
ಕೋಲಾರ: ಒಕ್ಕಲಿಗ ಸಮಾಜ ಮೀಸಲಾತಿ ಎಂಬ ಪೆಡಂಭೂತಕ್ಕೆ ಸಿಕ್ಕಿ ನರಳುತ್ತಿದೆ. ಸಮುದಾಯದ ಯುವಕರು ಅರ್ಹತೆ ಇದ್ದರೂ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಕಿತ್ನಾಮಂಗಲ-ಕಾಡುಮತ್ತಿಕೆರೆ ಅರೇಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಕೆಂಪೇಗೌಡರ ಯುವಶಕ್ತಿ ವೇದಿಕೆಯಿಂದ ಕೆಂಪೇಗೌಡರ 515ನೇ ಜಯಂತೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮೀಸಲಾತಿಯ ಹೊಡೆತದಿಂದ ಸಮುದಾಯದ ಯುವಕರು ನರಳುತ್ತಿದ್ದಾರೆ. ಸಮಾಜ ಅಸಂಘಟಿತ ಸ್ಥಿತಿಯಲ್ಲಿದೆ. ಜನಸಂಖ್ಯಾವಾರು ಮೀಸಲಾತಿ ಹೆಚ್ಚಳದ ಹೋರಾಟ ತೀವ್ರಗೊಳ್ಳಬೇಕು. ಎಲ್ಲ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಸಿಗಬೇಕು. ರಾಜಕೀಯ ಹೊರೆತು ಪಡಿಸಿ ಎಲ್ಲರು ಒಂದಾಗಬೇಕು ಎಂದು ಕರೆ ನೀಡಿದರು.
ಮಕ್ಕಳ ಬೆನ್ನು ತಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ನಿಜಕ್ಕೂ ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿದೆಯೇ. ಉಚಿತವಾಗಿ ವೈದ್ಯಕೀಯ, ಎಂಜಿನಿಯರಿಂಗ್ ಸೀಟು, ಸುಲಭವಾಗಿ ವಿದ್ಯಾರ್ಥಿ ನಿಲಯಗಳು ಸಿಗುತ್ತಿವೆಯೇ. ಯಾವುದಕ್ಕಾಗಿ ಈ ಪುರಸ್ಕಾರ ಎಂದು ಪ್ರಶ್ನಿಸಿದರು.
ಸಮಾಜದ ಯುವಕರಿಗೆ ಉನ್ನತ ಶಿಕ್ಷಣ, ಉದ್ಯೋಗ ಸಿಗಬೇಕು. ಆಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ. ಇದುವರೆಗೆ ಸಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಾಯಕರು ಕಾಣಿಸುತ್ತಿಲ್ಲ. ಸಮಸ್ಯೆ ಕೇಳದವರು ಯಾವ ಪುರುಷಾರ್ಥಕ್ಕೆ ನಮ್ಮ ನಾಯಕನಾಗಬೇಕು ಎಂದೂ ಪ್ರಶ್ನೆ ಮಾಡಿದರು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯ ಸಮಾಜದ ಹಿತ ದೃಷ್ಟಿಯನ್ನು ಕಾಪಾಡುವ ಸಮುದಾಯವಾಗಿದ್ದು ಒಕ್ಕಲಿಗರು ಬರಿ ಒಕ್ಕಲುತನಕ್ಕೆ ಸಿಮೀತವಾಗದೆ, ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಒಕ್ಕಲಿಗರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಮಠ ಕೂಡ ಹಲವು ರೀತಿ ಸಹಕಾರ ನೀಡುತ್ತಿದ್ದು ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಮುದಾಯದ ವಿದ್ಯಾರ್ಥಿಗಳು ಬಳಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಮಾತನಾಡಿ, ಒಕ್ಕಲಿಗ ಸಮುದಾಯದ ಜನ ಮೊದಲೆಲ್ಲ ಉನ್ನತ ಹುದ್ದೆಗಳಲ್ಲಿ ಕಾಣಸಿಗುತ್ತಿರಲಿಲ್ಲ. ಈಗ ಸನ್ನಿವೇಶ ಬದಲಾಗಿದೆ. ಬದಲಾದ ಸಮಾಜದಲ್ಲಿ ಒಕ್ಕಲಿಗರು ಉನ್ನತ ಸ್ಥಾನ ಪಡೆಯುತ್ತಿದ್ದಂತೆ ಸಾಮರಸ್ಯ ಹದಗೆಡುತ್ತಿದೆ. ಇದಕ್ಕೆ ಬದಲಾಗಿ ಒಕ್ಕಲಿಗರಲ್ಲಿ ಒಗ್ಗಟ್ಟು ಮೂಡಬೇಕಿದೆ. ಅದಕ್ಕಾಗಿ ಪರೋಕ್ಷವಾಗಿ ಕಾಣುವ ಒಳ ಜಗಳಗಳು ಅಂತ್ಯವಾಗಬೇಕು. ಆಗ ಪರಸ್ಪರರಲ್ಲಿ ಪ್ರೀತಿ, ಸೋದರತ್ವ ಮೂಡುತ್ತದೆ. ಇತರಿಗೂ ಮಾದರಿಯಾಗಲು ಸಾಧ್ಯವಾಗುತ್ತದೆ ಎಂದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್, ನಿವೃತ್ತ ಡಿವೈಎಸ್ಪಿ ಶಿವಕುಮಾರ್, ಕೆಂಪೇಗೌಡರ ಯುವಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನರಸಿಂಹ ಗೌಡ, ಯುವ ಘಟಕ ರಾಜ್ಯಾಧ್ಯಕ್ಷ ಮಾರ್ಕೊಂಡಯ್ಯ ಗೌಡ, ಮಹಾ ಪೋಷಕರು ಸಿಎಂಆರ್ ಪದ್ಮ ಪ್ಯಾಲೇಸ್ ಮಾಲೀಕ ಆರ್.ನರೇಶ್ ಗೌಡ, ಪದಾಧಿಕಾರಿಗಳಾದ ವೆಂಕಟೇಶ್ ಗೌಡ, ಡೆಕ್ಕನ್ ಬಾಬು, ಕಿರಣ್ ಕುಮಾರ್, ಮಂಜುನಾಥ್ ಗೌಡ, ಸ್ವಾಮಿ ಗೌಡ, ಗೋಪಾಲಕೃಷ್ಣ, ನಾಗೇಶ್ ಗೌಡ, ವಿ.ಗೌತಮ್ ಮೂರ್ತಿ, ಬಿ.ವಿ.ಕೆ.ಆನಂದ್, ಮುನಿರಾಜ್ ಗೌಡ, ವಿಮಲಾ ಗೌಡ, ರಾಜೇಶ್ ಗೌಡ ಮತ್ತಿತರರು ಹಾಜರಿದ್ದರು.