ಯಲಹಂಕ : ದೇಶದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿರುವ ಸ್ವಚ್ಚತಾ ಹಿ ಸೇವಾ ಅಭಿಯಾನದ ಹಿನ್ನೆಲೆಯಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಸಿಂಗನಾಯಕನಹಳ್ಳಿ ಗ್ರಾ.ಪಂ.ಸಹಯೋಗದಲ್ಲಿ ಸಂಸ್ಥೆಯ ದಕ್ಷಿಣ ಭಾರತ ಕಾರ್ಯಪಾಲಕ ನಿರ್ದೇಶಕ ಎಂ.ಕೆ.ಗುಪ್ತಾ ನೇತೃತ್ವದಲ್ಲಿ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಬಸ್ ನಿಲ್ದಾಣ, ರೈಲ್ವೆ ಗೇಟ್ ಸಮೀಪ ಹಾಗೂ ರಸ್ತೆಯ ಇಕ್ಕೆಲ, ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಇದೇ ವೇಳೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಕರೆ ನೀಡಿರುವುದು ಸಂತೋಷ ಸಂಗತಿ. ಸ್ವಚ್ಛತೆಯ ವಿಷಯದಲ್ಲಿ ಪವರ್ ಗ್ರಿಡ್ ಸಂಸ್ಥೆ ಹಿಂದಿನಿಂದಲೂ ಬಹಳ ಮುಂಚೂಣಿಯಲ್ಲಿದ್ದು, ಆರಂಭದಿಂದಲೂ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತಲೇ ಬಂದಿದೆ. ಇಂದು ಕೈಗೊಂಡಿರುವ ಈ ಸ್ವಚ್ಛತಾ ಹಿ ಸೇವಾ ಅಭಿಯಾನವು ಪವರ್ ಗ್ರಿಡ್ ಸಂಸ್ಥೆಯ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಹಮ್ಮಿಕೊಳ್ಳಲಾಗಿದೆ.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಸಕ್ತವಾಗಿ ಭಾರತ ಜಾಗತಿಕ ಮಟ್ಟದ ಐದನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಪ್ರಗತಿಯ ಗತಿ ಇದೇ ರೀತಿಯಲ್ಲಿದ್ದರೆ ನಮ್ಮ ದೇಶ ಮುಂದಿನ ಕೆಲವೇ ವರ್ಷಗಳಲ್ಲಿ ಪ್ರಥಮ ಸ್ಥಾನಕ್ಕೆ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ಜನತೆ ಸಹ ಪ್ರಧಾನಿಯವರ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಮೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ದೇಶದ ಜನತೆ ತಮ್ಮ ಮನೆ, ಕಚೇರಿ, ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕಾಪಾಡುವ ಮೂಲಕ ದೇಶದ ಸ್ವಚ್ಛತೆಗೆ ತಮ್ಮ ಕೊಡುಗೆ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ವ್ಯವಸ್ಥಾಪಕ ಅಜಿತ್ ಕೆ.ಎಂ. ಸಿಂಗನಾಯಕನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಎಸ್ ಜಿ ಪ್ರಶಾಂತ್ ರೆಡ್ಡಿ, ಸದಸ್ಯರಾದ ಮಲ್ಲೇಶ್, ಕೆ.ಬಾಬು, ಮುನಿಕೃಷ್ಣ ಸೇರಿದಂತೆ ಪವರ್ ಗ್ರಿಡ್ ಸಂಸ್ಥೆಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಗಳಿದ್ದು, ಸ್ವಚ್ಛತಾ ಅಭಿಯಾನ ಕೈಗೊಂಡರು.
