
ಯಲಹಂಕ : ಹನುಮ ಜಯಂತಿ ಪ್ರಯುಕ್ತ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬಿಜೆಪಿ ಯುವ ಮುಖಂಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅಲೋಕ್ ವಿಶ್ವನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯ ಪಲ್ಲಿಕ್ಕಿ ಉತ್ಸವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ತೀರ್ಥ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು.
ನಂತರ ಅಲೋಕ್ ವಿಶ್ವನಾಥ್ ಮಾತನಾಡಿ ‘ಪ್ರತಿ ವರ್ಷದಂತೆ ಈ ವರ್ಷವು ಸಹ ಸಿಂಗನಾಯಕನಹಳ್ಳಿ ಯಲ್ಲಿ ಹನುಮ ಜಯಂತಿಯನ್ನು ಗ್ರಾಮಸ್ಥರ ಸಹಯೋಗದೊಂದಿಗೆ ವಿಶೇಷ ರೀತಿಯಲ್ಲಿ ಆಚರಿಸಲಾಗಿದ್ದು, ಆಂಜನೇಯ ಸ್ವಾಮಿಯ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವದಲ್ಲಿ ಗ್ರಾಮಸ್ಥರು, ವಿಶೇಷವಾಗಿ ಯುವಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಹನುಮ ಜಯಂತಿ ಆಚರಣೆಗೆ ವಿಶೇಷತೆಯ ಮೆರಗು ನೀಡಿದ್ದಾರೆ. ಶಕ್ತಿಯ ಆರಾಧ್ಯದೈವ ಎಂದೇ ಹೆಸರಾಗಿರುವ ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯ ಆಯುರಾರೋಗ್ಯ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಸ್ ಎನ್ ರಾಜಣ್ಣ, ಆರ್ ಎಸ್ ಎಸ್ ಎನ್ ಬ್ಯಾಂಕ್ ನ ನಿರ್ದೇಶಕ ನಾಗರಾಜ್ ರೆಡ್ಡಿ, ಸಿಂಗನಾಯಕನಹಳ್ಳಿ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಮುಖಂಡರಾದ ಚಂದ್ರಶೇಖರರೆಡ್ಡಿ, ಪುರುಷೋತ್ತಮರೆಡ್ಡಿ, ಮಾರುತಿ, ಸುನೀಲ್, ಚರಣ್ ಸೇರಿದಂತೆ ಗ್ರಾಮಸ್ಥರಿದ್ದರು.