ದೇವನಹಳ್ಳಿ: ಕಳೆದ 75 ವರ್ಷಗಳಿಂದ ಸುಮಾರು 5 ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನವನ್ನು ಜಾರಿಗೊಳಿಸಿದ್ದರೆ ಇಂದು ಸಂವಿಧಾನ ರಕ್ಷಣೆ ಮಾಡಬೇಕು ಎಂದು ಸೋಗು ಹಾಕುವ ಅಗತ್ಯವಿರಲಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಮುಖಂಡ ಮಾರಸಂದ್ರ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿಯ ವಿಜಯಪುರ ಕ್ರಾಸ್ ಬಳಿಯ ಹಳೆ ಆರ್ ಟಿಓ ಕಚೇರಿ ಮುಂಭಾಗದಲ್ಲಿ ಬಹುಜನ ಸಮಾಜ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಏಳು ದಶಕಗಳಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಕಾಂಗ್ರೆಸ್ ಆಳ್ವಿಕೆ ಮಾಡಿದೆ ಈ ಅವದಿಯಲ್ಲಿ ತಳ ಸಮುದಾಯಗಳು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬಡವರ ಪರವಾಗಿ ಕಾಳಜಿ ವಹಿಸಿ ಇಚ್ಛಾಶಕ್ತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವನ್ನು ಜಾರಿಗೊಳಿಸಿದ್ದರೆ ಇಂದು ಮನುವಾದಿ ರಾಜಕೀಯ ಶಕ್ತಿಗಳು ತಮ್ಮ ಮಾಲೀಕತ್ವದ ಮಾಧ್ಯಮಗಳ ಮೂಲಕ ಸಮಾಜದಲ್ಲಿ ದ್ವೇಷ ಬಿತ್ತಿ ಸಮಾಜವನ್ನು ಜಾತಿ, ಧರ್ಮ, ಬಾಷೆಗಳ ಮೂಲಕ ಈ ದೇಶದ ಮೂಲ ನಿವಾಸಿಗಳನ್ನು ವಿಭಜಿಸಲು ಸಾಧ್ಯವಾಗುತ್ತಿರಲಿಲ್ಲ ಈ ದೇಶದ ಬಹುಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಜಮೀನುಗಳನ್ನು ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಸಮಾನವಾಗಿ ಹಂಚಿಕೆ ಮಾಡಿದ್ದರೆ ಬಡವರು ಮತ್ತು ಶ್ರೀಮಂತರ ನಡುವೆ ಈ ಮಟ್ಟದಲ್ಲಿ ಅಂತರ ಇರುತ್ತಿರಲಿಲ್ಲ ಜನರಿಗೆ ಆಮಿಷ ತೋರಿಸಿ ಹಣ, ಹೆಂಡ, ಸಾರಾಯಿ ಹಂಚಿ ಕೇವಲ ಚುನಾವಣೆಗಳನ್ನು ಮಾಡಿಕೊಂಡು ನಿರಂತರವಾಗಿ ಜನರಿಗೆ ವಂಚಿಸಿದ್ದರಿಂದ ದೇಶ ಇಂದು ಈ ಪರಿಸ್ಥಿತಿಗೆ ತಲುಪಿದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಝಂಡ ಬೇರೆ ಬೇರೆಯಾದರು ಅಜೆಂಡಾ ಒಂದೇ ಆಗಿದೆ, ಈ ಪಕ್ಷಗಳು ಹಣಬಲದಿಂದ ಚುನಾವಣೆಯಲ್ಲಿ ಗೆದ್ದು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಾರೆ. ಜನರಿಗೆ ಮಂಕುಬೂದಿ ಎರಚಲು ಒಂದು ಪಕ್ಷ ಸಂವಿಧಾನ ಬದಲಾಯಿಸುತ್ತೇವೆ ಎಂದು ಮತ್ತೊಂದು ಪಕ್ಷ ಉಳಿಸುತ್ತೇವೆ ಎಂದು ಪರಸ್ಪರ ದಿನನಿತ್ಯ ನಾಟಕೀಯ ಪ್ರದರ್ಶನ ಮಾಡುತ್ತಾರೆ ಇಂತಹ ವಂಚಕ ಮನಸ್ಥಿತಿಯ ಪಕ್ಷಗಳನ್ನು ತಿರಸ್ಕರಿಸಿ ದೇಶದ ಮೂಲನಿವಾಸಿಗಳು ಬಹುಸಂಖ್ಯಾತರು ಆಗಿರುವ ಬಹುಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಕಾನ್ಸಿರಾಂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಎಲ್ಲರೂ ಜೊತೆಯಾಗಿ ಹೋರಾಟ ಮಾಡಿ ಬಂಡವಾಳಶಾಹಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ಈ ದೇಶವನ್ನು ಉಳಿಸಿಕೊಳ್ಳಲು ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ನಿರಂತರ ದೌರ್ಜನ್ಯ ಹಿಂಸೆ ಬಡತನಕ್ಕೆ ತುತ್ತಾಗಿರುವ ತಳ ಸಮುದಾಯಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನ ಜಾತಿ, ಧರ್ಮಗಳ ಬಲೆಯಲ್ಲಿ ಸಿಲುಕಿ ರಾಜಕೀಯ ಶೋಷಣೆಗೆ ಬಲಿಯಾಗದೆ ಸಂಘಟಿತರಾಗಿ ಈ ನೆಲದ ಭೂಮಿ, ನೀರು, ಸಂಪತ್ತು, ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಸಮಾನ ಹಕ್ಕು ಪಡೆದೇ ತೀರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಮುನಿಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮಹಾದೇವಪ್ಪ, ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್, ಉಪಾಧ್ಯಕ್ಷ ನಾಗರಾಜ್, ಮಹಿಳಾ ಜಿಲ್ಲಾ ಅಧ್ಯಕ್ಷೆ ರಮಾದೇವಿ, ಜಿಲ್ಲಾ ಸಂಯೋಜಕ ನಂಜಪ್ಪ, ಜಿಲ್ಲಾ ಕಾರ್ಯದರ್ಶಿ ಗೋಪಾಲ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಕೆಸಿ ನಾಗರಾಜ್ ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಮುಖಂಡರುಗಳಾದ ರಾಮಾಂಜಿ, ನರಸಿಂಹಮೂರ್ತಿ, ನಿಂಗಣ್ಣ, ಜಗದೀಶ್, ಶಶಿಕಲಾ, ಹೇಮಾಚಕ್ರಪಾಣಿ, ಮಮತಾ, ಮಂಜುಳಾ ಉಮಾ, ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು, ಕಾರ್ಯಕರ್ತರುಗಳು ಇದ್ದರು.