ಇಂತಹ ಅಜ್ಞಾನವೇ ಪ್ರಧಾನವಾಗಿರುತ್ತದೆ. ನಮಗಿರುವುದು ಅಜ್ಞಾನವೆಂದೂ ನಮಗೆ ಬಹುಪಾಲು ಗೊತ್ತು. ಆದರೆ ಅದರ ಹೊರಗಿಂದ ಬರಲು ನಮ್ಮನ್ನು ನಮ್ಮ ಮೋಹ ವ್ಯಾಮೋಹಗಳು ಬಿಡುವುದಿಲ್ಲ. ನಾವೂ ಸಹ ಅಂತ ಮೋಹ ವ್ಯಾಮೋಹಗಳ ಬಂಧನದಿಂದ ಸುಲಭವಾಗಿ ಹೊರಬರಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ನಮಗೆ ಈ ಪ್ರಪಂಚದಲ್ಲಿ ಇಂದ್ರಿಯ ಸುಖವನ್ನು ಕೊಡುತ್ತದೆ. ಅದನ್ನು ಬಿಡಲು ಮತ್ತು ಅದರಿಂದ ಮುಕ್ತರಾಗಲು ನಮಗೆ ಇಷ್ಟವಿಲ್ಲದಾಗ ಇನ್ನು ಅದು ನಮ್ಮನ್ನು ಬಿಡುವುದೆಂತು ನಮಗೆ ಜ್ಞಾನ ಬರುವುದೆಂತು . ಇದು ” ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು” ಎನ್ನುವ ಗಾದೆಯಂತೆ, ಅಲ್ಲವೇ? ನಾವು ಮೊದಲು ಜ್ಞಾನ ಪಡೆಯಲು ಗಟ್ಟಿಯಾದ ಆಸೆ ಪಡಬೇಕು, ಪ್ರಯತ್ನಪಡಬೇಕು, ಅಂತಹ ಜ್ಞಾನ ಪಡೆಯಲು ಯಾವುದು ನಮಗೆ ಅಡ್ಡವಾಗಿ ಸುತ್ತುವರೆದು ಇರುತ್ತದೋ ಅದನ್ನು ನಿರ್ದಾಕ್ಷಿಣ್ಯವಾಗಿ ಪ್ರಯತ್ನಪೂರ್ವಕವಾಗಿ ತೊಲಗಿಸಬೇಕು. ಆಗ ನಮಗೆ ಜ್ಞಾನ ಬರಬಹುದು.ಈ ಜಗತ್ತು ಜ್ಞಾನ ಅಜ್ಞಾನಗಳಿಂದ ಕೂಡಿದೆ. ನಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳಬೇಕು ಅದು ವಿವೇಕವಂತರ ಕೆಲಸ. ಆಯ್ಕೆ ನಮ್ಮದು. ನಮ್ಮ ಆಯ್ಕೆಯಂತೆ ನಮಗೆ ಫಲ ಲಭಿಸುವುದು. ವಾಚಕರೆ ನಿಮ್ಮ ಆಯ್ಕೆ ಸರಿಯಾಗಲಿ ಎಂದು ಹಾರೈಸುತ್ತಾ.