
ಜ್ಞಾನವನ್ನು ಹೆಚ್ಚಿಸುವ ಅಕ್ಷಯ ತೃತೀಯ
ಅಕ್ಷಯ ತೃತೀಯ ಎಂದಾಕ್ಷಣ ನಮ್ಮ ಈಗಿನ ಜನರಲ್ಲಿ ಬರುವುದು ಬಂಗಾರ ಬೆಳ್ಳಿಯನ್ನು ಖರೀದಿ ಮಾಡಬೇಕು ಅನ್ನುವುದು. ಅಕ್ಷಯ ತೃತೀಯ ಬಹಳ ಪವಿತ್ರವಾದ ದಿನ ಈ ದಿನದಲ್ಲಿ ನಾವು ಯಾವುದೇ ಕೆಲಸವನ್ನು ಪಂಚಾಂಗ ದಿನ, ಗಳಿಗೆ ನೋಡದೆ ಮಾಡಬಹುದಾದಂತಹ ಅತ್ಯುತ್ತಮ ದಿನವಿದು. ಈ ದಿನ ವಿಶೇಷದಲ್ಲಿ ವಿಶೇಷ ಕಾರಣ ಇಂದು ಮಹಾವಿಷ್ಣುವೂ ಪರಶುರಾಮನಾಗಿ ಜನಿಸಿದಂತಹ ದಿನ, ಅಷ್ಟೇ ಅಲ್ಲ ತ್ರೇತಾ ಯುಗ ಪ್ರಾರಂಭವಾದ ದಿನ ಹಾಗೂ ದ್ರೌಪದಿಗೆ ನಿರಂತರವಾಗಿ ಸೀರೆಯನ್ನು ಕರುಣಿಸಿ ಅವಳ ಮಾನವನ ಕಾಪಾಡಿದಂತಹ ದಿನ, ಹಾಗೂ ಶಂಕರಾಚಾರ್ಯರು ಕನಕದಾರ ಸ್ತೋತ್ರವನ್ನು ರಚಿಸಿ ಅಂದು ಯಾರು ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೋ ಅವರಿಗೆ ಲಕ್ಷ್ಮಿಯ ಅನುಗ್ರಹವಿರಲಿ ಎಂದು ಹೇಳಿದಂತಹ ದಿನ, ವ್ಯಾಸ ಮಹರ್ಷಿಗಳು ಮಹಾಭಾರತವನ್ನು ರಚಿಸಲು ಆರಂಭಿಸಿದ ದಿನ,ಗಂಗೆ ಭಗೀರಥನ ಜೊತೆ ಬಂದು ಭೂಮಿಯನ್ನು ಸ್ಪರ್ಶಿಸಿದ ದಿನ, ಅಷ್ಟೇ ಅಲ್ಲ ಕುಬೇರನು ಸಹ ವಿಶೇಷವಾಗಿ ಲಕ್ಷ್ಮಿಯ ಸಾನಿಧ್ಯವನ್ನು ಪಡೆದು ಕುಬೇರನಾದ ದಿನ ಎಲ್ಲಕ್ಕಿಂತ ಮುಖ್ಯ ಕೃಷ್ಣಪರಮಾತ್ಮ ಕುಚೇಲನಾಗಿದ ತನ್ನ ಸ್ನೇಹಿತನನ್ನ ಕರೆಸಿ ಅವನು ತಂದಂತಹ ಅವಲಕ್ಕಿಯನ್ನ ಸ್ವೀಕರಿಸಿ ಅವನನ್ನು ಸುಧಾಮನಾಗಿ ಮಾಡಿ ಅವನಿಗೆ ಸಕಲ ಅಷ್ಟೈಶ್ವರ್ಯಗಳನ್ನು ಕೊಟ್ಟಂತಹ ದಿನ ಹಾಗೂ ದುರ್ಯೋಧನನ ದುಷ್ಟ ಆಲೋಚನೆಗಳಿಗೆ ಒಳಪಟ್ಟು ದುರ್ವಾಸಮುನಿಗಳು ವನವಾಸದಲ್ಲಿ ಇದ್ದಂತಹ ಪಾಂಡವರಿಗೆ ಪರೀಕ್ಷೆ ಮಾಡಲು ಬಂದಂತಹ ದಿನ ಇಂದು.ದ್ರೌಪದಿಗೆ ಏನು ಮಾಡಬೇಕು ಅಂತ ತಿಳಿಯದಾದಾಗ ಕೃಷ್ಣನನ್ನು ಆಕೆ ಪ್ರಾರ್ಥನೆ ಮಾಡ್ತಾಳೆ, ಅದೇ ಸಮಯಕ್ಕೆ ಕೃಷ್ಣನು ಸಹ ಬಂದು ನನಗೂ ಸಹ ಬಹಳ ಹೊಟ್ಟೆ ಹಸಿಯುತ್ತಿದೆ ಎಂದು ಹೇಳುತ್ತಾನೆ ಹಾಗಾಗಿ ಎಲ್ಲರಿಗೂ ಏನು ಮಾಡಬೇಕು ಎಂದೇ ತೋಚ್ಚುವುದಿಲ್ಲ ಆಗ ಕೃಷ್ಣ ನಗುತ್ತಾ ಅಲ್ಲೇ ಎಲ್ಲವನ್ನ ತೊಳೆದು ಇಟ್ಟಂತಹ ಪಾತ್ರೆಯಲ್ಲಿ ಇದ್ದಂತಹ ಒಂದು ಅನ್ನದ ಅಗಳನ್ನು ತಿಂದುದುರ್ವಾಸಮುನಿಗಳು ಹಾಗೂ ಅವರ ಶಿಷ್ಯರ ಹೊಟ್ಟೆ ತುಂಬಿಸಿದ ದಿನ ಹಾಗೂ ದ್ರೌಪದಿಗೆ ಅಕ್ಷಯ ಪಾತ್ರೆಯನ್ನಾಗಿ ನೀಡಿದಂತಹ ದಿನ ಇದು. ಹಾಗಾಗಿ ಈ ದಿನ ಅನ್ನಪೂರ್ಣೇಶ್ವರಿಯ ವಿಶೇಷ ಕಟಾಕ್ಷ ಇರುತ್ತದೆ ಎಂದು ಹೇಳುತ್ತಾರೆ.
ಕಲಿಯುಗದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷದಲ್ಲಿ ನಾವೆಲ್ಲರೂ ಅರ್ಥಕ್ಕೆ ಅಂದರೆ ಹಣಕ್ಕೆ ಹೆಚ್ಚಿನ ಮಹತ್ವವನ್ನ ನೀಡುತ್ತಾ ಹೋಗುತ್ತೇವೆ. ಆದರೆ ಭಗವಂತನ ಸಾನಿಧ್ಯ ಪಡೆಯಬೇಕು ಅಂದಾಗ ನಾವು ಧರ್ಮ ಮಾರ್ಗದಲ್ಲಿ ನಡೆದಾಗ ಭಗವಂತನ ಸಾನಿಧ್ಯ ದೊರಕುತ್ತಾ ಹೋಗುತ್ತದೆ. ಹಾಗಾಗಿ ನಮ್ಮ ಜ್ಞಾನ ಅಕ್ಷಯವಾಗಬೇಕು, ನಾವು ಮಾಡುವಂತಹ ಧರ್ಮ ಕಾರ್ಯಗಳು ಅಕ್ಷಯವಾಗಬೇಕು, ಹಾಗೆ ಆದಾಗ ಭಗವಂತನ ವಿಶೇಷ ಕೃಪೆ ನಮ್ಮ ಮೇಲಿರುತ್ತದೆ. *ಹಾಗಾಗಿ ಬಂಗಾರವನ್ನು ತರುವುದಕ್ಕಿಂತ ಬಂಗಾರದಂತಹ ಜ್ಞಾನವನ್ನು ಪಡೆಯುವುದು ಅತಿ ಹೆಚ್ಚಿನ ಸಂಪತ್ತನ್ನ ನಮಗೆ ತಂದುಕೊಟ್ಟ ಹಾಗೆ. ಭಗವಂತನ ನಾಮಸ್ಮರಣೆ ಅಕ್ಷಯವಾಗಬೇಕು ಹಾಗೂ ನಮ್ಮ ದಾನ ಧರ್ಮಗಳು ಅಕ್ಷಯವಾಗಬೇಕು. ಇದರ ಕಡೆ ನಾವು ಅತಿ ಹೆಚ್ಚು ಮಹತ್ವ ನೀಡಿದಾಗ ಭಗವಂತನ ಕೃಪೆ ನಮ್ಮ ಮೇಲೆ ಸದಾ ಇರುತ್ತದೆ. ಹಾಗಾಗಿ ಅಂದು ಅವೆಲ್ಲವೂ ಅಕ್ಷಯವಾಗಿ ನಮ್ಮ ಬಾಳೆ ಬಂಗಾರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
ಹಾಗೂ…. 👉👉👉👉👉
ಅಕ್ಷಯ ತೃತೀಯದ ದಿನದಂದು ನಾವು ದೇವರ ಮುಂದೆ ಏನನ್ನು ಇಟ್ಟು ಪೂಜೆ ಮಾಡುತ್ತೇವೋ ಅದು ಬಹುಮಟ್ಟಿಗೆ ವೃದ್ಧಿಸುತ್ತದೆ ಎಂದು ನಂಬಲಾಗಿದೆ. ಇತ್ತೀಚಿಗೆ ಜನರು ಬೆಳ್ಳಿ, ಚಿನ್ನ ಇತ್ಯಾದಿಗಳನ್ನು ಇಟ್ಟುಕೊಂಡು ಪ್ರಾರ್ಥಿಸುತ್ತಾರೆ. ಇಂದಿನ ಅವಶ್ಯಕತೆ ನೀರು. ನೀರಿನ ಅಭಾವದಿಂದ ಹಲವರು ಪರದಾಡುತ್ತಿದ್ದಾರೆ. ನಾವು ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಇಟ್ಟುಕೊಳ್ಳೋಣ ಮತ್ತು ಉತ್ತಮ ಮಳೆಗಾಗಿ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸೋಣ, ನದಿಗಳು ಮತ್ತು ಕೆರೆಗಳು ತುಂಬುತ್ತವೆ, ಪರಿಣಾಮವಾಗಿ ಹಸಿರು ಮತ್ತು ಉತ್ತಮ ಕೃಷಿ ಎಲ್ಲೆಡೆ ಸಂತೋಷವನ್ನು ಹರಡುತ್ತದೆ. ಇದು ನಮ್ಮ ಪ್ರಾಮಾಣಿಕ ವಿನಂತಿ. ನೀರಿಲ್ಲದೆ ಮಾನವಕುಲವಿಲ್ಲ. 🙏
ವಿಶೇಷ ಸೂಚನೆ: ಈ ದಿನಗಳಲ್ಲಿ ಜನರು ದೀಪಾವಳಿ ಮತ್ತು ಅಕ್ಷಯ ತೃತೀಯದ ಸಂದರ್ಭದಲ್ಲಿ ತುಂಬಾ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ.. ಆದ್ದರಿಂದ ಖರೀದಿಯು ಹೆಚ್ಚುತ್ತಲೇ ಇತ್ತು.. ನಾವು ಅದನ್ನು ತಿನ್ನಲು ಸಾಧ್ಯವಿಲ್ಲ, ಕುಡಿಯಲು ಸಾಧ್ಯವಿಲ್ಲ. ಮನುಷ್ಯರು ಐಷಾರಾಮಿಗಿಂತ ಜ್ಞಾನ ಮತ್ತು ಮೂಲಭೂತ ಅಗತ್ಯಗಳತ್ತ ಗಮನಹರಿಸಬೇಕು.