ರಕ್ಷಾ ರಾಮಯ್ಯ ಸಜ್ಜನ, ಉತ್ಸಾಹಿ ಹಾಗೂ ಕಾಳಜಿ ಇರುವ ಅಭ್ಯರ್ಥಿ – ಭ್ರಷ್ಟ ಸುಧಾಕರ್ ಸೋಲಿಸಿ, ಜನತಾ ನ್ಯಾಯಾಲಯದಲ್ಲಿ ಶಿಕ್ಷಿಸಿ – ಸಿದ್ಧರಾಮಯ್ಯ ಕರೆ
ಭ್ರಷ್ಟಾಚಾರಿಗೆ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ – ಮುಖ್ಯಮಂತ್ರಿ ಆಕ್ರೋಶ
ಚಿಕ್ಕಬಳ್ಳಾಪುರ,ಏ,18; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಕ್ಷೇತ್ರದ ವಿವಿಧೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು “ಪ್ರಜಾಧ್ವನಿ – 2” ಪ್ರಚಾರ ಅಭಿಯಾನದಡಿ ಬೃಹತ್ ರೋಡ್ ಶೋ ನಡೆಸಿದರು. ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರವೆಸಗಿರುವ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರ ವಿರುದ್ಧ ರಣಕಹಳೆ ಮೊಳಗಿಸಿದರು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯಾಗುವ ಮುನ್ನ ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನತಾ ನ್ಯಾಯಾಲಯದಲ್ಲಿ ಶಿಕ್ಷಿಸುವಂತೆ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು. ಬ್ರಷ್ಟಾಚಾರಿಯ ಪರ ಮತ ಕೇಳಲು ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಬೃಹತ್ ರೋಡ್ ಶೋಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದ ಜನತೆ, ರಕ್ಷಾ ರಾಮಯ್ಯ ಪರ ಜೈ ಕಾರ ಮೊಳಗಿತು. ಎಲ್ಲೆಡೆ “ರಕ್ಷಾ ರಾಮಯ್ಯರನ್ನು ಗೆಲ್ಲಿಸಿ” ಎಂದು ಮುಖ್ಯಮಂತ್ರಿಯವರು ಜನರಲ್ಲಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೊಡ್ಡ ಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಪರ ಸಿದ್ದರಾಮಯ್ಯ ವಿದ್ಯುತ್ ಸಂಚಾರ ಉಂಟು ಮಾಡಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಸುಬ್ಬಾ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಡಾ. ಎಂ.ಆರ್. ಸೀತಾರಾಂ ಮತ್ತಿತರೆ ಮುಖಂಡರ ನೇತೃತ್ವದಲ್ಲಿ ಯಶಸ್ವಿಯಾಗಿ ಪ್ರಚಾರ ಸಭೆಗಳು ನಡೆದವು.
ಬಾಕ್ಸ್
ಚಿಕ್ಕಬಳ್ಳಾಪುರದಲ್ಲಿ ಸಿಎಂ – 1
ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮವಿಶ್ವಾಸ ಮತ್ತು ಸ್ಪಷ್ಟ ಮಾತುಗಳಲ್ಲಿ ಘೋಷಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಬೃಹತ್ ರೋಡ್ ದಲ್ಲಿ ಮಾತನಾಡಿದ ಅವರು, ನೀವೇ ತಿರಸ್ಕರಿಸಿದ ಎನ್.ಡಿ.ಎ ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ ಎಂದು ಕರೆ ನೀಡಿದರು.
ಭ್ರಷ್ಟಾಚಾರಿ ಎನ್ನುವ ಕಾರಣಕ್ಕೇ ಇಲ್ಲಿನ ಜನತೆ ಸುಧಾಕರ್ ಅವರನ್ನು ಸೋಲಿಸಿದ್ದೀರಿ. ಇವರ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಇವರ ಭ್ರಷ್ಟಾಚಾರ ಸಾಬೀತಾಗುತ್ತದೆ. ಬಳಿಕ ಸುಧಾಕರ್ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗುತ್ತಾರೆ ಎಂದರು.
