
ಬ್ಯಾಟರಾಯನಪುರ : 75ನೇ ಗಣರಾಜ್ಯೋ ತ್ಸವದ ಅಂಗವಾಗಿ, ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಾಗುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ’ಗೆ ಎಲ್ಲೆಡೆ ಭವ್ಯ ಸ್ವಾಗತ ದೊರೆಯುತ್ತಿದ್ದು, ಭಾನುವಾರ ಸಂವಿಧಾನ ಜಾಗೃತಿ ಜಾಥಾ ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲಕ್ಕೆ ಆಗಮಿಸಿತು.
ಗ್ರಾಮಕ್ಕೆ ಆಗಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ರವರ ಮತ್ತು ಸಂವಿಧಾನದ ಪುತ್ತಳಿ ಒಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವನ್ನು ಚಿಕ್ಕಜಾಲ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಸರ್ವಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು ಅದ್ಧೂರಿ ಯಾಗಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಈ ವೇಳೆ ಜಾಗೃತಿ ಜಾಥಾ ರಥದ ಮೇಲೆ ಪುಷ್ಪವೃಷ್ಟಿಯನ್ನೇ ಸುರಿಸಿ ಸಂಭ್ರಮ ಆಚರಿಸಿದರು. ಸಂವಿಧಾನ ಪೀಠಿಕೆಯ ಭಿತ್ತಿಪತ್ರಗ ಳನ್ನು ಹಿಡಿದು ಜನರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ನಂತರ ಚಿಕ್ಕಜಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸಂವಿಧಾನದ ಆಶಯಗಳು ಮತ್ತು ಅಂಬೇಡ್ಕರ್ ರವರ ಬದುಕು, ಬರಹ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ನೆರೆದ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಲಾಯಿತು.
ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ವಿವಿಧ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ, ಸಂವಿಧಾನ ಕುರಿತ ಜಾಗೃತಿ ಗೀತೆಗಳ ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಲೆಗಳ ಅನಾವರಣ ವಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಜಾಲ ಗ್ರಾ. ಪಂ. ಅಧ್ಯಕ್ಷ ಅನಂತಕುಮಾರ್ ಸಿ.ಎನ್., ಉಪಾಧ್ಯಕ್ಷೆ ಗೌರಿಗೋಪಾಲ್, ತಾ.ಪಂ.ಮಾಜಿ ಸದಸ್ಯ ಎಸ್.ಉದಯಶಂಕರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮೀಪತಿ, ಪಿ.ವಿ.ಸಿ.(ಎಸ್)ಸಂಘಟನೆಯ ಜಾಲಕಿಟ್ಟಿ, ಪಿಡಿಓ ವೆಂಕಟೇಶ್, ಮುಖಂಡರಾದ ಪ್ರೇಮ್ ಕುಮಾರ್,ರಚನ್ ಕುಮಾರ್, ರವಿಕುಮಾರ್, ಮಂಜುಳಾಪ್ರಸಾದ್ ಸೇರಿದಂತೆ ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರಿದ್ದರು.