



ಪಬ್ಲಿಕ್ ಪವರ್:
ಬಂಗಾರಪೇಟೆ: ತಾಲ್ಲೂಕು ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಅಕ್ರಮ ಹಣ ವರ್ಗಾವಣೆ ಮಾಡಿಕೊಂಡು ರೈತರಿಗೆ ಅನ್ಯಾಯವೆಸಗಿದ್ದಾರೆಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪಟ್ಟಾಭಿಷೇಕೋದ್ಯಾನವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಹಾಲು ಒಕ್ಕೂಟ, ಶಿಭಿರ ಕಛೇರಿ ಮುಂಭಾಗ ನ.೧೯ರಂದು ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಭಾಕರ್ ಅವರು ಅಕ್ರಮ ಲಕ್ಷಾಂತರ ರೂಗಳ ಅವ್ಯವಹಾರ ಮಾಡಿದ್ದಾರೆಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು, ಈ ಪ್ರತಿಭಟನೆಗೆ ಮತ್ತೊಂದು ತಿರುವು ಪಡೆದುಕೊಂಡು ಕಾರ್ಯದರ್ಶಿ ಪ್ರಭಾಕರ್ ಪತ್ರಿಕಾ ಹೇಳಿಕೆ ನೀಡಿ, ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದು ತಿಳಿಸಿದ್ದಾರೆ, ಆದರೆ ಅವ್ಯವಹಾರ ನಡೆದಿರುವುದು ಸಾಭೀತಾಗಿರುವುದರಿಂದ ಇಂದು ಸಂಘದ ೯ಮಂದಿ ನಿರ್ದೇಶಕರು ಒಂದೇ ಭಾರಿಗೆ ರಾಜೀನಾಮೆ ನೀಡಿ, ಕಾನೂನು ಹೋರಾಟ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಈ ಬಗ್ಗೆ ಜಂಟಿ ನಿರ್ದೇಶಕರು ಕೋಲಾರ ಹಾಗೂ ಶಿಭಿರ ಕಛೇರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗಲಿಲ್ಲ ಎಂದು ಆರೋಪಿಸಿದರು.
ನಿರ್ದೇಶಕ ಜಗದೀಶ್ ಮಾತನಾಡಿ, ಬರೋಬ್ಬರಿ ಒಂದು ವರ್ಷದಲ್ಲೇ ಕಾರ್ಯದರ್ಶಿ ಪ್ರಭಾಕರ್ ಬ್ಯಾಂಕ್ ಖಾತೆಗೆ ೯೦ಸಾವಿರ, ಹಾಗೂ ಮಂಜುಳ ಖಾತೆಗೆ ೫೦ಸಾವಿರ, ೩ಭಾರಿ ಹಣವನ್ನು ಪದ್ಮ.ಎನ್ ರವರ ಖಾತೆಗೆ ೧.೯೮,೦೦೦/- ವರ್ಗಾಹಿಸಿದ್ದು, ಒಟ್ಟು ೩,೩೮,೦೦೦/- ರೂಗಳು ಅಕ್ರಮವಾಗಿ ಪಡೆದುಕೊಂಡಿರುತ್ತಾರೆ. ಆದರೆ ಇವರು ಕಾರ್ಯದರ್ಶಿಯಾಗಿ ನೇಮಕವಾಗಿದ್ದಾಗಿನಿಂದ ಸುಮಾರು ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿರುತ್ತದೆಂಬ ಸಂಶಯ ಮೂಡಿರುತ್ತದೆ. ಸಂಘದಲ್ಲಿ ಹಾಲು ಶೇಖರಣೆಯಲ್ಲಿ ವ್ಯತ್ಯಾಸ ಕಂಡುಬAದಿದೆ, ಹಾಗೂ ಲೆಕ್ಕ ತಪಾಸಣೆಯಲ್ಲಿ ನ್ಯೂನತೆಗಳು, ಪಶು ಆಹಾರದಲ್ಲಿ ದುರುಪಯೋಗ, ಬೋನಸ್ ನೀಡದೇ ಉತ್ಪಾದಕರಿಗೆ ಅನ್ಯಾಯ ಮಾಡಲಾಗಿದೆ, ಹಾಲು ಸರಬರಾಜುಗೆ ತಕ್ಕಂತೆ ಧರ ನೀಡದೆ ವಂಚಿಸಿದ್ದಾರೆ, ಹಾಲು ಉತ್ಪಾದಕರ ಖಾತೆಗಳಿಗೆ ತಪ್ಪು ಲೆಕ್ಕಚಾರ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಹಾಗೂ ಸಂಘದ ಉಳಿತಾಯ ಖಾತೆ ಹಣ ದೋಖಮಾಡಿಕೊಂಡಿದ್ದಾರೆ. ಹಾಲು ಉತ್ಪಾದಕರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು. ಕಾರ್ಯದರ್ಶಿ ಪ್ರಭಾಕರ್ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ಹಾಲು ಉತ್ಪಾದಕರಿಗೆ ಹಾಗೂ ನಿರ್ದೇಶಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜಪ್ಪ, ಚಂದ್ರು, ರತ್ನಮ್ಮ, ಶಾಂತಮ್ಮ, ಪಾರ್ವತಮ್ಮ, ಮಾಲಾ, ನಾಗರಾಜರೆಡ್ಡಿ, ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ, ಮೊಹಮ್ಮದ್ ಪಾಷ, ವೆಂಕಟೇಶ್, ಪ್ರಕಾಶ್, ಮುನಿರಾಜು, ರಾಜಶೇಖರ್ರೆಡ್ಡಿ, ಬಾಬು, ಮಂಜುನಾಥ್, ನಾರಾಯಣಸ್ವಾಮಿ, ವಾಸಿಂ, ತಾಲ್ಲೂಕು ಉಪಾಧ್ಯಕ್ಷ ಹುಲಿಬೆಲೆ ದೇವರಾಜು ಹಾಗೂ ಇನ್ನಿತರರಿದ್ದರು.