ಸುಧಾಕರ್ ಅವರಿಗೆ ಜನತಾ ನ್ಯಾಯಾಲಯದಲ್ಲಿ ನೀವೂ ಶಿಕ್ಷೆ ಕೊಡಬೇಕು. ಶಿಕ್ಷೆ ಕೊಟ್ಟರೆ ಮಾತ್ರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಎಸಗಿದ ಮೋಸಕ್ಕೆ ಮತ್ತು ಮಂತ್ರಿಯಾಗಿ ಮಾಡಿದ ಭ್ರಷ್ಟಾಚಾರಕ್ಕೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂದರು.
ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಅರ್ಹ ಕುಟುಂಬದ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ರಾಜ್ಯ ಸರ್ಕಾರ ಕೊಡುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಕೂಡ ಇದಕ್ಕೆ ಸೇರಿ ವರ್ಷಕ್ಕೆ ಒಂದು ಲಕ್ಷದ 24 ಸಾವಿರ ರೂಪಾಯಿ ಪ್ರತೀ ಕುಟುಂಬಗಳ ಖಾತೆಗೆ ಬರುತ್ತದೆ ಎಂದು ಘೋಷಿಸಿದರು.
ವಾಗ್ದಾನಗಳು
*ಇಡೀ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡಲಾಗುವುದು.
*ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಲಕ್ಷ ನಿರುದ್ಯೋಗ ಭತ್ಯೆ ಸಿಗುತ್ತದೆ.
*ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತವಾಗಿ ನೀಡಲಾಗುವುದು.
*ಪ್ರಧಾನಿ ಮೋದಿಯವರ ಕೆಟ್ಟ ನೀತಿಯಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಜನರ ಪರವಾದ ಆರದಥಿಕತೆಯನ್ನು ಪುನರ್ ಸ್ಥಾಪಿಸಲಾಗುವುದು.
*ನೂರಕ್ಕೆ ನೂರು ಈ ಬಾರಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ. ಇವರಿಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಕೋರಿದರು.
ಬಾಕ್ಸ್ – 2
ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನಸಮಾವೇಶ
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕರೆ ನೀಡಿ ಮಾತನಾಡಿದರು.
ಕೊಟ್ಟ ಮಾತು ಈಡೇರಿಸದ ಬಿಜೆಪಿಗೆ ಮತ್ತು ಇವರ ಜತೆ ಸೇರಿರುವ ಜೆಡಿಎಸ್ ಗೆ ನಿಮ್ಮ ಮತ ಕೇಳುವ ನೈತಿಕತೆ ಇಲ್ಲ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈಗ ಅದೇ ಮೋದಿಯವರನ್ನು ಅಪ್ಪಿಕೊಂಡಿದ್ದಾರೆ. ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಐದೂ ವರ್ಷ ನಮ್ಮ ಸರ್ಕಾರ ಸುಭದ್ರವಾಗಿದ್ದು ಮತ್ತೆ ನಾವೇ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿ ಸೋತು ಮನೆ ಸೇರಿರುವ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ನಡೆಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ಲೋಕಸಭಾ ಚುನಾವಣೆಯಲ್ಲೂ ಅದೇ ಗತಿ ಆಗಲಿದೆ ಎಂದು ಖಚಿತವಾಗಿ ನುಡಿದರು.
ಭಾರತೀಯರಿಗೆ ಭ್ರಮೆ ಹುಟ್ಟಿಸಿ ವಂಚಿಸಿದ ಮೋದಿಯವರನ್ನು ಈ ಬಾರಿ ದೇಶ ತಿರಸ್ಕರಿಸಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಗ್ಯಾರಂಟಿಗಳು ಜಾರಿಯಾಗಲಿವೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಪ್ರತೀ ತಿಂಗಳು 5 ರಿಂದ 6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಇಂಥಾ 25 ಹೊಸ ಗ್ಯಾರಂಟಿಗಳು ಜಾರಿಗೆ ಬರಲಿದೆ ಎಂದರು.
ಬಾಕ್ಸ್ – 3
ಶಾಸಕ ಸುಬ್ಬಾರೆಡ್ಡಿ ಅವರಿಗೆ ಮುಂದೆ ಒಳ್ಳೆ ರಾಜಕೀಯ ಭವಿಷ್ಯ ಇದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಗೌರಿಬಿದನೂರು – ಬಾಕ್ಸ್ – 4
ಗೌರಿಬಿದನೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಾ ರಾಮಯ್ಯ ಪರ ಭರ್ಜರಿ ಪ್ರಚಾರ ನಡೆಸಿದರು. ಗೌರಿಬಿದನೂರಿನ ರೋಡ್ ಶೋ ನಲ್ಲಿ ಜನ ಸಾಗರವೇ ಹರಿದು ಬಂತು.
ಕೊರೊನಾದಂತಹ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ಮನುಕುಲ ಯಾವತ್ತೂ ಕ್ಷಮಿಸುವುದಿಲ್ಲ. ನೀವೂ ಕ್ಷಮಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಇಡೀ ಮನುಕುಲ ಜೀವಭಯದಲ್ಲಿ ಆತಂಕದಲ್ಲಿ ಇದ್ದ ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರನ್ನು ಹೃದಯ ಇದ್ದವರು ಯಾರೂ ಕ್ಷಮಿಸುವುದಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಅರ್ಥಪೂರ್ಣ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.
ಯಾವ ಕಾರಣಕ್ಕೂ ಇಲ್ಲಿ ಭ್ರಷ್ಟ ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ರಕ್ಷಾ ರಾಮಯ್ಯ ಸಜ್ಜನ ಮತ್ತು ಉತ್ಸಾಹಿ ಹಾಗೂ ಕಾಳಜಿ ಇರುವ ಅಭ್ಯರ್ಥಿ. ಇವರನ್ನು ಗೆಲ್ಲಿಸಿ ಕ್ಷೇತ್ರದ ಮತದಾರರ ಮತಗಳಿಗೆ ಒಳ್ಳೆಯ ಘನತೆ ತಂದು ಕೊಡುತ್ತಾರೆ ಎಂದರು.
ಗೌರಿಬಿದನೂರಿನಲ್ಲಿ 50 ಸಾವಿರ ಮತಗಳ ಲೀಡ್ ಸಿಕ್ಕೇ ಸಿಗತ್ತದೆ : ಗೌರಿ ಬಿದನೂರು ಕ್ಷೇತ್ರದ ಶಿವಶಂಕರ ರೆಡ್ಡಿ ಮತ್ತು ಪುಟ್ಟಸ್ವಾಮಿ ಗೌಡರು ಒಟ್ಟಾಗಿ ರಕ್ಷಾ ರಾಮಯ್ಯರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ ಎನ್ನುವ ನಂಬಿಕೆ, ಭರವಸೆ ನನಗಿದೆ. ಹೀಗಾಗಿ ಇಬ್ಬರೂ ಸೇರಿ ಗೌರಿಬಿದನೂರು ಕ್ಷೇತ್ರದಲ್ಲಿ 50 ಸಾವಿರ ಲೀಡ್ ಕೊಡಿಸುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ. ಪ್ರವಾಹ ಬಂದಾಗಲೂ ಈ ಕಡೆ ತಲೆ ಹಾಕಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ. ಚುನಾವಣೆ ವೇಳೆ ಭ್ರಷ್ಟರನ್ನು ಗೆಲ್ಲಿಸಲು ರಾಜ್ಯಕ್ಕೆ ಮೇಲಿಂದ ಬರ್ತಾರೆ ಅಂದರೆ ಅದು ರಾಜ್ಯದ ಜನತೆಗೆ ಮಾಡುವ ಅವಮಾನ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.



