



ಬ್ಯಾಟರಾಯನಪುರ : ದೇವೇಗೌಡರು ದೇಶದ ಪ್ರಧಾನಿಯಾಗಿದ್ದು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದು ಕಾಂಗ್ರೆಸ್ ಪಕ್ಷದ ಸಹಕಾರದಿಂದಲೇ ಹೊರತು ಬಿಜೆಪಿ ಪಕ್ಷದಿಂದಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು.
ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್ ಗೌಡ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ಆರು ಕೋಟಿ ಕನ್ನಡಿಗರಿಗೆ ಅನುದಾನ ಕಡಿತ ಮಾಡಿದ ವಿಚಾರದಲ್ಲಿ ಧ್ವನಿ ಎತ್ತದವರು, ಬರ ಪರಿಹಾರದಲ್ಲಿ ಆಗಿರುವ ಅನ್ಯಾಯದ ವಿರುದ್ದ ತುಟಿ ಬಿಚ್ಚದವರು ಈಗ ಪ್ರಧಾನಿಗಳ ಪಕ್ಕದಲ್ಲಿ ಕೂತು ಏನೇನೋ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಅನುದಾನದ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಿ ಹೋರಾಟ ಮಾಡಿ ಜಯ ಸಾಧಿಸಿದೆ.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕ ರಾಜ್ಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತಿ ಕಡಿಮೆ ಅನುದಾನ ನೀಡಿ ಸತತ ಹತ್ತು ವರ್ಷಗಳ ಕಾಲ ವಂಚನೆ ಎಸಗಿದೆ. ಇದನ್ನು ಡಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಯಾವ ಬಿಜೆಪಿ ನಾಯಕರು ಕೂಡ ಪ್ರಶ್ನಿಸಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ಕಣ್ಣ ಮುಂದೆಯೇ ವಿಶೇಷ ಪ್ಯಾಕೇಜುಗಳು ಘೋಷಣೆ ಯಾದಾಗಲೂ ಕೂಡ ಕರ್ನಾಟಕದ ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅನುದಾನ ಕ್ಕಾಗಿ ನ್ಯಾಯಾಲಯದ ಮೊರೆ ಹೋಗ ಬೇಕಾಯಿತು. ಕೊನೆಗೆ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕಕ್ಕೆ ಬರಬೇಕಾದ ಪಾಲನ್ನು ಒಂದು ವಾರದೊಳಗೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಇದು ಆರು ಕೋಟಿ ಕನ್ನಡಿಗರ ಆತ್ಮಸಾಕ್ಷಿಯ ಹೋರಾಟಕ್ಕೆ ಸಂದ ಜಯ ಎಂದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವಗೌಡ ಮಾತನಾಡಿ ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವನಾಗಿದ್ದು, ಬೆಂಗಳೂರಿಗರ ನೋವು ನನಗೆ ಅರ್ಥವಾಗುತ್ತದೆ. ಹೀಗಾಗಿ ಎಲ್ಲಿಂದಲೋ ಬಂದು ಬಿಜೆಪಿ ಪಕ್ಷದಿಂದ ಪ್ರತಿಷ್ಠಾಪನೆ ಗೊಂಡಿರುವ ಬಗ್ಗೆ ತಲೆ ಕೆಡಿಸಿ ಕೊಳ್ಳದೇ ನಿಮ್ಮೊಂದಿಗೆ ಸದಾ ಕಾಲ ಜೊತೆಗಿರಲು ಬಯಸುವ ನನ್ನನ್ನು ಲೋಕಸಭೆಗೆ ಕಳುಹಿಸಿಕೊಡ ಬೇಕೆಂದು ಮನವಿ ಮಾಡಿದರು.
ರೋಡ್ ಶೋನಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಅಶೋಕನ್, ದಾನೇಗೌಡ, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಮಹೇಶ್ ಕುಮಾರ್, ಉತ್ತರ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಕೋಗಿಲು ವೆಂಕಟೇಶ್, ಕೋಡಗಲಹಟ್ಟಿ ಜೆ.ಶ್ರೀನಿವಾಸ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಜೆ.ಮುನೇಗೌಡ, ಚೊಕ್ಕನಹಳ್ಳಿ ನಂಜೇಗೌಡ, ಬಿ.ಎಂ.ನಾಗೇಶ್, ಜಗನ್ನಾಥ್, ವೆಂಕಟರಾಜು, ಎಚ್ ಎಸ್ ದಯಾನಂದ, ಶರವಣ ಕುಮಾರ್, ಹೆಚ್ ಬಿ ಹರೀಶ್, ಕಾಂಗ್ರೆಸ್ ಮುಖಂಡರಾದ ಉದಯಶಂಕರ್, ಲಕ್ಷ್ಮೀಪತಿ, ಬಿ.ಕೆ.ನಾರಾಯಣ ಸ್ವಾಮಿ(ಎಲ್ ಐಸಿ), ಯಡಿಯೂರು ಶಾಂತಕುಮಾರ್,ಬಿ.ಆರ್.ಪ್ರವೀಣ್, ಎ.ಸಿ.ಗೋವಿಂದರಾಜು, ಜಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷ ರಾಮೇಗೌಡ, ಮುನಿರಾಮಣ್ಣ (ಎಂ.ಆರ್.), ಎಸ್ ಸಿ ಬ್ಲಾಕ್ ಅಧ್ಯಕ್ಷ ಮರಳುಕುಂಟೆ ರಮೇಶ್, ಮಾಜಿ ಅಧ್ಯಕ್ಷ ತಿರುಮಳಪ್ಪ, ಎನ್ ಎಸ್ ಯುಐ ಮುಖಂಡ ರಾಹುಲ್, ಬಡವರ ಮಿತ್ರ ಶಬ್ಬೀರ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
R Hanumanthu.
,9845085793