
ಬ್ಯಾಟರಾಯನಪುರ : 75ನೇ ಗಣರಾಜ್ಯೋ ತ್ಸವದ ಅಂಗವಾಗಿ, ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಾಗುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ’ಗೆ ಎಲ್ಲೆಡೆ ಭವ್ಯ ಸ್ವಾಗತ ದಿರೆಯುತ್ತಿದ್ದು, ಭಾನುವಾರ ಸಂವಿಧಾನ ಜಾಗೃತಿ ಜಾಥಾ ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರಿಗೆ ಆಗಮಿಸಿತು.
ಗ್ರಾಮಕ್ಕೆ ಆಗಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ರವರ ಮತ್ತು ಸಂವಿಧಾನದ ಪುತ್ತಳಿ ಒಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವನ್ನು ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷೆ ವಿಮಲಾ ಗಣೇಶ್, ಮಾಜಿ ಅಧ್ಯಕ್ಷರು, ಸರ್ವಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು ಅದ್ಧೂರಿ ಯಾಗಿ ಪೂರ್ಣಕುಂಭದೊಂದಿಗೆ ಗ್ರಾಮಕ್ಕೆ ಸ್ವಾಗತಿಸಿದರು.
ಈ ವೇಳೆ ಜಾಗೃತಿ ಜಾಥಾ ರಥದ ಮೇಲೆ ಪುಷ್ಪವೃಷ್ಟಿಯನ್ನೇ ಸುರಿಸಿ ಸಂಭ್ರಮ ಆಚರಿಸಿದರು. ಸಂವಿಧಾನ ಪೀಠಿಕೆಯ ಭಿತ್ತಿಪತ್ರಗ ಳನ್ನು ಹಿಡಿದು ಜನರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ನಂತರ ಬೆಟ್ಟಹಲಸೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸಂವಿಧಾನದ ಆಶಯಗಳು ಮತ್ತು ಅಂಬೇಡ್ಕರ್ ರವರ ಬದುಕು, ಬರಹ ಕುರಿತು ಉಪನ್ಯಾಸ ಮಾಡಿದರು. ಇದೇ ವೇಳೆ ನೆರೆದ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ವಿವಿಧ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ, ಸಂವಿಧಾನ ಕುರಿತ ಜಾಗೃತಿ ಗೀತೆಗಳ ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಲೆಗಳ ಅನಾವರಣವಾಯಿತು. ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾಮದ ಋತ್ವಿಕ್ ಎಂಬ ಬಾಲಕ ಅಂಬೇಡ್ಕರ್ ರವರಂತೆಯೇ ಉಡುಗೆ ತೊಟ್ಟು, ಅಂಬೇಡ್ಕರ್ ರವರಂತೆಯೇ ನಿಂತು ನೆರೆದ ಜನತೆಯ ಗಮನ ಸೆಳೆದ ದೃಶ್ಯ ಕಂಡು ಬಂತು.
ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷೆ ವಿಮಲಾ ಗಣೇಶ್, ತಾ.ಪಂ.ಮಾಜಿ ಸದಸ್ಯರಾದ ನಾಗರಾಜ್(ಬಾಬು) ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್ ಸದಸ್ಯರಾದ ಬಿ.ಆರ್.ಪ್ರವೀಣ್, ಕುದುರಗೆರೆ ಕೃಷ್ಣಮೂರ್ತಿ, ಟಿ.ಎಸ್.ನವೀನ್, ಅಮರ್, ರಾಜಣ್ಣ, ಸುಬ್ರಮಣಿ,ಶಶಿಕುಮಾರ್, ಹಸಿರೇ ಉಸಿರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸ್ ಸೇರಿದಂತೆ ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಗ್ರಾಮಸ್ಥರಿದ್ದರು.