ಯಲಹಂಕ : ಕರ್ನಾಟಕ ರಾಜ್ಯ ತಿಗಳ(ವಹ್ನಿಕುಲ ಕ್ಷತ್ರಿಯ)ರ ಸಂಘದ ರಾಜ್ಯಾಧ್ಯಕ್ಷರಾಗಿ ಯಲಹಂಕ ನಗರಸಭೆ ಮಾಜಿ ಅಧ್ಯಕ್ಷ, ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಮು.ಕೃಷ್ಣಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ತಿಗಳರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಡಾ.ಮು.ಕೃಷ್ಣಮೂರ್ತಿ ಸೇರಿದಂತೆ ಒಟ್ಟು 43 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ತಿಗಳರ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 43 ಜನ ನಿರ್ದೇಶಕರ ಪೈಕಿ 39 ಜನ ನಿರ್ದೇಶಕರು ಉಪಸ್ಥಿತರಿದ್ದು ಎಲ್ಲರೂ ಡಾ.ಮು.ಕೃಷ್ಣಮೂರ್ತಿ ಯವರನ್ನು ಅವಿರೋಧವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಉಳಿದಂತೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವರ್ತೂರಿನ ಬಿ.ಎಸ್.ಶ್ರೀಧರ್, ಖಜಾಂಚಿ ಯಾಗಿ ಆದಿತ್ಯಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ನೂತನ ರಾಜ್ಯಾಧ್ಯಕ್ಷ ಡಾ.ಮು.ಕೃಷ್ಣಮೂರ್ತಿ ‘ಸರ್ವಾನುಮತದಿಂದ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಕೃತಜ್ಞತಾಪೂರ್ವಕ ಧನ್ಯವಾದ ಅರ್ಪಿಸುತ್ತೇನೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ತಿಗಳ ಸಮುದಾಯದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಸಮುದಾಯದ ಮುಖಂಡ ರನ್ನು ಭೇಟಿ ಮಾಡಿ, ಸಮುದಾಯದ ಜನತೆಯ ಕುಂದುಕೊರತೆಗಳು, ಸಮುದಾಯದ ಏಳಿಗೆಗಾಗಿ ಅಗತ್ಯವಿರುವ ಪ್ರಗತಿ ಕಾರ್ಯಗಳನ್ನು ಪಟ್ಟಿ ಮಾಡಿ ಅವುಗಳನ್ನು ಕೈಗೊಳ್ಳಲು ಶ್ರಮಿಸುವುದು ನನ್ನ ಪ್ರಥಮ ಆಧ್ಯತೆಯಾಗಿದೆ. ಪ್ರಮುಖವಾಗಿ ಸಮುದಾಯದ ಜನರಲ್ಲಿ ಶೈಕ್ಷಣಿಕ ಪ್ರಗತಿಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಈ ನಿಟ್ಟಿನಲ್ಲಿ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿರಿಗೆ ಹಾಸ್ಟೆಲ್ ಸೌಲಭ್ಯ, ಸಮುದಾಯ ಭವನ, ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ನೆರವು ಈಗಿನ ಅಗತ್ಯವಾಗಿದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಟ್ಟಿ ಧ್ವನಿಯೆತ್ತುವ ಮೂಲಕ ಕಾರ್ಯ ಕೈಗೂಡುವಂತೆ ಮಾಡಲು ಶ್ರಮಿಸುತ್ತೇನೆ.
ವಿಶೇಷವಾಗಿ ತಿಗಳ ಸಮುದಾಯದ ಆರಾಧ್ಯ ದೇವತೆ ದ್ರೌಪದಿಯ ಜಯಂತಿಯನ್ನು ಇತರೆ ಮಹಾತ್ಮರ ಜಯಂತಿಯಂತೆ ಸರ್ಕಾರದ ವತಿಯಿಂದ ಆಚರಿಸುವಂತಾ ಗಬೇಕು ಎಂಬುದು ಸಮುದಾಯದ ಸರ್ವಜನರ ಬೇಡಿಕೆಯಾಗಿದ್ದು, ಇದನ್ನು ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಸಂಘದ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ, ಮಾರ್ಗದರ್ಶನ ಪಡೆದು ಕೈಗೂಡಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.


