ಯಲಹಂಕ : ಪತ್ರಿಕಾ ವಿತರಕರ ಕಷ್ಟ-ಕಾರ್ಪಣ್ಯಗಳು, ಸವಾಲುಗಳು, ಸಾದಕ-ಬಾದಕಗಳನ್ನು ಕುರಿತು ರಂಗಬ್ರಹ್ಮ ಡಾ.ಎಸ್.ಎಲ್.ಎನ್. ಸ್ವಾಮಿಯವರು ರಚಿಸಿರುವ ‘ನಸುಕಿನ ನೊಗ’ ಹೊಸ ನಾಟಕ ಕುರಿತು ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಪರಾಮರ್ಶೆ ಸಭೆ ನಡೆಸಲಾಯಿತು.

ಸಭೆಯಲ್ಲಿ ನಾಟಕ ರಚನೆಕಾರರಾದ ಡಾ.ಎಸ್ ಎಲ್ ಎನ್ ಸ್ವಾಮಿ ಯವರು ಉಪಸ್ಥಿತರಿದ್ದು, ನಸುಕಿನ ನೊಗ ನಾಟಕದ ಕಥಾ ಹಂದರ ಕುರಿತು ಪತ್ರಿಕಾ ವಿತರಕರೊಂದಿಗೆ ಚರ್ಚಿಸಿದ ಅವರು, ಕಥೆಗೆ ಪೂರಕವಾದ ವಿಷಯಗಳು, ವಿತರಕರ ಸ್ವ ಅನುಭವಗಳನ್ನು ಆಲಿಸಿದರು.

ಇದೇ ವೇಳೆ ಮಾತನಾಡಿದ ಅವರು ‘ಪತ್ರಿಕಾ ವಿತರಕರ ಕೆಲಸ ಅತ್ಯಂತ ಸವಾಲಿನ ಕೆಲಸವಾಗಿದ್ದು, ಪತ್ರಿಕೆ ದೇಹವಾದರೆ, ವಿತರಕರು ಅದರ ಆತ್ಮವಿದ್ದಂತೆ, ಪತ್ರಿಕೆಗಳಿಗೆ ಜೀವಕಳೆ ತುಂಬುವವರು ವಿತರಕರು. ಜಗವೇ ಗಾಢ ನಿದ್ರೆಯಲ್ಲಿರುವ ನಸುಕಿನ ವೇಳೆಯಲ್ಲಿ ಎದ್ದು ಕರ್ತವ್ಯ ಪ್ರವೃತ್ತರಾಗುವ ವಿತರಕರು ಸೂರ್ಯನನ್ನೇ ಎಬ್ಬಿಸುವ ಭಾಗ್ಯಶಾಲಿಗಳು, ಹಲವು ಅವಮಾನಗಳ ನಡುವೆಯೂ ಅವುಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವ ವಿತರಕರ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ನಿಜಕ್ಕೂ ಅನುಕರಣೀಯ ಮತ್ತು ಅನುಸರಣೀಯ ಎಂದರು.

‘ನಸುಕಿನ ನೊಗ’ ನಾಟಕವನ್ನು ರಂಗಪ್ರಯೋಗ ಮಾಡಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ವಿತರಕರ ಸ್ವ ಅನುಭವಗಳನ್ನು ಆಲಿಸಿ, ನಾಟಕದ ರಂಗಪ್ರಯೋಗಕ್ಕೆ ಇನ್ನೂ ಹೆಚ್ಚಿನ ಜೀವಕಳೆ ತುಂಬಬೇಕೆಂಬ ದಿಸೆಯಲ್ಲಿ ಈ ಪರಾಮರ್ಶೆ ಸಭೆ ಕರೆಯಲಾಗಿದ್ದು, ವಿತರಕರ ಆಯ್ದ ಅನುಭವಗಳನ್ನು ರಂಗಪ್ರಯೋಗ ದಲ್ಲಿ ಮನೋಜ್ಞವಾಗಿ ಕಟ್ಟಿಕೊಡ ಬೇಕೆಂಬುದು ನಮ್ಮ ಉದ್ದೇಶ ವಾಗಿದೆ. ರಾಜ್ಯದ ವಿತರಕರೆಲ್ಲರೂ ಒಗ್ಗೂಡಿ, ಚರ್ಚಿಸಿ ಮಾರ್ಚ್ ಮಾಹೆಯಲ್ಲಿ ದಿನ ನಗದಿ ಪಡಿಸಿದರೆ ನಾಟಕದ ರಂಗ ಪ್ರಯೋಗಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ನಾಟಕ ಪರಾಮರ್ಶೆಯ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ, ಯಲಹಂಕ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿ ಗಳಾದ ವೈ.ಸಿ.ವೀರಭದ್ರ, ವೆಂಕಟೇಶ್ ಮೂರ್ತಿ, ಕುಮಾರ್, ಉಮೇಶ್, ಸಂಗಂ ಸುರೇಶ್, ನಾರಾಯಣ, ಸಂತೋಷ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *