
ಕಾಯುವೆನು, ಕಾಯುವೆನು, ಕಾಯುತ್ತಲೇ ಇರುವೆನು
ಸಂಜೆ ನಾಲ್ಕರ ಸಮಯ; ಕಿಟಕಿಯಾಚೆ ಕಣ್ಣರಳಿಸುತ್ತೇನೆ
ಮರಳ ಮೈಯಲಿ ಮಲಗಿದ ಖರ್ಜೂರ ಗಿಡಗಳ ನೀಳ ಹಗುರ ನೆರಳ ಸರ್ಪಗಳೆಡೆ
ಶಬನಾರ ಅಂತರ್ಜಾಲ ಕೊಂಡಿಯೇಕೋ ಇನ್ನೂ ಮೂಡಿಲ್ಲವಿಂದು ನನ್ನ ಜಂಗಮವಾಣಿಯ ಮನಃಪಟಲದಲಿ
ಮಧ್ಯಾಹ್ನ ಮೂರರ ವೇಳೆಗೆ ತಪ್ಪದೆ ತರಗತಿಗೆ ಹಾಜರಾಗುವ ಮೊದಲ ಬೆಂಚಿನ ಹುಡುಗಿಯಂತೆ
ಸಂದೇಶದ ಮೋಟು ಜಡೆ ಸುಳಿಯಬೇಕಿತ್ತು ಮೊಬೈಲ ಬೆಳ್ಳಿಪರದೆಯನಲಂಕರಿಸಲು
ಕೊಂಡಿ ಕಳುಹಿಸುವುದ ಮರೆತರೇನೋ ಎಂದು ಕಸಿವಿಸಿ ಪಡುವ ಪ್ರತಿ ನಿಮಿಷವೂ ಏರುತಿದ್ದೆ ಚಡಪಡಿಕೆಯ ಒಂದೊಂದು ಅಂಕುಡೊಂಕ ತಿರುವ ಮೆಟ್ಟಿಲು
ಸಂಜೆ ಐದಾದರೂ ಸಂದೇಶವೆಂಬ ಎಳೆಬಾಲೆಯ ಸುಳಿವಿಲ್ಲ; ಪ್ರವಚನದ ಮುತ್ತು ಹನಿಯುವ ಹೊತ್ತು ಜ್ಞಾನ ದಾಸೋಹಕೆ ತೆರೆದಿಡಿದ ನನ್ನ ಜೋಳಿಗೆ ಖಾಲಿ; ಮನಸಲಿ ವಿಚಿತ್ರ ಖಯಾಲಿ
ನಿನ್ನೆ ಬಂದ ಕೊಂಡಿಯ ಜಾಡ ಹಿಡಿದು ಬಯಲನು ಸೇರುವ ತವಕ; ಶೂನ್ಯ ಸಂಪಾದನೆಯ ಹಾದಿಯಲಿ ತೀರದ ತವಕ
ಒಂದೊಮ್ಮೆ ಪ್ರಿಯ ಕನಕನಿಗೆ ಗರ್ಭಗುಡಿಯ ಗೋಡೆಯೊಡೆದು ದರ್ಶನವಿತ್ತಿದ್ದನಂತೆ ಗೋಪಿಲೋಲ
ನಾನೆಷ್ಟು ತಿಣುಕಿದರೂ ತೆರೆದುಕೊಳದೆ ಮುನಿದಿದೆ ಮೊಂಡು ಹುಡುಗ ಅಂತರ್ಜಾಲ ಬಾಲ
ಹತಾಶೆಯಿಂದ ಬಿಳಿ ಬಣ್ಣದ ಗೋಡೆಯ ಮೇಲಿನ ಪಂಚಾಂಗ ಪ್ರವರದತ್ತ ಕಣ್ಣಾಯಿಸುತ್ತೇನೆ ಇವತ್ತು ಆಗಸ್ಟ್ ಮೂವತ್ತಲ್ಲ ಎನ್ನುವ ಸತ್ಯವ ಸಾಕ್ಷಾತ್ಕರಿಸಿಕೊಳಲು
ಮೂವತ್ತು ದಿನಗಳ ಶರಣಯಾನ ಮುಗಿದೇ ಹೋಯಿತಲ್ಲ ಎನುವ ದಿಟವನೊಪ್ಪದು ಮಾಗದ ಮನದ ದಿಗಿಲು
ದೇವರಿಲ್ಲದ ಗುಡಿಯ ಗೋಡೆಗಳ ತಡಕೆ ಅವಿರ್ಭವಿಸೀತೇ ದರ್ಶನಕೊಂದು ಕಿಂಡಿ?
ದೊರಕೀತೇ ಜ್ಞಾನಜಗುಳಿಯೊಳು ನಿರಾಕಾಯ ಪ್ರವೇಶ ಒತ್ತೆ ಇಲ್ಲದ ವೆಬಿನಾರ ಕೊಂಡಿ?
ಕಾಯಬೇಕು ಮತ್ತೊಂದು ವರ್ಷಕಾಲ ಇಣುಕಲು ಜಗದಗಲ ಮಂಟಪದ ಜ್ಞಾನಕಿಂಡಿ
ಮಾಸಕೊಮ್ಮೆ ಮೂಡಿದರೂ ಬಾನಲಿ ಬೆಳದಿಂಗಳ ಚೆಲುವು ಒಂದು ತಿಂಗಳ ಕಾಲ ದೂಡಬಲ್ಲೇನೇ ಗಳಿಸದಿರೆ ಶರಣರೊಲವು?
ಸಮಸಮಾಜದ ಕಲ್ಪನೆಗೆ ಸಾಸಿರ ವರುಷ ಕಾಲ ಅವುಡುಚ್ಚಿ ಕಾಯುತ್ತಿಲ್ಲವೇ ಶರಣಗಣ?
ಶತಮಾನಗಳ ಕಾಲದ ಕನಸಿನ ಭಾರಕೆ ಬಳುಕದ ಪಳಕಗಳ ಛಲ ಹೊತ್ತ ಕುಲದ ಕುಡಿ ನಾನು
ಕಾಯುವೆನು, ಕಾಯುವೆನು, ಕಾಯುತ್ತಲೇ ಇರುವೆನು ಮತ್ತೊಂದು ಮಗದೊಂದು ಶರಣಮಾಸದ ಚಿಂತನೆಗಳ ಸೋನೆಮಳೆಯಬ್ಬರಕೆ; ಅಕ್ಕನ ದಿವ್ಯ ಚೇತನದ ಮುಖತಃ ದರುಶನಕೆ
ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್