ಯಲಹಂಕ : ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದ ಕಾಲಘಟ್ಟವಾಗಿದ್ದು, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ, ನಿಶ್ಚಿತ ಗುರಿ ಇಟ್ಟುಕೊಂಡು ಶೈಕ್ಷಣಿಕ ಸಾಧನೆಯ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಯಲಹಂಕ ಶಾಸಕ, ಟಿಟಿಡಿ ಆಡಳಿತ ಮಂಡಳಿ ನಿರ್ದೇಶಕ ಎಸ್ ಆರ್ ವಿಶ್ವನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜಾನುಕುಂಟೆ ಗ್ರಾಮದಲ್ಲಿ 80 ಲಕ್ಷ ರು.ಅಂದಾಜು ವೆಚ್ಚದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಈಜುಕೊಳ, ಸ್ತ್ರೀ ಶಕ್ತಿ ಭವನ ಮತ್ತು ವಾಕಿಂಗ್ ಟ್ರ್ಯಾಕ್ ಉದ್ಘಾಟಿಸಿದ ನಂತರ ಅವರು ಮಾತನಾಡಿದರು. ಯಲಹಂಕ ಕ್ಷೇತ್ರದಲ್ಲಿ ಈಜುಕೊಳ ಇರುವ ಸರ್ಕಾರಿ ಶಾಲೆ ಇದೇ ಪ್ರಥಮ ಎಂಬ ಹೆಗ್ಗಳಿಕೆಗೆ ರಾಜಾನುಕುಂಟೆ ಸರ್ಕಾರಿ ಶಾಲೆ ಪಾತ್ರವಾಗಿದೆ. ಮಕ್ಕಳಿಗೆ ಈಜು ಕಲಿಕೆಯ ಅಗತ್ಯತೆ ಮತ್ತು ವ್ಯಾಯಾಮದ ಅಗತ್ಯತೆಯನ್ನು ಮನಗಂಡು ಈ ಈಜುಕೊಳ ನಿರ್ಮಿಸಲಾಗಿದ್ದು, ಈಜು ಕಲಿಕೆಗಾಗಿ ಒಬ್ಬ ನುರಿತ ಈಜು ಪಟುವನ್ನು ನೇಮಕ ಮಾಡಿ ಮಕ್ಕಳಿಗೆ ಈಜು ಕಲಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಈಜುಕೊಳದ ನಿರ್ವಹಣೆಗಾಗಿ ಇಂತಿಷ್ಟು ದರ ನಿಗದಿ ಮಾಡುವ ಚಿಂತನೆ ಇದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಬಾಲ್ಯದಲ್ಲಿ ನಾವು ಗೆಳೆಯರೊಂದಿಗೆ ಕೆರೆ, ಕುಂಟೆ, ಬಾವಿಗಳಲ್ಲಿ ಈಜಾಡುತ್ತಿದ್ದೆವು, ಶಾಲಾ ರಜಾ ದಿನಗಳಲ್ಲಿ ಈಜುವುದು, ಹೊಲಗದ್ದೆಗಳು ಮತ್ತು ತೋಟಗಳಲ್ಲಿ ತಿರುಗಾಡಿ ವಿವಿಧ ರೀತಿಯ ಹಣ್ಣುಗಳು, ಜೇನು ಕಿತ್ತು ತಿನ್ನುವುದು ನಮ್ಮ ಹವ್ಯಾಸವಾಗಿತ್ತು, ಹಿಂದಿನ ಆ ದಿನಗಳ ನೆನಪೇ ಮಧುರ, ಅಂತಹ ಕಾಲ ಮರುಕಳಿಸಲಾರದು ಎಂದು ತಮ್ಮ ಬಾಲ್ಯದ ಸವಿನೆನಪುಗಳನ್ನು ಸ್ಮರಿಸಿಕೊಂಡರು.

