



ಮಾತೃಭಾಷೆ, ಮಾತೃಭೂಮಿಯ ನಿಂದನೆಯನ್ನು ಸಹಿಸಿಕೊಳ್ಳಲಾಗದು : ಎಸ್ ಆರ್ ವಿಶ್ವನಾಥ್
ಯಲಹಂಕ : ಭಾರತೀಯ ಸಂಸ್ಕೃತಿಯಲ್ಲಿ ಭೂಮಿಗೆ ತಾಯಿಯ ಸ್ಥಾನ ನೀಡಿ ಗೌರವಿಸಲಾಗುವುದು, ನಾವು ನೆಲೆಸಿದ ಭೂಮಿಯನ್ನು ಮಾತೃಭೂಮಿ, ವಸುಂಧರೆ ಎಂಬ ಹಲವು ಗೌರವಯುತ ಅಭಿದಾನಗಳಿಂದ ಸಂಭೋಧಿಸಲಾಗುತ್ತದೆ, ನಮ್ಮ ಮಾತೃಭೂಮಿ ಅಥವಾ ಮಾತೃಭಾಷೆಯ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ, ಸಹಿಸಿಕೊಳ್ಳಲೂ ಬಾರದು, ನಿಂದಿಸುವವರಿಗೆ ತಕ್ಕ ಶಾಸ್ತಿ ಮಾಡಿ ಬರಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ಉಪನಗರದ ಪ್ರತಿಷ್ಠಿತ ನ್ಯೂಟೌನ್ ಕ್ಲಬ್ ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕ್ಲಬ್ ನ 34ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು, ಇಲ್ಲಿ ಚಿನ್ನದ ಗಣಿಯಿದೆ, ಪವಿತ್ರ ನದಿಗಳಿವೆ, ಅರಣ್ಯ ಸಂಪತ್ತು, ಕರಾವಳಿ ತೀರ ಸೇರಿದಂತೆ ಬದುಕನ್ನು ಸುಂದರಗೊಳಿಸುವ ಸಕಲ ಸಂಪತ್ತು ಇಲ್ಲಿದೆ. ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಕರೆಯಲಾಗು ತ್ತಿದ್ದ ಕನ್ನಡ ನೆಲಕ್ಕೆ 1973ರಲ್ಲಿ ‘ಕರ್ನಾಟಕ’ ಎಂದು ಹೊಸ ನಾಮಕರಣ ಮಾಡಲಾಯಿತು. ಅಂದಿನಿಂದ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬರಲಾಗುತ್ತಿದ್ದು, ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಅನ್ಯಾಯವಾದಾಗ ಅದಕ್ಕೆ ಸೂಕ್ತ ಹೋರಾಟದ ಮೂಲಕ ತಕ್ಕ ಉತ್ತರ ನೀಡುತ್ತಾ ಬಂದಿದ್ದೇವೆ, ಭಾಷೆಯಿಂದ ಕನ್ನಡಿಗರು, ದೇಶದಿಂದ ಭಾರತೀಯರಾದ ನಾವು ಎಂದಿಗೂ ಮಾತೃಭಾಷೆ, ಮಾತೃಭೂಮಿಯ ನಿಂದನೆಯನ್ನು ಸಹಿಸಿಕೊಳ್ಳುವವರಲ್ಲ, ಅಂತಹ ಪರಿಸ್ಥಿತಿಯಲ್ಲಿ ತಕ್ಕ ಶಾಸ್ತಿ ಮಾಡಿಯೇ ಬರುತ್ತೇವೆ. ಮಾತೃ, ಮಾತೃಭೂಮಿ, ಮಾತೃಭಾಷೆ ನಮಗೆ ಸ್ವರ್ಗಕ್ಕೆ ಸಮಾನವಾದುದು ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ನ್ಯೂಟೌನ್ ಕ್ಲಬ್ ವರ್ಷ ಕಳೆದಂತೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುತ್ತಾ ಬೃಹತ್ತಾಗಿ ಬೆಳೆಯು ತ್ತಿದ್ದು, ಅದಕ್ಕನುಗುಣವಾಗಿ ಕ್ಲಬ್ ಸ್ಥಳಾವಕಾಶವನ್ನು ವಿಸ್ತರಿಸ ಬೇಕಾಗುತ್ತದೆ. ಈ ದಿಸೆಯಲ್ಲಿ ಕ್ಲಬ್ ನ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿದ್ದು, ಇದಕ್ಕಾಗಿ ಪ್ರಗತಿಯಲ್ಲಿರುವ ಶಿವರಾಮಕಾರಂತ ಬಡಾವಣೆ ಯಲ್ಲಿ ಬೃಹತ್ತಾದ ಸಿಎ ಜಾಗವನ್ನು ನೀಡುವ ನಿಟ್ಟಿನಲ್ಲಿ ಬಿಡಿಎ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ನ್ಯೂಟೌನ್ ಕ್ಲಬ್ ಗೆ ಕೊಡಿಸುವ ಭರವಸೆ ನೀಡಿದರು.
ಕನ್ನಡ ರಾಜ್ಯೋತ್ಸವ, ಕ್ಲಬ್ ನ ವಾರ್ಷಿಕೋತ್ಸವದ ಪ್ರಯುಕ್ತ ಕ್ಲಬ್ ನ ಹಿರಿಯ ಸದಸ್ಯರಿಗೆ ಸನ್ಮಾನ, ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಕ್ಲಬ್ ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಕ್ಲಬ್ ನ ಸದಸ್ಯರ ಮಕ್ಕಳಿಗೆ ಗೌರವ ಸನ್ಮಾನ, ಕ್ಲಬ್ ನ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಕ್ಲಬ್ ನ ಸದಸ್ಯರಿಗೆ ಬಹುಮಾನ ವಿತರಣೆ, ರಿಚರ್ಡ್ ಲೂಯಿಸ್ ರವರಿಂದ ಹಾಸ್ಯಸಂಜೆ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಖ್ಯಾತ ಖಳನಟ ಶೋಭರಾಜ್, ನ್ಯೂಟೌನ್ ಕ್ಲಬ್ ನ ಅಧ್ಯಕ್ಷ ಜಕ್ಕೂರು ದೇವರಾಜಪ್ಪ,ಉಪಾಧ್ಯಕ್ಷ ಬಿ.ಎಲ್.ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್ ವಿ., ಜಂಟಿ ಕಾರ್ಯದರ್ಶಿ ಮುನೇಗೌಡ, ಖಜಾಂಚಿ ಡಾ.ಆರ್.ಪ್ರಸನ್ನ ಕುಮಾರ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ಕೃಷ್ಣಾರೆಡ್ಡಿ ವಿ., ವೈ.ಎಸ್.ನಾಗರಾಜ್ ಗೌಡ, ಶಂಕರಪ್ಪ ಜಿ.ಎಂ., ಶ್ರೀನಿವಾಸ್ ಆರ್., ಉದಯಕುಮಾರ್ ಎಸ್. ಎನ್., ಸೇರಿದಂತೆ ಕ್ಲಬ್ ಸದಸ್ಯರಿದ್ದರು.