ರೈತ ಮುಖಂಡರಿಂದ ಜಿಲ್ಲಾಧಿಕಾರಿಗಳಿಗೆ ಮನವಿ :

ಯಲಹಂಕ : ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ 5 ರು.ಗಳ ಸಹಾಯ ಧನವನ್ನು ಕಳೆದ 9 ತಿಂಗಳಿ ನಿಂದ ಸ್ಥಗಿತಗೊಳಿಸಿದ್ದು, ಕೂಡಲೇ ಸಹಾಯಧನ ಬಿಡುಗಡೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸ ಬೇಕೆಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿಯವರ ನೇತೃತ್ವದಲ್ಲಿ ಯಲಹಂಕ ಭಾಗದ ರೈತ ಮುಖಂಡರು ಬೆಂ.ನಗರ ಜಿಲ್ಲಾಧಿಕಾರಿ ದಯಾನಂದ್ ರವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಂತರ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಮಾತನಾಡಿ ‘ರಾಜ್ಯ ಸರ್ಕಾರ ಕಳೆದ 9 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಸಹಾಯಧನವನ್ನು ಸ್ಥಗಿತಗೊಳಿ ಸಿದ್ದು ಇದರಿಂದ ರಾಜ್ಯದ ಹಾಲು ಉತ್ಪಾದಕರು ಸಂಕಷ್ಟ ಎದುರಿಸುವಂತಾಗಿದೆ. ಜತೆಗೆ ರೈತ ಉತ್ಪಾದಕ ಸಂಸ್ಥೆಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದ ಸಹಾಯ ಧನ ಮತ್ತು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಮೂಲಕ ರೈತರಿಗೆ ನೀಡಬೇಕಾದ ಸಬ್ಸಿಡಿ ಹಣವನ್ನು ಸಹ ಬಿಡುಗಡೆ ಮಾಡಿಲ್ಲ, ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಕೃಷಿ ಚಟುವ ಟಿಕೆ ಕೈಗೊಳ್ಳಲು ನಿರಾಸಕ್ತಿ ಮೂಡುವಂತಾಗಿದೆ, ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಹಾಯಧನ ಮತ್ತು ಸಬ್ಸಿಡಿ ಹಣ ಬಿಡುಗಡೆ ಮಾಡುವ ಮೂಲಕ ರೈತರಿಗೆ ಸ್ಪಂಧಿಸ ಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ ಮಾತನಾಡಿ ‘ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರೈತರಿಗೆ ಹಲವು ಕೊಡುಗೆಗಳ ಭರವಸೆ ನೀಡಿದ್ದು, ಇದೇ ಸಂತಸದ ವೇಳೆಯಲ್ಲಿ ಹಾಲು ಉತ್ಪಾದಕರ ಸಹಾಯಧನ ಮತ್ತು ರೈತರ ಸಬ್ಸಿಡಿ ಹಣವನ್ನು ಸಹ ಬಿಡುಗಡೆ ಮಾಡುವ ಮೂಲಕ ರೈತರಿಗೆ ನೆರವಾಗಲೆಂಬುದು ನಮ್ಮ ಆಶಯ ವಾಗಿದೆ. ರೈತ ಮುಖಂಡರು ನೀಡಿದ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಸಾವಕಾಶದಿಂದ ಸ್ವೀಕರಿಸಿ, ಸಹಕರಿಸುವ ಭರವಸೆ ನೀಡಿರುವುದು ಸಂತೋಷ ಉಂಟು ಮಾಡಿದೆ ಎಂದರು.

ರೈತ ಮುಖಂಡರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಯಾನಂದ್ ರವರು ಮನವಿಯನ್ನು ಕೂಡಲೇ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಲುಪಿಸುವುದರ ಜತೆಗೆ ನಮ್ಮ ಪರವಾಗಿ ರೈತರಿಗೆ ಸ್ಪಂಧಿಸಲು ಮನವಿ ಮಾಡುವು ದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಮಂಜುನಾಥ್, ಮಾಲಾರೆಡ್ಡಿ, ಯಲಹಂಕ ಗ್ರಾ. ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಉಪಾಧ್ಯಕ್ಷ ಪಿ.ಕೆ.ರಾಜಣ್ಣ, ಬ್ಯಾಟರಾಯನಪುರ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಗೌಡ, ರೈತ ಮೋರ್ಚಾ ಮುಖಂಡರಾದ ಸಿಎಲ್ಎನ್ ಗೌಡ, ಲಕ್ಷ್ಮಿ, ಡೈರಿ ರಾಜಣ್ಣ, ರೇಣುಕಾಮೂರ್ತಿ, ಆದಿಭೈರವ, ಶರತ್, ಟಿ.ರಾಜು, ರಂಗನಾಥ್, ಮಧು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *