















ದೈಹಿಕ, ಮಾನಸಿಕ ಆರೋಗ್ಯ, ಸದೃಢತೆ ಕಾಪಾಡಿಕೊಳ್ಳಿ : ಆರ್ ಸುರೇಶ್
ಜಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ :
ಬ್ಯಾಟರಾಯನಪುರ : ಯುವಜನತೆ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸದೃಢತೆ ಕಾಪಾಡಿಕೊಳ್ಳುವ ಮೂಲಕ ದೇಶಕ್ಕೆ ಸತ್ಪ್ರಜೆ, ಪೋಷಕರಿಗೆ ಒಳ್ಳೆಯ ಮಕ್ಕಳಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ, ಜಾಲ ಪ್ರೀಮಿಯರ್ ಲೀಗ್(ಜೆ ಪಿ ಎಲ್)ನ ಸಂಸ್ಥಾಪಕ ಆರ್ ಸುರೇಶ್ ಅಭಿಪ್ರಾಯ ಪಟ್ಟರು.
11 ವರ್ಕರ್ಸ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಸಾತನೂರು ಗ್ರಾಮದ ಈಗಲ್ಟನ್ ಫ್ರೂಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಜಾಲ ಪ್ರೀಮಿಯರ್ ಲೀಗ್, ಸೀಸನ್ 4 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ಎಸ್.ಎಂ.ಸ್ಮ್ಯಾಶರ್ಸ್ ತಂಡಕ್ಕೆ ಟ್ರೋಫಿ ವಿತರಿಸಿದ ನಂತರ ಮಾತನಾಡಿದ ಅವರು ‘ ಮನುಷ್ಯನ ಬದುಕಿನಲ್ಲಿ ಯೌವ್ವನಕ್ಕೆ ಬಹಳ ಮಹತ್ವವಿದೆ, ಅದು ಸಾಧನೆಯ ಕಾಲಘಟ್ಟವಾಗಿದೆ. ಇಂತಹ ಅಮೂಲ್ಯವಾದ ಯೌವನವನ್ನು ಯುವಜನತೆ ಉತ್ತಮ ಹವ್ಯಾಸಗಳು, ಕ್ರೀಡಾಸಕ್ತಿ, ಶಿಕ್ಷಣ ಮುಂತಾದ ಸದಾಭಿರುಚಿಯ ಸಾಧನೆಗಳಿಗೆ ಮೀಸಲಿಡುವ ಮೂಲಕ ದೈಹಿಕ ಮಾನಸಿಕ ಆರೋಗ್ಯ, ಸದೃಢತೆ ಕಾಪಾಡಿಕೊಳ್ಳಬೇಕು, ತನ್ಮೂಲಕ ದೇಶಕ್ಕೆ ಸತ್ಪ್ರಜೆಗಳಾಗಿ, ಪೋಷಕರಿಗೆ ಒಳ್ಳೆಯ ಮಕ್ಕಳಾಗಿ ಹೊರಹೊಮ್ಮಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಯುವಕರ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸುವ ದಿಸದಲ್ಲಿ ಆಯೋಜಿಸಿದ್ದ ಜಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಸುತ್ತಿನ ಫೈನಲ್ ಪಂದ್ಯಾವಳಿಯಲ್ಲಿ ಎಸ್ಎಂ ಸ್ಮ್ಯಾಶರ್ಸ್ ತಂಡ ವಿಜೇತ ತಂಡವಾಗಿ ಹೊರಹೊಮ್ಮುವ ಮೂಲಕ ಟ್ರೋಫಿ ಮುಡಿಕೇರಿಸಿಕೊಂಡರು. ಉಳಿದಂತೆ ಕ್ರಮವಾಗಿ ಫಿಟ್ ಬಾಕ್ಸ್ ತಂಡ ದ್ವಿತೀಯ ಸ್ಥಾನ ಮತ್ತು ದಾಸನಾಯಕನಹಳ್ಳಿಯ ಎಂ ವೈ ಸಿ ಸಿ ತಂಡ ತೃತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡರು.
ಜೆಪಿಎಲ್ ಸೀಸನ್ 4 ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ ಅಶೋಕನ್, ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಯುವ ಮುಖಂಡ ಪಿ. ರಾಹುಲ್, ಬಿಜೆಪಿ ಮುಖಂಡ, ದಲಿತ ಪರ ಹೋರಾಟಗಾರ ಬಿ ಆರ್ ಮುನಿರಾಜು, ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾನಸ ಕೃಷ್ಣ, ಹಾಲಿ ಉಪಾಧ್ಯಕ್ಷರಾದ ಮಾಲಾ ಸುಬ್ರಮಣ್ಯ, ಕನ್ನಡ ಶಂಕರ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸುಬ್ರಮಣಿ, ರಾಜಣ್ಣ, ಜೆಪಿಎಲ್ ಪಂದ್ಯಾವಳಿಯ ಆಯೋಜನ ಮಂಡಳಿಯ ಸದಸ್ಯರಾದ ಸುನಿಲ್ ಗೌಡ, ರಾಜೇಶ್(ಸ್ನೇಕ್), ದಿವಾಕರ್, ಶ್ರೀನಿವಾಸ್, ರಮೇಶ್, ಲೋಕೇಶ್, ಶೇಖರ್, ನಾಸಿಫ್ ಸೇರಿದಂತೆ ಹಲವು ಗಣ್ಯರು ಹಾಗೂ ಆಯೋಜನ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.
