ಕೆ.ಆರ್.ಪುರ:

ಒಂದು ಗ್ರಂಥಾಲಯ ಕಟ್ಟಿದರೆ ಲಕ್ಷ ವಿದ್ವಾಂಸರು ಹುಟ್ಟುತ್ತಾರೆ ಎಂಬ ನಾನ್ನುಡಿ ಯಂತೆ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಪುಸ್ತಕಗಳು ಸಹಕಾರಿಯಾಗಲಿವೆ ಎಂದು ಕೃಷ್ಣಯ್ಯಶೆಟ್ಟಿ ಆಂಡ್ ಸನ್ಸ್ ಟ್ರಸ್ಟಿನ ಫೌಂಡೇಷನ್ ಮುಖ್ಯಸ್ಥರಾದ ತ್ರಿವೇಣಿ ವಿನೋದ್ ಅವರು ತಿಳಿಸಿದರು.

ಕ್ಷೇತ್ರದ ರಾಮಮೂರ್ತಿನಗರ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಕೃಷ್ಣಯ್ಯಶೆಟ್ಟಿ ಆಂಡ್ ಸನ್ಸ್ ಟ್ರಸ್ಟಿನ ಫೌಂಡೇಷನ್ ವತಿಯಿಂದ ನೂತನವಾಗಿ ಆರಂಭಿಸಿರುವ ಗ್ರಂಥಾಲಯವನ್ನು ಉದ್ಘಾಟಿಸಿ  ಮಾತನಾಡಿದರು.

ಗ್ರಂಥಾಲಯ ಒಂದು ಜ್ಞಾನ ಭಂಡಾರ, ಶಾಲಾ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಲು ತಮ್ಮ ಗುರಿಯನ್ನು ಸಾಧಿಸಲು ಲೈಬ್ರರಿ ಪ್ರಮಖ ಪಾತ್ರವಹಿಸಲಿವೆ ಎಂದು ತಿಳಿಸಿದರು.

ನಮ್ಮ ಫೌಂಡೇಷನ್ ವತಿಯಿಂದ ಹಲವಾರು ಸರ್ಕಾರಿ ಶಾಲೆಗಳಲ್ಲಿ ಈಗಾಗಲೆ ಗ್ರಂಥಾಲಯ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಲು  ಫೌಂಡೇಷನ್ ಸಿದ್ದವಾಗಿದೆ ಎಂದು ತಿಳಿಸಿದರು.

ಎಸ್.ಡಿ.ಎಂಸಿ.ಮುಖ್ಯಸ್ಥರಾದ ಇಟ್ಟಾಚ್ಚಿ ಮಂಜುನಾಥ ಅವರು ಮಾತನಾಡಿ ಸ್ಥಳೀಯ ಶಾಸಕರಾದ ಬೈರತಿ ಬಸವರಾಜ್ ಶಾಲೆಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಡಿಸುವ ಮೂಲಕ ಈ ಶಾಲೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶಾಸಕರು,  ಎನ್.ಜಿ.ಒ ಗಳು ಹಾಗು ಧಾನಿಗಳ ನೆರವಿನಿಂದ ಇಂದು ಅಂಬೇಡ್ಕರ್ ನಗರ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಪರಿವರ್ತನೆಯಾಗಿದೆ. ನೂತನವಾಗಿ ನಿರ್ಮಾಣ ಮಾಡಿರುವ ಗ್ರಂಥಾಲಯ ಮಕ್ಕಳ ಜ್ಞಾನ ಹೆಚ್ಚಿಸಲು ಸಹಕಾರವಾಗಲಿದ್ದು ಮತ್ತೆ ನಮ್ಮ ಶಾಲೆಗೆ ತಮ್ಮ ಫೌಂಡೇಷನ್ ವತಿಯಿಂದ ಹೆಚ್ಚಿನ ಸಹಕಾರ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷ್ಣಯ್ಯಶೆಟ್ಟಿ ಆಂಡ್ ಸನ್ಸ್ ಟ್ರಸ್ಟಿ ಫೌಂಡೇಷನ್ ನ ಚೈತನ್ಯ, ಹರೀಶ್ ರೆಡ್ಡಿ, 
ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿ, ಸಿ ಆರ್ ಪಿ ವಿಜಯಲಕ್ಷ್ಮಿ ಸೇರಿದಂತೆ 25 ಶಾಲೆಯ ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟಕ್ಕೆ ಆಗಮಿಸಿದ ಎಲ್ಲಾ ಸಹಶಿಕ್ಷಕರು ಹಾಜರಿದ್ದರು.

Leave a Reply

Your email address will not be published. Required fields are marked *