ಭಾರತದ ಆರ್ಥಿಕತೆಗೆ ಎಐ ಬಲ: 2030ರ ವೇಳೆಗೆ ಎಐನಿಂದ 500 ಶತಕೋಟಿ ಡಾಲರ್ ಕೊಡುಗೆಯ ನಿರೀಕ್ಷೆ- IBM- ಇಂಡಿಯಾ ಎಐ ಅಧ್ಯಯನ ವರದಿಯಲ್ಲಿ ಘೋಷಣೆ

• ಭಾರತವು ಜಾಗತಿಕ ಎಐ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಬೆನ್ನಲ್ಲೇ, ಎಐ ನೇರವಾಗಿ ದೇಶದ ಆರ್ಥಿಕತೆಯನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಶೇ.80ರಷ್ಟು ಭಾರತೀಯ ಉದ್ಯಮ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
• 2030ರ ವೇಳೆಗೆ ಭಾರತವು ಪ್ರಮುಖ ಜಾಗತಿಕ ಎಐ ರಾಷ್ಟ್ರವಾಗಿ ಉದಯಿಸಲಿದೆ ಎಂದು ಶೇ.73ರಷ್ಟು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು , ಭಾರತ, ಮೇ 13, 2026: IBM ಇನ್‌ಸ್ಟಿಟ್ಯೂಟ್ ಫಾರ್ ಬಿಸಿನೆಸ್ ವ್ಯಾಲ್ಯೂ ಮತ್ತು ಇಂಡಿಯಾ ಎಐ ಸಂಸ್ಥೆಗಳು ಜಂಟಿಯಾಗಿ ಎಐ ಕುರಿತು ಮಹತ್ವದ ಅಧ್ಯಯನ ನಡೆಸಿದ್ದು, ಇದೀಗ ಆ ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ಅಧ್ಯಯನ ವರದಿಯು, ಎಐ ಕೇವಲ ಪ್ರಯೋಗದ ಹಂತವನ್ನು ಮೀರಿ ರಾಷ್ಟ್ರೀಯ ಬೆಳವಣಿಗೆಯ ಮೂಲಶಕ್ತಿಯಾಗಿ ಬದಲಾಗುತ್ತಿದ್ದು, ಭಾರತವು ತನ್ನ ಆರ್ಥಿಕ ಬದಲಾವಣೆಯ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದೆ. 2030ರ ವೇಳೆಗೆ ಎಐ ತಂತ್ರಜ್ಞಾನವು ಭಾರತದ ಆರ್ಥಿಕತೆಗೆ 500 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚಿನ ಕೊಡುಗೆ ನೀಡಲಿದ್ದು, ವಿಶ್ವದ ಅತ್ಯಂತ ಕ್ರಿಯಾತ್ಮಕ ಎಐ ಆಧರಿತ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವನ್ನು ಪ್ರಮುಖ ಘಟ್ಟದಲ್ಲಿ ನಿಲ್ಲಿಸಲಿದೆ ಎಂದು ತಿಳಿಸಿದೆ.

‘ಭರವಸೆಯಿಂದ ಶಕ್ತಿಯವರೆಗೆ ಎಂಬ ಶೀರ್ಷಿಕೆ: ಎಐ ಭಾರತದ ಆರ್ಥಿಕ ಭವಿಷ್ಯವನ್ನು ಹೇಗೆ ಮರು ರೂಪಿಸುತ್ತಿದೆ’ ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯು, ಎಐ ಮಹತ್ವಾಕಾಂಕ್ಷೆ ಮತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ ತುರ್ತು ಅಗತ್ಯದ ಮಹತ್ವವನ್ನು ತೋರಿಸುತ್ತದೆ. ಐವರಲ್ಲಿ ನಾಲ್ಕು ಉದ್ಯಮ ಮುಖಂಡರು ಎಐ ಮೇಲಿನ ಹೂಡಿಕೆಗಳು ನೇರವಾಗಿ ಭಾರತದ ಜಿಡಿಪಿ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ, ಹಾಗೂ ಶೇ. 73ರಷ್ಟು ಮಂದಿ 2030ರ ವೇಳೆಗೆ ಭಾರತವು ಪ್ರಮುಖ ಜಾಗತಿಕ ಎಐ ರಾಷ್ಟ್ರವಾಗಿ ಹೊರಹೊಮ್ಮುವ ನಂಬಿಕೆ ಹೊಂದಿದ್ದಾರೆ.
ಈ ಸಂಶೋಧನೆಯು ಒಂದು ನಿರ್ಣಾಯಕ ಅಂಶ ಬಹಿರಂಗಪಡಿಸಿದ್ದು, ಎಐ ಅಳವಡಿಕೆಯ ಅಂತರವನ್ನು ಬಹಿರಂಗಪಡಿಸಿದೆ. ಸಮೀಕ್ಷೆಗೆ ಒಳಪಟ್ಟ ಶೇ. 72ರಷ್ಟು ಸಂಸ್ಥೆಗಳು ಎಐ ಅಳವಡಿಕೆಯಲ್ಲಿ ತಾವು ಜಾಗತಿಕ ಸಮಾನಸ್ಕರಿಗಿಂತ ಹಿಂದೆ ಇರುವುದನ್ನು ಒಪ್ಪಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಮಹತ್ವಾಕಾಂಕ್ಷೆ ಮತ್ತು ಕಾರ್ಯಗತಗೊಳಿಸುವಿಕೆಯ ನಡುವಿನ ಈ ಕಂದಕವನ್ನು ಸರಿಪಡಿಸುವುದು ಜಾಗತಿಕ ಎಐ ಆರ್ಥಿಕತೆಯಲ್ಲಿ ಭಾರತದ ನಾಯಕತ್ವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿಗಳಾದ ಶ್ರೀ ಎಸ್. ಕೃಷ್ಣನ್ ಅವರು, ” ಭಾರತವು ಈಗ ಕೇವಲ ಜಾಗತಿಕ ಕೃತಕ ಬುದ್ಧಿಮತ್ತೆಯ ಚರ್ಚೆಗಳಲ್ಲಿ ಭಾಗವಹಿಸುವ ದೇಶವಾಗಿ ಉಳಿದಿಲ್ಲ; ಬದಲಿಗೆ ಆ ಚರ್ಚೆಗಳನ್ನು ಮುನ್ನಡೆಸುವ ಮತ್ತು ರೂಪಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮ ದೃಷ್ಟಿಕೋನ ಅತ್ಯಂತ ಸ್ಪಷ್ಟವಾಗಿದೆ. ಎಐ ಎನ್ನುವುದು ಕೇವಲ ಯಂತ್ರಗಳ ಬುದ್ಧಿವಂತಿಕೆಯಲ್ಲ, ಅದು ನಮ್ಮ ಜನರ ಮಹತ್ವಾಕಾಂಕ್ಷೆಗಳ ಬೆಳವಣಿಗೆಯಾಗಬೇಕು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ರಾಷ್ಟ್ರೀಯ ಪ್ರಗತಿಗೆ ಇದು ಇಂಧನವಾಗಲಿದೆ. ಅಲ್ಲದೇ ವಿಕಸಿತ ಭಾರತದ ಗುರಿಯನ್ನು ತಲುಪಲು ಎಐ ಅತ್ಯಗತ್ಯವಾಗಿದೆ. ನಮ್ಮ ತಂತ್ರಜ್ಞಾನವು ನಂಬಿಕೆ, ನೈತಿಕತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ಅಡಿಪಾಯದ ಮೇಲೆ ನಿಂತಿದ್ದು, ತಂತ್ರಜ್ಞಾನದ ಪ್ರಗತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿದೆ. IBM ಮತ್ತು ಇಂಡಿಯಾ ಎಐ ನೀಡಿರುವ ಈ ಜಂಟಿ ವರದಿಯು ಅತ್ಯಂತ ಸಮಯೋಚಿತವಾಗಿದ್ದು, ಈ ಅಧ್ಯಯನವು ಸರ್ಕಾರದ ನೀತಿಗಳು, ಕೈಗಾರಿಕಾ ವಲಯದ ಅಗತ್ಯಗಳು ಮತ್ತು ಸಂಶೋಧನಾ ನಾವೀನ್ಯತೆಗಳನ್ನು ಒಂದೇ ಸೂರಿನಡಿ ತರಲು ನೆರವಾಗಲಿದೆ. ಇದು ಭಾರತದ ಆರ್ಥಿಕ ಭವಿಷ್ಯದ ಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ದಾರಿದೀಪವಾಗಲಿದೆ” ಎಂದು ಹೇಳಿದರು.

IBM ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಅವರು ಮಾತನಾಡಿ, “ಭಾರತದ ಆರ್ಥಿಕ ಪ್ರಗತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಎಐ ಅತ್ಯಂತ ಪ್ರಬಲವಾದ ಶಕ್ತಿಯಾಗಲಿದೆ. ವಿಶ್ವದ ಇತರ ರಾಷ್ಟ್ರಗಳಿಗಿಂತ ಭಾರತವನ್ನು ಭಿನ್ನವಾಗಿ ನಿಲ್ಲಿಸುವುದು ನಾವು ಎಷ್ಟರ ಮಟ್ಟಿಗೆ ಎಐ ಅಳವಡಿಸಿಕೊಳ್ಳುತ್ತೇವೆ ಎನ್ನುವುದಲ್ಲ. ಬದಲಿಗೆ, ನಾವು ಎಷ್ಟು ವಿಶ್ವಾಸಾರ್ಹವಾದ ಎಐ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ ಎಂಬುದು ಮುಖ್ಯ. ಬಲವಾದ ದತ್ತಾಂಶ ಅಡಿಪಾಯ, ಹೈಬ್ರಿಡ್ ಆರ್ಕಿಟೆಕ್ಚರ್ ಮತ್ತು ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕಬಲ್ಲ ಸಮರ್ಥ ಕಾರ್ಯಪಡೆಯ ಜೊತೆ ವಿಶ್ವಾಸಾರ್ಹ ಎಐ ವ್ಯವಸ್ಥೆಗಳನ್ನು ರೂಪಿಸುವುದು ಕೂಡ ಮುಖ್ಯವಾಗುತ್ತದೆ. ಕೌಶಲ್ಯ, ಆಡಳಿತ ಮತ್ತು ಮೂಲಸೌಕರ್ಯಗಳಲ್ಲಿ ಸರಿಯಾದ ಹೂಡಿಕೆ ಮಾಡುವ ಮೂಲಕ ಭಾರತವು ತನ್ನ ಎಐ ಮಹತ್ವಾಕಾಂಕ್ಷೆಯನ್ನು ಸುಸ್ಥಿರ ಆರ್ಥಿಕ ಪ್ರಭಾವವಾಗಿ ಪರಿವರ್ತಿಸಬಹುದು,” ಎಂದು ಹೇಳಿದರು.

ಭಾರತದ ಎಐ ಬೆಳವಣಿಗೆ: ಸಾರ್ವಭೌಮ ಹೈಬ್ರಿಡ್ ಮಾದರಿಯತ್ತ ಒಲವು
ಭಾರತದ ಆರ್ಥಿಕತೆಯ ಪ್ರಮುಖ ಅಂಗಗಳಾದ ಬ್ಯಾಂಕಿಂಗ್, ಆರೋಗ್ಯ ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಸಾರ್ವಭೌಮ ಎಐ ಅಳವಡಿಕೆ ಕೇವಲ ಆಯ್ಕೆಯಾಗಿ ಉಳಿಯದೆ, ಒಂದು ಆಯಕಟ್ಟಿನ ಅಗತ್ಯವಾಗಿ ಮಾರ್ಪಟ್ಟಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 74ರಷ್ಟು ಉನ್ನತ ಕಾರ್ಯನಿರ್ವಾಹಕರು, ದತ್ತಾಂಶವು ಎಲ್ಲಿ ಸಂಗ್ರಹವಾಗುತ್ತದೆ ಮತ್ತು ಅದರ ಮೇಲಿನ ನಿಯಂತ್ರಣ ಯಾರ ಕೈಯಲ್ಲಿರುತ್ತದೆ ಎಂಬುದು ಅತ್ಯಂತ ನಿರ್ಣಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಯಂತ್ರಿತ ವಲಯಗಳಲ್ಲಿ ದತ್ತಾಂಶದ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆ ಅತಿ ಮುಖ್ಯ. ಈ ಹಿನ್ನೆಲೆಯಲ್ಲಿ, ದತ್ತಾಂಶವು ದೇಶದ ಗಡಿಯೊಳಗೆ ಇರಬೇಕು ಮತ್ತು ಸ್ಥಳೀಯ ನಿಯಮಗಳಿಗೆ ಬದ್ಧವಾಗಿರಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಇದು ಸಾರ್ವಭೌಮ ಮತ್ತು ಹೈಬ್ರಿಡ್ ಆರ್ಕಿಟೆಕ್ಚರ್ ಮಾದರಿಯತ್ತ ಉದ್ಯಮಗಳು ವಾಲುತ್ತಿರುವುದನ್ನು ಸೂಚಿಸುತ್ತದೆ.

ದತ್ತಾಂಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದು ಎಂದರೆ ಜಾಗತಿಕ ತಂತ್ರಜ್ಞಾನದಿಂದ ದೂರವಿರುವುದು ಎಂದರ್ಥವಲ್ಲ. ಬದಲಿಗೆ, ಮುಕ್ತ ಮಾನದಂಡಗಳ ಮೂಲಕ ಜಾಗತಿಕ ನಾವೀನ್ಯತೆಯನ್ನು ಬಳಸಿಕೊಳ್ಳುತ್ತಲೇ, ಸೂಕ್ಷ್ಮ ಮಾಹಿತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ಹೊಸ ಹಾದಿಯನ್ನು ಭಾರತದ ಸಂಸ್ಥೆಗಳು ಕಂಡುಕೊಳ್ಳುತ್ತಿವೆ. ಭಾರತವು ಎಐ ತಂತ್ರಜ್ಞಾನವನ್ನು ತನ್ನದೇ ಆದ ನಿಯಮಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ವಿಸ್ತರಿಸಲು ಈ ಹೈಬ್ರಿಡ್ ಮಾದರಿಯು ಒಂದು ವಿಶ್ವಾಸದ ಪದರವಾಗಿ ಹೊರಹೊಮ್ಮುತ್ತಿದೆ. ಇದು ವಿದೇಶಿ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ದೇಶೀಯ ದತ್ತಾಂಶ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ವೆಚ್ಚ ಮತ್ತು ನಿಯಂತ್ರಣದ ಸಮನ್ವಯ ಕಾರ್ಯಕ್ಷಮತೆ, ವೆಚ್ಚ ಮತ್ತು ನಿಯಂತ್ರಣದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಯಾವುದೇ ಉದ್ಯಮಕ್ಕೆ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಹೈಬ್ರಿಡ್ ವಿಧಾನವು ವರದಾನವಾಗಿ ಪರಿಣಮಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ 10 ಅಧಿಕಾರಿಗಳಲ್ಲಿ 7 ಮಂದಿ ಹೈಬ್ರಿಡ್ ಮಾದರಿಯು ವೆಚ್ಚವನ್ನು ಹೆಚ್ಚಿಸದೆ ದತ್ತಾಂಶದ ಸ್ಥಳದ ಮೇಲಿನ ನಿಯಂತ್ರಣವನ್ನು ಸುಧಾರಿಸುತ್ತದೆ ಎಂದು ದೃಢವಾಗಿ ಹೇಳಿದ್ದಾರೆ.

ದತ್ತಾಂಶ ಮತ್ತು ಎಐ ಮೂಲಸೌಕರ್ಯವೇ ಕೀಲಿಕೈ

ಭಾರತವು ಎಐ ಆಧರಿತ ಭವಿಷ್ಯದತ್ತ ವೇಗವಾಗಿ ಧಾವಿಸುತ್ತಿರಬಹುದು, ಆದರೆ ದತ್ತಾಂಶಗಳು ಸಂಕೀರ್ಣವಾದ ಕಥೆಯನ್ನೇ ಹೇಳುತ್ತಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 57ರಷ್ಟು ಮಂದಿ ಅಸಮರ್ಪಕ ದತ್ತಾಂಶದ ಗುಣಮಟ್ಟವನ್ನು ಮತ್ತು ಶೇ. 77ರಷ್ಟು ಮಂದಿ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ಮತ್ತು ಸುರಕ್ಷಿತವಾದ ಕ್ಲೌಡ್ ಮೂಲಸೌಕರ್ಯದ ಕೊರತೆಯನ್ನು ಎಐ ಸಿದ್ಧತೆಗೆ ಇರುವ ಪ್ರಮುಖ ಅಡೆತಡೆಗಳು ಎಂದು ತಿಳಿಸಿದ್ದಾರೆ. ಸುಧಾರಿತ ಎಐ ಬಗ್ಗೆ ಉತ್ಸಾಹವಿದ್ದರೂ ಸಹ, ಭಾರತೀಯ ಉದ್ಯಮಗಳು ಎಐ ಅನ್ನು ವಿಸ್ತರಿಸುವ ಸಾಮರ್ಥ್ಯವು ಕೇವಲ ಮಾದರಿಗಳ ಅತ್ಯಾಧುನಿಕತೆಯ ಮೇಲೆ ನಿರ್ಧರಿತವಾಗದೆ, ಉದ್ಯಮದ ದತ್ತಾಂಶ ಮತ್ತು ಮೂಲಸೌಕರ್ಯಗಳ ಸಿದ್ಧತೆಯ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧನೆಯು ಸೂಚಿಸುತ್ತದೆ. ಎಐ ಅನ್ನು ಕೇವಲ ಒಂದು ಪ್ರಯೋಗದ ಹಂತದಿಂದ ಇಡೀ ಉದ್ಯಮಕ್ಕೆ ಪ್ರಭಾವ ಬೀರುವ ಕಾರ್ಯಾಚರಣೆಯ ಇಂಜಿನ್ ಆಗಿ ಪರಿವರ್ತಿಸಲು ಈ ತಾಂತ್ರಿಕ ಆಯ್ಕೆಗಳೇ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ.

ಭಾರತದ ಎಐ ಪ್ರತಿಭೆಗಳ ಪೂರೈಕೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವುದು

ಎಐ ಪ್ರತಿಭೆಗಳ ಸಮೂಹವನ್ನು ನಿರ್ಮಿಸುವಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆ, ಆದರೆ ಈ ಅಧ್ಯಯನವು ಹೆಚ್ಚುತ್ತಿರುವ ಕೌಶಲ್ಯದ ಅಂತರವನ್ನು ಬೆಟ್ಟು ಮಾಡಿದೆ. ಇಂದು ಕೇವಲ ಶೇ. 30ರಷ್ಟು ಉದ್ಯೋಗಿಗಳು ಮಾತ್ರ ವ್ಯವಹಾರಗಳಿಗೆ ಅಗತ್ಯವಿರುವ ಮಟ್ಟದ ಎಐ ಸಾಕ್ಷರತೆಯನ್ನು ಹೊಂದಿದ್ದಾರೆ. 2030ರ ವೇಳೆಗೆ ಈ ಅಂಕಿಅಂಶವು ಸುಮಾರು ಶೇ. 57ಕ್ಕೆ ಏರಬೇಕೆಂದು ಪ್ರತಿಕ್ರಿಯಿಸಿದವರು ಸೂಚಿಸಿದ್ದಾರೆ. ಇದರರ್ಥ, 2030ರ ವೇಳೆಗೆ ಭಾರತದಲ್ಲಿ ಬೇಕಾಗುವ ಒಟ್ಟು ಎಐ ಪರಿಣಿತರ ಸಂಖ್ಯೆ 35 ಕೋಟಿಗೂ ಹೆಚ್ಚಿರಲಿದೆ. ಎಐ-ಚಾಲಿತ ಆರ್ಥಿಕತೆಯಲ್ಲಿ ಯಾವ ಕೌಶಲ್ಯಗಳು ಹೆಚ್ಚು ಮುಖ್ಯ ಎಂಬುದರ ಕುರಿತು ಹೊಸ ಶಿಕ್ಷಣ ಮಾದರಿಗಳು, ಮರುವಿನ್ಯಾಸಗೊಳಿಸಲಾದ ವೃತ್ತಿಜೀವನದ ಹಾದಿಗಳು ಮತ್ತು ಸ್ಪಷ್ಟ ಮಾರ್ಗದರ್ಶನದ ಮೂಲಕ ಭಾರತವು ಕಲಿಯುವ ಮತ್ತು ಕೆಲಸ ಮಾಡುವ ವಿಧಾನವನ್ನು ಪುನರ್ವಿಮರ್ಶಿಸಬೇಕಾದ ಒತ್ತಡವಿದೆ ಎಂಬುದನ್ನು ಈ ಸಂಶೋಧನೆಯು ಎತ್ತಿ ತೋರಿಸುತ್ತದೆ. ಈ ಅಂತರವನ್ನು ರಾಷ್ಟ್ರವ್ಯಾಪಿ ನೀಗಿಸಲು ಇಂಡಿಯಾ ಎಐ ಫ್ಯೂಚರ್ ಸ್ಕಿಲ್ಸ್ ನಂತಹ ಯೋಜನೆಗಳು ಶಿಕ್ಷಣ ಮತ್ತು ಸಾಂಸ್ಥಿಕ ತರಬೇತಿಯಲ್ಲಿ ಎಐ ಜ್ಞಾನವನ್ನು ಅಳವಡಿಸುತ್ತಿವೆ. ಜೊತೆಗೆ, ದತ್ತಾಂಶ ಮತ್ತು ಎಐ ಲ್ಯಾಬ್‌ ಗಳನ್ನು ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲಾಗುತ್ತಿದ್ದು, ಇದು ಎಐ ಕೌಶಲ್ಯ ಅಭಿವೃದ್ಧಿಯ ಅವಕಾಶವನ್ನು ಎಲ್ಲರಿಗೂ ತಲುಪಿಸಲು ಸಹಾಯ ಮಾಡುತ್ತಿದೆ.

ಅಧ್ಯಯನದ ಇತರ ಪ್ರಮುಖ ಅಂಶಗಳು:

ಉದ್ಯಮಗಳು ಪ್ರಾಯೋಗಿಕ ಹಂತದಿಂದ ಬೃಹತ್ ಪ್ರಮಾಣದಲ್ಲಿ ಎಐ ಅಳವಡಿಕೆಗೆ ಸಿದ್ಧವಾಗುತ್ತಿವೆ
• ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 15ರಷ್ಟು ಸಂಸ್ಥೆಗಳು ಪ್ರಸ್ತುತ ವಿವಿಧ ವಿಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಮಾಡುವ ಮೂಲಕ ಎಐ ಸಾಮರ್ಥ್ಯವನ್ನು ವಿಸ್ತರಿಸುತ್ತಿವೆ; ಇನ್ನುಳಿದ ಶೇ. 85ರಷ್ಟು ಸಂಸ್ಥೆಗಳು ಎಐ ಯೋಜನೆಗಳ ಪ್ರಾಯೋಗಿಕ ಹಂತ ನಡೆಸುತ್ತಿವೆ.

