ಬೃಹತ್ ಮೆರವಣಿಯ ಮೂಲಕ 514ನೇ ಕೆಂಪೇಗೌಡ ಜಯಂತಿ ಆಚರಣೆ :

ಯಲಹಂಕ : ಬೆಂಗಳುರು ನಗರದ ಜನತೆಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಸ್ಮರಣೀಯ, ವಿವಿಧ ಸಮುದಾಯಗಳ ಜನತೆಯ ಜೀವನೋಪಾಯಕ್ಕಾಗಿ 500 ವರ್ಷಗಳ ಹಿಂದೆಯೇ ವ್ಯವಸ್ಥಿತ ನಗರವನ್ನು ನಿರ್ಮಿಸಿರುವ ಕೆಂಪೇಗೌಡರ  ದೂರದೃಷ್ಟಿ ನಿಜಕ್ಕೂ ಪ್ರಶಂಸಾರ್ಹವಾದುದು ಎಂದು ಟಿಟಿಡಿ ಆಡಳಿತ ಮಂಡಳಿಯ ನಿರ್ದೇಶಕ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯ ಪಟ್ಟರು.

ನಾಡಪ್ರಭು ಕಂಪೇಗೌಡರ 514  ನೇ ಜಯಂತಿ ಪ್ರಯುಕ್ತ ಮಂಗಳವಾರ ಯಲಹಂಕದ ಸಂತೆ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಜಗತ್ತಿನೆಲ್ಲೆಡೆ ಮಾಹಿತಿ ತಂತ್ರಜ್ಞಾನ ನಗರಿ ಎಂದೇ ಪ್ರಸಿದ್ಧಿಯಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಭವಿಷ್ಯದ ಚಿಂತನೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 500. ವರ್ಷಗಳ ಹಿಂದೆಯೇ ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ  ನಿರ್ಮಿಸಿರುವ ಕೆಂಪೇಗೌಡರ ದೂರದೃಷ್ಟಿ ಪ್ರಶಂಸೆಗೆ ಪಾತ್ರವಾಗುವಂತಹದ್ದು. ನಗರದಲ್ಲಿ ಎಲ್ಲಾ ಸಮುದಾಯದ ಜನರಿಗೆ ಅನುಕೂಲ ಮಾಡೊಕೊಡಬೇಕೆಂಬ  ಹಿತದೃಷ್ಟಿಯಿಂದ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ಅವರ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟಿರುವ ಅವರ ಹೃದಯ ವೈಶ್ಯಾಲ್ಯತೆ ಅನುಕರಣೀಯ ಎಂದರು. 

ಕೆಂಪೇಗೌಡ ಜಯಂತಿ ಪ್ರಯುಕ್ತ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಸಹಸ್ರಾರು ಜನ ಯಲಹಂಕ ಹಳೇನಗರದಿಂದ ಮಿನಿ ವಿಧಾನಸೌಧದ ವರೆಗೂ ಬೃಹತ್ ಮೆರವಣಿಗೆಯಲ್ಲಿ ಸಾಗಿ, ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಬಿಜೆಪಿ ಮುಖಂಡರಾದ ಹೆಚ್.ಬಿ.ಹನುಮಯ್ಯ, ಮು.ಕೃಷ್ಣಮೂರ್ತಿ, ಸತೀಶ್ ಕಡತನಮಲೆ, ಚೊಕ್ಕನಹಳ್ಳಿ ವೆಂಕಟೇಶ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *