




ಯಲಹಂಕ : ಕ್ಷೇತ್ರದ ಮಾರಸಂದ್ರ ಸಮೀಪವಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ಆವರಣದಲ್ಲಿರುವ ಗಣೇಶ ಮಂದಿರವನ್ನು ತೆರವುಗೊಳಿಸುವಂತೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ದೂರು ನೀಡಿದ ಹಿನ್ನೆಲೆಯಲ್ಲಿ, ದೇವಾಲಯ ತೆರವುಗೊಳಿಸಲು ತೆರವು ಸಲಕರಣೆಗಳ ಸಹಿತ ಬಂದ ಅಧಿಕಾರಿಗಳನ್ನು ಅಪಾರ್ಟ್ಮೆಂಟ್ ನಿವಾಸಿಗಳು, ಮಾರಸಂದ್ರ ಸುತ್ತಮುತ್ತಲಿನ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಡೆದು ದೇವಾಲಯ ಸಂರಕ್ಷಣೆಗೆ ಮುಂದಾದ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾದ ಘಟನೆ ಗುರುವಾರ ಮಾರಸಂದ್ರದ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ಆವರಣದಲ್ಲಿ ನಡೆಯಿತು.
ಆತಂಕಗೊಂಡ ಅಪಾರ್ಟ್ಮೆಂಟ್ ನಿವಾಸಿಗಳು, ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು ಕೂಡಲೇ ಅಪಾರ್ಟ್ಮೆಂಟ್ ಆವರಣದಲ್ಲಿನ ಗಣೇಶ ದೇವಾಲಯದ ಬಳಿ ಜಮಾವಣೆಗೊಂಡು ಪರಸ್ಪರ ಚರ್ಚೆ ನಡೆಸಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿ, ಅಪಾರ್ಟ್ಮೆಂಟ್ ನಿವಾಸಿಗಳು, ಬಿಜೆಪಿ ಮುಖಂಡರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಭೇಟಿ ಮಾಡಿದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿ ಮೀನಾಕ್ಷಿ ಆತಂಕ ಪಡುವ ಅಗತ್ಯವಿಲ್ಲ, ದೇವಾಲಯ ತೆರವು ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಭರವಸೆ ನೀಡಿದ ನಂತರ ವಾತಾವರಣ ತಿಳಿಯಾಯಿತು.
ನಂತರ ನಡೆದ ಸಭೆಯನ್ನು ಉದ್ದೇಶಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಮಾತನಾಡಿ ‘ಅಪಾರ್ಟ್ಮೆಂಟ್ ಆವರಣದಲ್ಲಿರುವ ಗಣೇಶ ಮಂದಿರವನ್ನು ತೆರವುಗೊಳಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದರಿಂದ ಆತಂಕಗೊಂಡ ನಾಗರೀಕರು ಇಲ್ಲಿಗೆ ದೌಡಾಯಿಸಿ ಬಂದಿದ್ದಾರೆ.
ಆದರೆ ಇಲ್ಲಿನ ಗಣೇಶ ಮಂದಿರ ಹಾಗೂ ಮುನೇಶ್ವರ ದೇವಾಲಯಗಳಿಗೆ ಹಲವು ದಶಕಗಳ ಹಿನ್ನೆಲೆಯಿದ್ದು, ಇಲ್ಲಿರುವ ಬನ್ನಿಮರ, ಅರಳೀಮರಕ್ಕೆ ಸುಮಾರು ನೂರೈವತ್ತು ವರ್ಷಗಳ ಇತಿಹಾಸವಿದ್ದು, ಸುತ್ತಮುತ್ತಲಿನ ಗ್ರಾಮಗಳ ನಾಗರೀಕರು ಜಾತ್ರೆ, ಉತ್ಸವ ಮುಂತಾದ ವಿಶೇಷ ಸಂದರ್ಭ ಗಳಲ್ಲಿ ಇಲ್ಲಿರುವ ತುಳಸೀಕಟ್ಟೆ, ಅಶ್ವತ್ಥ ವೃಕ್ಷ, ಗಣೇಶ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಇಲ್ಲಿ ಅಪಾರ್ಟ್ಮೆಂಟ್ ತಲೆಯೆತ್ತಿದೆ, ಆದರೂ ಸಹ ಇಲ್ಲಿನ ಸುತ್ತಮುತ್ತ ಲಿನ ನಾಗರೀಕರು ತುಳಸೀಕಟ್ಟೆ, ಅಶ್ವತ್ಥ ವೃಕ್ಷ, ಗಣೇಶ ಮಂದಿರ, ಮುನೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳು ಸಹ ತುಳಸೀಕಟ್ಟೆ, ಅಶ್ವತ್ಥ ವೃಕ್ಷ, ಗಣೇಶ ಮಂದಿರ, ಮುನೇಶ್ವರ ದೇವಾಲಯ, ಬನ್ನಿಮರ, ಅರಳೀಮರ ಗಳಿಗೆ ಭೇಟಿ ನೀಡಿ ಪ್ರಾರ್ಥನೆ, ಪೂಜೆ ಸಲ್ಲಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಆದರೆ ಇತ್ತೀಚೆಗೆ ವ್ಯಕ್ತಿಯೋರ್ವ ಇಲ್ಲಿ ಕೋಮು ಸಂಘರ್ಷದ ಲೇಪನ ಹಚ್ಚುವ ಕೆಲಸ ಮಾಡುವ ಯತ್ನ ಮಾಡುತ್ತಿದ್ದು, ಇಂದಿನ ಈ ಬಿಗುವಿನ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಅಪಾರ್ಟ್ಮೆಂಟ್ ನ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ, ಗಣೇಶ ಮಂದಿರವನ್ನು ತೆರವುಗೊಳಿಸಲು ಬಿಡುವುದಿಲ್ಲ. ಈ ಕುರಿತು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಭಯ ನೀಡಿದ್ದಾರೆ. ಇಲ್ಲಿನ ಗಣೇಶ ಮಂದಿರಕ್ಕೆ ಇನ್ನೂ ಹೆಚ್ಚಿನ ಕಾಯಕಲ್ಪ ನೀಡುವ ಭರವಸೆ ನೀಡಿದ್ದಾರೆ, ನಿವಾಸಿಗಳಾಗಲಿ, ಸುತ್ತಮುತ್ತಲಿನ ನಾಗರೀಕರಾಗಲಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಹಾಲಿ ಉಪಾಧ್ಯಕ್ಷ ಕೆ.ಎಂ.ಅರಸೇಗೌಡ, ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ವಿದ್ಯಾಮಿಶ್ರಾ, ಪಿಡಿಓ ತಿಮ್ಮಯ್ಯ, ಬಿಜೆಪಿ ಮುಖಂಡರಾದ ಅಶೋಕ್, ಈಶ್ವರಾಚಾರ್, ಮುನಿದಾಸಪ್ಪ, ಪರಶುರಾಮ್, ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಮಾಜಿ ಅಧ್ಯಕ್ಷ ಸಂಜಯ್ ಸೇರಿದಂತೆ ನಿವಾಸಿಗಳ ಸಂಘದ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದೇವಾಲಯದ ಭಕ್ತಾದಿಗಳಿದ್ದರು.

ಆರ್ ಹನುಮಂತು
9845085793
7349337989
9035282296