ವಿಶ್ವಾಸಾರ್ಹ ಎಐ ವಿಸ್ತರಣೆಗೆ ಸಾರ್ವಭೌಮ ಮತ್ತು ಹೈಬ್ರಿಡ್ ಕ್ಲೌಡ್ ಮೂಲಸೌಕರ್ಯವೇ ಅಡಿಪಾಯ

• ದತ್ತಾಂಶ ಸ್ಥಳೀಕರಣವು ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಶೇ. 62ರಷ್ಟು ಪ್ರತಿಕ್ರಿಯಿಸಿದವರು ತಿಳಿಸಿದ್ದಾರೆ. ಹಾಗೆಯೇ, ವಿಶ್ವಾಸಾರ್ಹ ಎಐಗಾಗಿ ಭಾರತೀಯ ಮೂಲದ ಕ್ಲೌಡ್ ಸಾಮರ್ಥ್ಯವು ಅತ್ಯಗತ್ಯ ಎಂದು ಶೇ. 77ರಷ್ಟು ಮಂದಿ ಬೆಟ್ಟು ಮಾಡಿದ್ದಾರೆ.
• ಬಲವಾದ ದೇಶೀಯ ಸಾಮರ್ಥ್ಯವಿಲ್ಲದಿದ್ದರೆ ಎಐ ಆವಿಷ್ಕಾರ ಕುಂಠಿತಗೊಳ್ಳಲಿದೆ ಎಂದು ಶೇ. 67ರಷ್ಟು ಕಾರ್ಯನಿರ್ವಾಹಕರು ಅಭಿಪ್ರಾಯಪಟ್ಟಿದ್ದಾರೆ.
ದೃಢವಾದ ಎಐ ಆಡಳಿತ ಮತ್ತು ಉತ್ಕೃಷ್ಟ ಪರಿಸರ ವ್ಯವಸ್ಥೆಯ ಪಾಲುದಾರಿಕೆಗೆ ಆದ್ಯತೆ
• ಎಐ ಆಡಳಿತದಲ್ಲಿನ ಅಂತರಗಳು ಉದ್ಯಮದ ವಿಸ್ತರಣೆಗೆ ಅಡ್ಡಿಯಾಗಿವೆ ಎಂದು ಶೇ. 68ರಷ್ಟು ಉದ್ಯಮಗಳು ಉಲ್ಲೇಖಿಸಿವೆ. ಶೇ. 45ರಷ್ಟು ಸಂಸ್ಥೆಗಳು ಈಗಾಗಲೇ ಆಡಳಿತಾತ್ಮಕ ಪದ್ಧತಿಗಳನ್ನು ದೈನಂದಿನ ವ್ಯವಸ್ಥೆಗಳಲ್ಲಿ ಅಳವಡಿಸುತ್ತಿವೆ ಅಥವಾ ಪ್ರಾಯೋಗಿಕವಾಗಿ ಬಳಸುತ್ತಿವೆ.
• ಎಐ ಅಳವಡಿಕೆಗೆ ಭಾರತಕ್ಕೆ ಒಂದು ಬಲವಾದ ಪರಿಸರ ವ್ಯವಸ್ಥೆ ಆಧಾರಿತ ವಿಧಾನದ ಅಗತ್ಯವಿದೆ ಎಂದು ಶೇ. 68ರಷ್ಟು ಅಧಿಕಾರಿಗಳು ಹೇಳಿದ್ದಾರೆ.
• ಶೇ. 68ರಷ್ಟು ಉದ್ಯಮಗಳು ಈಗಾಗಲೇ ಬಾಹ್ಯ ಎಐ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಥವಾ ವಿಸ್ತರಿಸುವಲ್ಲಿ ತೊಡಗಿವೆ.

ಸಂಪೂರ್ಣ ಅಧ್ಯಯನ ವರದಿಯನ್ನು ವೀಕ್ಷಿಸಲು ಇಲ್ಲಿ ಭೇಟಿ ನೀಡಿ: https://ibm.biz/india-economy

Leave a Reply

Your email address will not be published. Required fields are marked *