ಮಳೆ ಕೊರತೆಯಿಂದ ಬಾಡುತ್ತಿವೆ ಬೆಳೆಗಳು
ಜಿಲ್ಲೆಯಲ್ಲಿ ಬಿತ್ತನೆ ಕಾರ್ಯದಲ್ಲಿ ಗಣನೀಯ ಕುಂಠಿತ, ಆಗಸದತ್ತ ಮುಖ ಮಾಡಿದ ರೈತ

ಚಿಕ್ಕಬಳ್ಳಾಪುರ: ಕಳೆದ ಎರಡು ತಿಂಗಳಿಂದಲೂ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ವಾಡಿಕೆ ಮಳೆಯ ಲೆಕ್ಕಾಚಾರದಲ್ಲಿ ಅಲ್ಪಸ್ವಲ್ಪ ಕೊರತೆ ಕಂಡರೂ ಬಹುತೇಕ ಹನಿಗಳ ಸಿಂಚನವು ಕೃಷಿಗೆ ಲಾಭದಾಯಕವಾಗಿಲ್ಲ. ಇದೀಗ ಬೇಸಿಗೆಯಂತೆ ಸುಡುತ್ತಿರುವ ಬಿಸಿಲಿಗೆ ಬೆಳೆಗಳು ಬಾಡುತ್ತಿರುವುದು ರೈತರನ್ನು ಚಿಂತೆಗೆ ದೂಡುವಂತಾಗಿದೆ.
ಕಳೆದ ಜೂನ್ ಎರಡನೇ ವಾರದಲ್ಲಿ ಮುಂಗಾರು ಅವಧಿ ಪ್ರಾರಂಭವಾಗಿದ್ದು, ಇದರ ನಡುವೆ ತೀವ್ರ ಮಳೆಯ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ ತುಂತುರು ಹನಿಗಳ ಸಿಂಚನವನ್ನೇ ಹೆಚ್ಚಾಗಿ ಕಂಡಿದ್ದು, ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ಕಾರ್ಯವು ಕುಂಠಿತಗೊಳ್ಳುವ ಜೊತೆಗೆ ಬಿತ್ತನೆಯಾಗಿರುವ ಬೆಳೆಗಳಿಗೂ ಮಳೆಯ ಅಭಾವದಿಂದ ರೈತರು ಆಗಸದತ್ತ ಮುಖಮಾಡುವಂತಾಗಿದೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಕಾರ್ಯ ಚಟುವಟಿಕೆಗಳು ಮುಕ್ತಾಯ ಹಂತ ತಲುಪಲಿದೆ. ಆದರೆ ಈ ವರ್ಷ ಸಕಾಲಕ್ಕೆ ಮಳೆಯಾಗದೇ ಬಹುತೇಕ ಕಡೆ ಈವರೆಗೆ ಬಿತ್ತನೆ ಚಟುವಟಿಕೆಗಳು ಬಿರುಸು ಪಡೆದಿಲ್ಲ. ಇನ್ನೂ ಬಿತ್ತಿದ ಹೊಲಗಳು ಮೊಳಕೆ ಹೊಡೆದಿಲ್ಲ. ಮೊಳಕೆ ಹೊಡೆದಿದ್ದ ಬೆಳೆಗಳು ಬಿಸಿಲಿನ ತಾಪಕ್ಕೆ ಸಾಯುತ್ತಿದೆ.
ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಯ ಅವಧಿ ಮುಕ್ತಾಯಗೊಂಡಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆಯತ್ತ ಹೆಚ್ಚಿನ ಒಲವು ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಮಳೆಯಾಗದಿದ್ದರೆ ರಾಗಿ ಮತ್ತು ಮುಸುಕಿನ ಜೋಳ ಬಿತ್ತನೆಗೂ ಕಾಲವಧಿ ಕೈ ಮೀರಲಿದೆ.
ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಸಾಮಗ್ರಿಗಳ ಖರೀದಿ ಸೇರಿದಂತೆ ವಹಿವಾಟು ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಅಂದುಕೊಂಡಷ್ಟು ವಹಿವಾಟಿಗೆ ಹೊಡೆತ ಬಿದ್ದಿವೆ ಎಂಬ ಮಾತುಗಳು ಕೇಳಿ ಬಂದಿವೆ.
ವಿವಿಧ ಹೋಬಳಿಗಳಲ್ಲಿ ಬಿತ್ತನೆ ಸಾಧನೆಯು ನಿರೀಕ್ಷೆಗೆ ಅನುಗುಣವಾಗಿ ಇಲ್ಲ. ಇದರಿಂದ ಬೇಡಿಕೆ ಕುಸಿದಿದೆ. ಬಹುತೇಕ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡರೆ ಮರು ಜೀವ ಬಂದಂತಾಗುತ್ತದೆ. ಇಲ್ಲದಿದ್ದಲ್ಲಿ ಈಗ ಮೂಡಿರುವ ಬರದ ಛಾಯೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಧಿಸಲಿದೆ ಎನ್ನಲಾಗುತ್ತಿದೆ. ಇನ್ನು ನೀರಸ ಪ್ರತಿಕ್ರಿಯೆಗೆ ಗೊಬ್ಬರ ಮಾರಾಟ ಅಂಗಡಿ ಮಾಲೀಕರು ವಹಿವಾಟಿನ ಕುಸಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಇದಕ್ಕೆ ಹೆಚ್ಚಿನ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಕೃಷಿಕರಿಂದ ಗಂಭೀರವಾಗಿ ದೂರುಗಳು ಸಹ ಕೇಳಿ ಬರುತ್ತಿಲ್ಲ. ಈಗಾಗಲೇ ಶೇ.೫೦ಕ್ಕಿಂತ ಹೆಚ್ಚು ಬಿತ್ತನೆಯಾಗಿದೆ. ಆದರೆ ಬಿತ್ತಿದ ಬೆಳೆ ಉಳಿಸಿಕೊಳ್ಳಲು ಮಳೆ ಬೇಕಾಗಿದ್ದು, ಮಳೆಗಾಗಿ ರೈತರು ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಕ್ಸ್

ಸಂಕಷ್ಟದಲ್ಲಿ ರೈತರು!
ಈಗಾಗಲೇ ಭೂಮಿ ಹದಗೊಳಿಸಿರುವ ರೈತರು ಬಿತ್ತನೆ ಬೀಜ, ರಸಗೊಬ್ಬರ ತಂದಿಟ್ಟುಕೊಂಡಿದ್ದಾರೆ. ಆದರೆ, ಮಳೆ ಕೊರತೆಯಿಂದ ರೈತರು ಚಿಂತೆಗೀಡಾಗಿದ್ದಾರೆ. ಆಗಸ್ಟ್ ಅಂತ್ಯದೊಳಗಾಗಿ ಮಳೆ ಬೀಳುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ಒಂದು ವೇಳೆ ನಿರೀಕ್ಷೆ ಸುಳ್ಳಾದರೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಪ್ರಸ್ತುತ ಬೇಸಿಗೆಯಂತೆ ಬಿಸಿಲು ಸುಡುತ್ತಿದೆ. ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಮೊಳಕೆ ನಾಶವಾಗುತ್ತಿದೆ. ಮೊಳಕೆ ಹೊಡೆದಿದ್ದ ಬೆಳೆಗಳು ಬಾಡುತ್ತಿದ್ದು, ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಬರದ ಛಾಯೆ ಆವರಿಸಿದಂತಿದೆ.

Leave a Reply

Your email address will not be published. Required fields are marked *