ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಸಭೆ; ಶಾಸಕ ನಾರಾ ಭರತ್ ರೆಡ್ಡಿ ಭಾಗಿ
.
1ನೇ ಸುದ್ದಿ ಸಾರ್,
ಪ್ರಕಟಣೆ ಕೃಪೆ ಕೋರಿ
ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಸಭೆ; ಶಾಸಕ ನಾರಾ ಭರತ್ ರೆಡ್ಡಿ ಭಾಗಿ
ಬೆಂಗಳೂರು, ಜು.12: ಬೆಂಗಳೂರಿನ ಗುಬ್ಬಿ ತೋಟದಪ್ಪ ಛತ್ರದ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ವತಿಯಿಂದ ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಏರ್ಪಡಿಸಿದ್ದ ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭಾಗವಹಿಸಿ, ಮೀಸಲಾತಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಈ ಸಭೆಯಲ್ಲಿ ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಪಕ್ಷಗಳ, ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಸಮುದಾಯದ ಶಾಸಕರು, ಸಚಿವರು ಭಾಗಿಯಾದರು.
ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ವೇದಿಕೆ ವತಿಯಿಂದ ಶ್ರೀಗುರು ಶ್ರೀಶೈಲ ಜಗದ್ಗುರುಗಳು, ಶ್ರೀಗುರು ಉಜ್ಜಯಿನಿ ಜಗದ್ಗುರುಗಳು ಹಾಗೂ ಸಮಾಜದ ಹಿರಿಯರು, ಮುಖಂಡರು ಸನ್ಮಾನಿಸಿ, ಆಶೀರ್ವದಿಸಿದರು.
ಈ ವೇಳೆ ಸಭೆಯನ್ನುದ್ಧೇಶಿ ಮಾತನಾಡಿದ ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್; ಎಲ್ಲ ಪಕ್ಷಗಳು ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ 56 ಜನ ಶಾಸಕರು ಗೆದ್ದಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚು ಸಂಖ್ಯೆಯ ಜನ ಶಾಸಕರು ಗೆದ್ದಿದ್ದಾರೆ. ಒಂದು ಸಲ 60 ಜನ ಸಮುದಾಯದ ಶಾಸಕರು ಆಯ್ಕೆಯಾಗಿದ್ದರು. ಪ್ರತಿ ಸಲ 50 ರಿಂದ 60 ಜನ ಶಾಸಕರು ಗೆದ್ದಿದ್ದಾರೆ. ಈ ಸಲ ಸಂಖ್ಯೆ ಕಡಿಮೆಯಾಗಿದೆ ಇದರ ಬಗ್ಗೆ ಚಿಂತನೆ ನಡೆಯಬೇಕು ಎಂದು ಹೇಳಿದರು.
ಬೇರೆ ಬೇರೆ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನರ ಪ್ರಾತಿನಿಧ್ಯದ ಬಗ್ಗೆಯೂ ಸಮುದಾಯ ಗಂಭೀರ ಚಿಂತನೆ ಮಾಡಬೇಕು. ನಾಲ್ಕು ದಶಕಗಳ ಹಿಂದೆ ನ್ಯಾಯಾಂಗದಲ್ಲಿ ವೀರಶೈವ ಲಿಂಗಾಯತ ಸಮುದಾಯದ ನ್ಯಾಯಾಧೀಶರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಳಿಕೆ ಆಗಿದೆ. ಯಾಕೆ ಹೀಗೆ ಆಗುತ್ತಿದೆ? ಎಲ್ಲಿ ನಮ್ಮಿಂದ ತಪ್ಪಾಗಿದೆ? ಎಂಬ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಒಬಿಸಿ ಪಟ್ಟಿ ಜಾರಿ ಮಾಡುವ ಮೊದಲು ದೇಶದ 300 ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಲಾಯಿತು. ಮಂಡಲ್ ಆಯೋಗ ವರದಿ ಕೊಟ್ಟ ಸಂದರ್ಭ 1994-95ರಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಯಿತು. ಈವರೆಗೆ ಆಗಿರುವ ಜಾತಿಗಳ ಸೇರ್ಪಡೆಯನ್ನು ಗಮನಿಸಿದಾಗ ಅಂದಾಜು 600 ಜಾತಿಗಳು ಸೇರ್ಪಡೆ ಆಗಿವೆ. ಆದರೆ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಜಾತಿಗಳು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾದರೆ ಸಮುದಾಯದ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಅನುಕೂಲ ಆಗಿ ಆರ್ಥಿಕ ಪ್ರಗತಿ ಆಗಲಿದೆ ಎಂದು ಹೇಳಿದ ಜಗದೀಶ್ ಶೆಟ್ಟರ್, ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ನಲ್ಲಿ ವ್ಯತಿರಿಕ್ತ ತೀರ್ಪು ಬಂದಿತು. ಹೀಗಾಗಿ ಕಾನೂನು ಪಂಡಿತರ ಅಭಿಪ್ರಾಯ ಪಡೆದು ಹೋರಾಟ ರೂಪಿಸಿದರೆ, ಸಮುದಾಯಕ್ಕೆ ಶಾಶ್ವತ ಅನುಕೂಲ ಆಗಲಿದೆ ಎಂದರು.
ಈ ಸಂದರ್ಭ ಶಾಮನೂರು ಶಿವಶಂಕ್ರಪ್ಪ, ಎಂ.ವೈ.ಪಾಟೀಲ್, ಬಿ.ವೈ.ವಿಜಯೇಂದ್ರ ಸೇರಿದಂತೆ ಇತರ ಗಣ್ಯರು ಹಾಜರಿದ್ದರು.
1ನೇ ಸುದ್ದಿ ಸಾರ್,