ಹಿಂದಿನ ಜನರ ಆಹಾರ ಪದ್ದತಿ ಚೆನ್ನಾಗಿತ್ತು, ಆರೋಗ್ಯವೂ ಸಹ ಸದೃಢವಾಗಿತ್ತು, ಆದರೆ ಈಗಿನ ದಿನಗಳಲ್ಲಿ ಮಕ್ಕಳಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣುತ್ತವೆ, ಇದಕ್ಕೆ ಆಹಾರ ಪದ್ದತಿ ಮತ್ತು ಹವ್ಯಾಸಗಳಲ್ಲಿನ ವ್ಯತಿರಿಕ್ತತೆಯೇ ಮೂಲಕಾರಣ ಎಂದ ಅವರು ಶೈಕ್ಷಣಿಕ ಹಂತ ಬದುಕಿನ ಅತ್ಯಂತ ಪ್ರಮುಖವಾದ ಕಾಲ ಘಟ್ಟವಾಗಿದ್ದು, ಈ ಸಮಯದಲ್ಲಿ ಮಕ್ಕಳು ಯಾವುದೇ ದುಶ್ಚಟ, ದುರಭ್ಯಾಸಗಳಿಗೆ ದಾಸರಾಗದೆ, ನಿಶ್ಚಿತ ಗುರಿ ಇಟ್ಟುಕೊಂಡು ಶೈಕ್ಷಣಿಕ ಸಾಧನೆಯ ಕಡೆಗೆ ಹೆಚ್ಚಿನ ಗಮನ ಹರಿಸುವ ಮೂಲಕ ದೇಶದ ಸತ್ಪ್ರಜೆಗಳಾಗಿ ಮಕ್ಕಳು ಹೊರಹೊಮ್ಮಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ ಮಾತನಾಡಿ ‘ರಾಜಾನುಕುಂಟೆ ಗ್ರಾಮಕ್ಕೆ ಸರ್ಕಾರಿ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ತಂದು ಕೊಡುವ ಮೂಲಕ ಗ್ರಾಮದ ಸರ್ವಾಂಗೀಣ ಪ್ರಗತಿಗೆ ಇಂಬು ನೀಡಿರುವ ಶಾಸಕರ ಕಾರ್ಯಸಾಧನೆಗೆ ಗ್ರಾಮಸ್ಥರ ಪರವಾಗಿ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಶಾಸಕರ ಪ್ರಯತ್ನದ ಫಲವಾಗಿ ರಾಜಾನುಕುಂಟೆ ಗ್ರಾಮದಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಪಾಲಿಟೆಕ್ನಿಕ್ ಕಾಲೇಜು ರಾಜಾನುಕುಂಟೆ ಗ್ರಾಮದಲ್ಲಿ ಆರಂಭವಾಗಲಿದೆ. ಶಾಲಾ ಮಕ್ಕಳ ಈಜು ಕಲಿಕೆಗಾಗಿ ಕ್ಷೇತ್ರದಲ್ಲಿ ಪ್ರಥಮವಾಗಿ ಈಜುಕೊಳ ನಿರ್ಮಿಸಿ ಕೊಟ್ಟಿದ್ದಾರೆ, ಶಾಸಕರ ಪ್ರಗತಿಪರ ಕಾಳಜಿ, ವಿದ್ಯಾರ್ಥಿಗಳ ಮೇಲಿನ ಅವರ ಅನನ್ಯ ಕಾಳಜಿಗೆ ಸದಾ ಚಿರ ಋಣಿಯಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಾನುಕುಂಟೆ ಗ್ರಾ.ಪಂ‌.ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ ವಹಿಸಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಚೊಕ್ಕನಹಳ್ಳಿ ವೆಂಕಟೇಶ್, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಗ್ರಾ.ಪಂ‌.ಮಾಜಿ ಅಧ್ಯಕ್ಷ ವೀರಣ್ಣ ರಿಗ್ಲೆ, ಉಪಾಧ್ಯಕ್ಷೆ ಹೇಮಲತಾ, ಗ್ರಾ.ಪಂ.ಸದಸ್ಯರಾದ ಸಂತೋಷ್ ಕುಮಾರ್, ವೆಂಕಟೇಶ್, ಅಂಬಿಕಾ, ಬಾಲಾಜಿ, ಆರ್ ಡಿ ರಾಜಣ್ಣ, ಪ್ರಕಾಶ್, ಸುಜಾತಮ್ಮ, ಭವಾನಿ, ಮಮತಾ, ಪಿಡಿಓ ನಾಗರಾಜ್ ನಾಯ್ಕ್, ಶಾಲೆಯ ಮುಖ್ಯೋಪಾಧ್ಯಾಯ ಬಿ.ಜಿ.ಕಾಂತರಾಹು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *