ನಾಗರೀಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಬಿ.ದಯಾನಂದ್ :

.

ಯಲಹಂಕ : ಯಲಹಂಕ ಕ್ಷೇತ್ರದ ಅರಕೆರೆ ಗ್ರಾ.ಪಂ.ವ್ಯಾಪ್ತಿಯ ನೆಲ್ಲುಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆಯನ್ನು ಜಿಲ್ಲಾಧಿಕಾರಿ ಬಿ.ದಯಾನಂದ್, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಜಿಲ್ಲಾಧಿಕಾರಿ ಬಿ.ದಯಾನಂದ್ ಮಾತನಾಡಿ ‘ಜನಸಂಪರ್ಕ ಸಭೆಯನ್ನು ಆಯೋಜಿಸುವುದರಿಂದ ಅಲ್ಲಿನ ಎಲ್ಲಾ ಸಮಸ್ಯೆಗಳು, ಅಹವಾಲುಗಳು ಪರಿಹಾರ ಆಗಿ ಬಿಡುತ್ತವೆ ಎಂದು ಹೇಳಲಾಗದು. ಆದರೆ ಅಲ್ಲಿನ ತಳಮಟ್ಟದ ಸ್ಥಳೀಯ ಸಮಸ್ಯೆಗಳೇನು ಎಂಬುದು ತಿಳಿಯುತ್ತದೆ. ಅವುಗಳ ಸಮರ್ಪಕ ಪರಿಶೀಲನೆಗೆ ಅವಕಾಶ ದೊರೆಯುವುದರಿಂದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸವಿರುತ್ತದೆ ಎಂದರು.

ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ನಾಗರೀಕರು ಮಾಹಿತಿ ನೀಡಿದ್ದು, ಕೆರೆಗಳ ಒತ್ತವರಿ ತೆರವಿಗೆ ಶೀಘ್ರದಲ್ಲೇ ಕ್ರಮಕೈಗೊಳ್ಳ ಲಾಗುವುದು. ಅಲ್ಲದೆ ಇಲ್ಲಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಮತ್ತು ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ನವರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಯುಕ್ತ ನೀರನ್ನು ಸಂಸ್ಕರಿಸದೆ ಹಾಗೆಯೇ ಕೆರೆಗೆ ಬಿಡುತ್ತಿದ್ದು, ಇದರಿಂದ ಕೆರೆ ಮಲಿನವಾಗುತ್ತಿದೆ ಎಂಬ ನಾಗರೀಕರ ಅಹವಾಲನ್ನು ಸ್ವೀಕರಿದ್ದು, ಈ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸುತ್ತೇನೆ.

ಇಲ್ಲಿನ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಕ್ಕೆ ಒಳಗಾಗಿರುವ ಕುರಿತು ಸಹ ನಾಗರೀಕರು ಅಳಲು ತೋಡಿಕೊಂಡಿದ್ದಾರೆ. ಇದರ ನಿರ್ಮೂಲನೆಯ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಲಾಗುವುದು. ಉಳಿದಂತೆ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆಗೆ ಸಂಬಂಧಿಸಿದ ಕೆಲವು ಅಹವಾಲುಗಳು ಬಂದಿದ್ದು ಅವುಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ದೇಶಿಸಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ನಾನು ಚುನಾವಣೆ ವೇಳೆಯಲ್ಲಿ ಮಾತ್ರ ಪಕ್ಷ ರಾಜಕಾರಣ ಮಾಡುತ್ತೇನೆ. ಗೆದ್ದ ಮೇಲೆ ಕ್ಷೇತ್ರದ ಸರ್ವಜನರ ಶಾಸಕನಾಗಿ ಕೆಲಸ ಮಾಡುತ್ತೇನೆ. ನನಗೆ ಮತ ಹಾಕಿಲ್ಲ ಎಂಬ ಕಾರಣಕ್ಕಾಗಿ ತಾರತಮ್ಯ ಮಾಡಿದ ಉದಾಹರಣೆ ನನ್ನ ರಾಜಕೀಯ ಇತಿಹಾಸದಲ್ಲೇ ಇಲ್ಲ. ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸುತ್ತೇನೆಯೇ ಹೊರತು ಪಕ್ಷಪಾತ ಮಾಡುವುದಿಲ್ಲ.

ಆದರೆ ಕೆಲವು ವೇಳೆ ಯಾವುದೋ ಯೋಜನೆಯ ಫಲಾನುಭವಕ್ಕಾಗಿ 100 ಅರ್ಜಿಗಳು ಬಂದಿರುತ್ತವೆ, ಆದರೆ ಅದರಲ್ಲಿ ಕೇವಲ 3 ಜನ ಫಲಾನುವಿಗಳನ್ನು ಆಯ್ಕೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ಇಂತಹ ವೇಳೆಯಲ್ಲಿ ನಾನು ಎಷ್ಟೇ ಪ್ರಾಮಾಣಿಕವಾಗಿ ಆಯ್ಕೆ ಮಾಡಿದ್ದರೂ ಸಹ ಉಳಿದ 97 ಜನ ನನ್ನನ್ನು ಅನ್ಯತಾ ಭಾವನೆಯಿಂದ ನೋಡುತ್ತಾರೆ. ಈ ಕಾರಣಕ್ಕಾಗಿ ಎಲ್ಲರ ಮುಂದೆ ಲಾಟರಿ ಮಾದರಿಯಲ್ಲಿ ಆಯ್ಕೆ ಮಾಡಿದರು ಸಹ ಟೀಕೆ ಟಿಪ್ಪಣಿಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೂ ಕ್ಷೇತ್ರದ ಜನತೆಯ ಬಗ್ಗೆ ಯಾವುದೇ ತಾರತಮ್ಯ ಮಾಡದೆ ಕಾರ್ಯನಿರ್ವಹಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು, ಬೆಂ.ಉತ್ತರ ಉಪ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್, ಯಲಹಂಕ ತಹಶಿಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಯಲಹಂಕ ತಾ.ಪಂ‌.ಕಾರ್ಯ ನಿರ್ವಹಣಾ ಅಧಿಕಾರಿ ಅಪೂರ್ವ ಕುಲಕರ್ಣಿ, ಉಪ ತಹಶೀಲ್ದಾರ್ ಗಳಾದ ಶ್ರೀನಿವಾಸ್, ರಮೇಶ್ ಬಾಬು, ಅರಕೆರೆ ಗ್ರಾ.ಪಂ‌.ಅಧ್ಯಕ್ಷೆ ಮುನಿಲಕ್ಷ್ಮಮ್ಮ ಪರಶುರಾಮ್, ಉಪಾಧ್ಯಕ್ಷೆ ಪದ್ಮ ಕೃಷ್ಣಪ್ಪ, ಕೆಪಿಸಿಸಿ ಮಾಧ್ಯಮ ವಕ್ತಾರ ಮಂಜುನಾಥ್ ಅದ್ದೆ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್ ಬಿ ಹನುಮಯ್ಯ, ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಸ್ಥಳೀಯ ಗ್ರಾ.ಪಂ.ಸದಸ್ಯರಾದ ಅರಸೇಗೌಡ, ಪವನ್ ಕುಮಾರ್, ಪ್ರಕಾಶ್, ಮಂಜುಳ, ಭಾಗ್ಯಮ್ಮ ಸೇರಿದಂತೆ ಇನ್ನಿತರ ಸದಸ್ಯರಿದ್ದರು.

Leave a Reply

Your email address will not be published. Required fields are marked *