ಎಲ್ಲೆಡೆ ಸ್ವಚ್ಛತೆ, ಎಲ್ಲರಲ್ಲೂ ಸ್ವಚ್ಛತೆ ನಮ್ಮ ಧ್ಯೇಯವಾಗಬೇಕು : ಡಾ.ಬಿ.ಆರ್.ಗುಲಾಟಿ
ಯಲಹಂಕ : ಸ್ವಚ್ಛತೆ ಎಂಬುದು ಕೇವಲ ನಮ್ಮ ಮನೆ, ಕಚೇರಿಗಷ್ಟೇ ಸೀಮಿತವಾಗದೆ, ಎಲ್ಲೆಡೆ ಸ್ವಚ್ಛತೆ, ಎಲ್ಲರಲ್ಲೂ ಸ್ವಚ್ಛತೆ ನಮ್ಮ ಧ್ಯೇಯವಾಗಬೇಕು ಎಂದು ಐಸಿಎಆರ್-ನಿವೇದಿ ಸಂಸ್ಥೆಯ ನಿರ್ದೇಶಕ ಡಾ.ಬಲದೇವ್ ರಾಜ್ ಗುಲಾಟಿ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪವಿರುವ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ’ಯಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಪಾಕ್ಷಿಕ-2025’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಜನತೆ ಕೇವಲ ತಮ್ಮ ಮನೆ ಅಥವಾ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿದರೆ ಅದು ಸಮಗ್ರ ಸ್ವಚ್ಛತೆ ಎನಿಸಿಕೊಳ್ಳುವುದಿಲ್ಲ, ತಮ್ಮ ಸುತ್ತಮುತ್ತಲಿನ ಪರಿಸರ, ತಾವು ಸಾಕುವ ಪ್ರಾಣಿಗಳಲ್ಲಿ ಸಹ ಗರಿಷ್ಢ ಸ್ವಚ್ಛತೆ ಮತ್ತು ಆರೋಗ್ಯಪೂರ್ಣ ಶುಚಿತ್ವ, ನೈರ್ಮಲ್ಯವನ್ನು ಕಾಪಾಡಬೇಕು ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಐಸಿಎಆರ್-ನಿವೇದಿ ಸಂಸ್ಥೆಯ ವತಿಯಿಂದ ಡಿ.16ರಿಂದ ಡಿ.31ರವರೆಗೆ ಆಯೋಜಿಸಿದ್ದ ಸ್ವಚ್ಛತಾ ಪಾಕ್ಷಿಕ್ ಕಾರ್ಯಕ್ರಮದ ಅಂಗವಾಗಿ ಕಚೇರಿ ಆವರಣ ಸ್ವಚ್ಛತೆ, ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಸಾಮುದಾಯಿಕ ಅರಿವು ಕಾರ್ಯಕ್ರಮ, ರೈತ ದಿನಾಚರಣೆ, ಪಶುಗಳ ಸ್ವಚ್ಛತೆ, ಆರೋಗ್ಯ, ಶುಚಿತ್ವ ಕುರಿತು ಕಾರ್ಯಾಗಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ವಚ್ಛತಾ ಪಾಕ್ಷಕ್-2025 ಅನ್ನು ಆಚರಿಸಲಾಗಿದೆ. ಸಾಮುದಾಯಿಕ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಇಂದು ಸಮಾರೋಪಗೊಳ್ಳುತ್ತಿರುವ ಸ್ವಚ್ಚತಾ ಪಾಕ್ಷಿಕ ಅಭಿಯಾನ ಇದು ಅಂತ್ಯವಲ್ಲ ಆರಂಭ, ಸ್ವಚ್ಛತೆ ಎಂಬುದು ಕೇವಲ ಒಂದು ದಿನ, ಒಂದು ವಾರ, ಒಂದು ತಿಂಗಳ ಕಾರ್ಯಕ್ರಮವಲ್ಲ ಅದು ನಿತ್ಯ ನಿರಂತರ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಐಸಿಎಆರ್-ನಿವೇದಿ ಸಂಸ್ಥೆಯ ಹಿರಿಯ ಮುಖ್ಯ ವಿಜ್ಞಾನಿ ಡಾ.ರಾಜೇಶ್ಚರಿ ಶೋಮ್, ಹಿರಿಯ ವಿಜ್ಞಾನಿ ಡಾ.ನಾರಾಯಣನ್ ಜಿ. ಸೇರಿದಂತೆ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *