ಸಿಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಂಟ್ರಾನಿಕಾ ಅಂತರ್ ಶಾಲಾ ಸಾಂಸ್ಕೃತಿಕ ಸ್ಫರ್ಧೆಗಳ ಉದ್ಘಾಟನೆ

ನಗರದ ಚೊಕ್ಕನಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಸಿಂಟ್ರಾನಿಕ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ನವೆಂಬರ್ 22ರಂದು ನಡೆಯಿತು.
ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ತಾರೆ ಶ್ರೀಮತಿ ಅಂಜು ಅರವಿಂದ್ ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತ್ತಾ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬಾಲ್ಯವು ಸೂಕ್ತ ಕಾಲವಾಗಿದೆ. ಹಾಗಾಗಿ ಮಕ್ಕಳು ಸಾಮಾಜಿಕ ಜಾಲ ತಾಣಗಳಲ್ಲಿ ಮುಳುಗದೆ ಬಾಲ್ಯದಲ್ಲೇ ಉತ್ತಮ ಬದುಕಿಗೆ ಭದ್ರ ಬುನಾದಿ ನಿರ್ಮಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಬಾಲ್ಯದಲ್ಲಿ ತಾವು ಓದಿಗಾಗಿ ಕಷ್ಟಪಟ್ಟ ದಿನಗಳನ್ನು ಸ್ಮರಿಸಿದ ಅವರು ತಮಗೆ ಸಂಗೀತ ಹಾಗೂ ನಟನೆಗೆ ಪ್ರೋತ್ಸಾಹ ನೀಡಿದ ಉತ್ತಮ ಗುರುಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು.
ನವೆಂಬರ್ 22, 23ರಂದು ಎರಡು ದಿನಗಳು ಸಿಂಟ್ರಾನಿಕ ಸ್ಪರ್ಧೆಗಳು ನಡೆಯಲಿದ್ದು ನಗರದ ಪ್ರೌಢಶಾಲೆಯ ಹಲವು ಮಕ್ಕಳು ಇದರಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ.ನಂದ ಅವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಅವರು ಮಾತನಾಡುತ್ತಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಸ್ಪರ್ಧೆಗಳು ಅತಿ ಅಗತ್ಯ ಎಂದು ತಿಳಿಸಿದರು. ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಾಂಶುಪಾಲರು ಕರೆ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಕಾಂಚನಾ ಅವರು ವಂದನಾರ್ಪಣೆ ಸಲ್ಲಿಸಿದರು. ಇಂದು ನಮ್ಮ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಇಲ್ಲಿಗೆ ಆಗಮಿಸಿದ ವಿವಿಧ ಶಾಲೆಗಳ ಮಕ್ಕಳೇ ಕಾರಣ ಎಂದು ಉಪಪ್ರಾಂಶುಪಾಲರು ಅಭಿಪ್ರಾಯಪಟ್ಟರು. ಆಂಗ್ಲ ಉಪನ್ಯಾಸಕರಾದ ಗಾಯತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಿಂಧಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯವರು ಸಮಾರಂಭಕ್ಕೆ ಮಾರ್ಗದರ್ಶನ ನೀಡಿ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *