.

ರಸ್ತೆ ನಿರ್ಮಿಸಿ ಕೊಟ್ಟಿದ್ದಕ್ಕಾಗಿ ನಿವಾಸಿಗಳಿಂದ ಶಾಸಕರಿಗೆ ಗೌರವ ಸಮರ್ಪಣೆ :

ಯಲಹಂಕ : ದೇಶದ ಸರ್ವತೋಮುಖ ಪ್ರಗತಿಯ ದಿಸೆಯಲ್ಲಿ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿಯ ಅರುಣೋದಯ ಬಡಾವಣೆಯ ನಿವಾಸಿಗಳಿಗೆ ಸಮರ್ಪಕ ರಸ್ತೆ ನಿರ್ಮಿಸಿ ಕೊಟ್ಟಿದ್ದಕ್ಕಾಗಿ ಬಡಾವಣೆ ನಿವಾಸಿಗಳ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ರಾಜ್ಯಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ಆಡಳಿತ ವೈಖರಿಯಲ್ಲಿ ಬಹಳ ವ್ಯತ್ಯಾಸವಿದ್ದು, ಒಂದೊಮ್ಮೆ ರಾಜ್ಯಗಳಲ್ಲಿ ಯಾವುದಾದರೂ ಪಕ್ಷ ಅಧಿಕಾರಕ್ಕೆ ಬರಲಿ, ಅದು ಅಭಿವೃದ್ಧಿಗೆ ಪೂರಕವಾದ ಆಡಳಿತ ನಡೆಸಲಿ ಎಂಬುದಷ್ಟೇ ನಮ್ಮ ಕೋರಿಕೆ, ಆದರೆ ದೇಶದ ವಿಷಯಕ್ಕೆ ಬಂದಾಗ ಅಭಿವೃದ್ಧಿ, ದೇಶದ ಭದ್ರತೆ,, ವಿದೇಶಾಂಗ ನೀತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ದೇಶವನ್ನು ಮುನ್ನಡೆಸುವಂತಹ ವಿಶಾಲವಾದ ಜ್ಞಾನ ಮತ್ತು ಮನಸ್ಸುಳ್ಳ ಮತ್ತು ದೇಶದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರಧಾನಿಯ ನೇತೃತ್ವದ ಅವಶ್ಯಕತೆ ಇದೆ. 

ಪ್ರಧಾನಿ ‌ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳ ಅವರ ಅಧಿಕಾರಾವಧಿ ಯಲ್ಲಿ ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದ್ದು, ಮನ್ ಮೋಹನ್ ಸಿಂಗ್ ರವರ ಅವಧಿಯಲ್ಲಿ ಶೇ.3% ಇದ್ದ ದೇಶದ ಜಿಡಿಪಿ ಇದೀಗ 10% ಕ್ಕೆ ತಲುಪಿದೆ. ಜಾಗತಿಕ ಮಟ್ಟದ ಆರ್ಥಿಕತೆಯಲ್ಲಿ ಭಾರತ ಇದೀಗ 3ನೆಯ ಸ್ಥಾನದತ್ತ ಹೆಜ್ಜೆ ಹಾಕುತ್ತಿದ್ದು, ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ. ಜಗತ್ತಿನ ಅಗ್ರಮಾನ್ಯ ದೇಶಗಳ ಅಧ್ಯಕ್ಷರು ಸಹ ಪ್ರಗತಿಯ ದಿಸೆಯಲ್ಲಿ ಪ್ರಧಾನಿ ಮೋದಿಯವರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದು, ದೇಶದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ದೇಶದ ಪ್ರಗತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ದೇಶದ ಭದ್ರತೆಯ ಹಿತದೃಷ್ಟಿಯಿಂದ  ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಒಂದೊಮ್ಮೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧೋಗತಿ ಕಟ್ಟಿಟ್ಟ ಬುತ್ತಿ ಎಂದರು.

ಸಿಂಗನಾಯಕನಹಳ್ಳಿಯ ಅರುಣೋದಯ ಬಡಾವಣೆಯ ನಿವಾಸಿಗಳಿಗೆ ಸಮರ್ಪಕ ರಸ್ತೆ ಸೌಕರ್ಯವಿರಲಿಲ್ಲ, ರಸ್ತೆ ಅತ್ಯಂತ ಕಿರಿದಾಗಿತ್ತು, ರಸ್ತೆ ಅಗಲೀಕರಣದ ಅಗತ್ಯತೆ ಮನಗಂಡು ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕೆಲ ಸಹೃದಯಿ ನಿವಾಸಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ, ಸಮಸ್ಯೆ ಕುರಿತು ಮನವರಿಕೆ ಮಾಡಿ, ಮನವೊಲಿಸಿದ್ದು, ಅಭಿವೃದ್ಧಿಯ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ಸಹಕಾರಿಸಿ, ಲಕ್ಷಾಂತರ ರು.ಬೆಲೆ ಬಾಳುವ ಭೂಮಿಯನ್ನು ನೀಡಿರುವ ಅಶ್ವಥ್, ಕಿಶೋರ್, ಆನಂದ್ ರೆಡ್ಡಿ ಮುಂತಾದವರ ಹೃದಯ ವೈಶಾಲ್ಯತೆಯನ್ನು ಮೆಚ್ಚಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವವಾಣಿ ಫೌಂಡೇಶನ್ ಮತ್ತು ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್, ಹಿರಿಯ ಬಿಜೆಪಿ ಮುಖಂಡ ಎಸ್ ಎನ್ ರಾಜಣ್ಣ, ಸಿಂಗನಾಯಕನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಎಸ್ ಜಿ ಪ್ರಶಾಂತ್ ರೆಡ್ಡಿ, ಸದಸ್ಯರಾದ ಕೆ.ಬಾಬು, ಮಲ್ಲೇಶ್, ಜೀವಿತಾ ಮುನಿಕೃಷ್ಣ, ಪದ್ಮಶ್ರೀ ನಾಗರಾಜ್ ರೆಡ್ಡಿ, ಬಿಜೆಪಿ  ಯುವ ಮೋರ್ಚಾ ಅಧ್ಯಕ್ಷ ಎಸ್ ಆರ್ ಜನಾರ್ಧನ್, ಭೂದಾನಿಗಳಾದ ಅಶ್ವಥ್, ಆನಂದ್ ರೆಡ್ಢಿ, ಕಿಶೋರ್ ಸೇರಿದಂತೆ ಅರುಣೋದಯ ಬಡಾವಣೆಯ ನಿವಾಸಿಗಳಿದ್ದರು.

Leave a Reply

Your email address will not be published. Required fields are marked *