
ಸೇವೆಯಲ್ಲಿ ಒಳ್ಳೆಯ ಸಂಕಲ್ಪ, ನಿಸ್ಪೃಹತೆ, ಮಾನವೀಯತೆ ಇರಲಿ : ಮಹಾ ಮೇಧಾನಂದಜಿ ಮಹರಾಜ್
ಯಲಹಂಕ : ಸೇವಾನಿರತ ನೌಕರರಲ್ಲಿ ಹಲವು ಮಾದರಿ ಯವರು ಇರುತ್ತಾರೆ. ಕೆಲವರು ವೇತನಕ್ಕಾಗಿ ತಮಗೆ ನಿಗದಿ ಪಡಿಸಿರುವ ಕೆಲಸವನ್ನು ಮಾಡುತ್ತಾರೆ. ಇನ್ನು ಕೆಲವರು ವೇತನದ ಜೊತೆಗೆ ಒಂದಷ್ಟು ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಾರೆ. ಇನ್ನೊಂದಷ್ಟು ಜನ ನಿಸ್ಪೃಹ ಸೇವೆಯ ಜೊತೆಗೆ ಸಂಸ್ಥೆಯ ಏಳಿಗೆಯ ಗುರಿಯೊಂದಿಗೆ, ಮಾನವೀಯತೆ ಯನ್ನು ಬೆರೆಸಿ ಕೆಲಸ ಮಾಡುತ್ತಾರೆ ಇಂಥವರಿಂದ ಸಂಸ್ಥೆಗಳು ಏಳಿಗೆ ಕಾಣುತ್ತವೆ ಎಂದು ಮೈಸೂರಿನ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಮಹಾಮೇಧಾನಂದಜಿ ಮಹರಾಜ್ ಅಭಿಪ್ರಾಯಪಟ್ಟರು.
ಶೇಷಾದ್ರಿಪುರಂ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಸ್ನೇಹ ಸಮ್ಮಿಲನ’ ಶೇಷಾದ್ರಿಪುರಂ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ನೌಕರರಿಗೆ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ‘ಸಂಸ್ಥೆಯ ನೌಕರರ ಒಳ್ಳೆಯ ಸಂಕಲ್ಪದ ಸೇವೆ, ಆಡಳಿತ ಮಂಡಳಿಯ ಪ್ರೋತ್ಸಾಹದಾಯಕ ಆಡಳಿತ ನಿರ್ವಹಣೆಯಿಂದಾ ಗಿಯೇ ಶೇಷಾದ್ರಿಪುರಂ ವಿದ್ಯಾ ಸಂಸ್ಥೆ ಈ ಮಟ್ಟದ ಏಳಿಗೆ ಸಾಧಿಸಿ, ಜನಪ್ರಿಯ ವಿದ್ಯಾಸಂಸ್ಥೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್ ಆರ್ ಪಂಡಿತಾರಾಧ್ಯ ಮಾತನಾಡಿ ‘ಶಿಕ್ಷಕರು ದೇಶದ ನಿರ್ಮಾತೃಗಳು, ಅವರು ಸಲ್ಲಿಸುವ ಪ್ರಾಮಾಣಿಕ ಸೇವೆ, ನೀಡುವ ಮೌಲ್ಯಯುತ ಶಿಕ್ಷಣದಿಂದಾಗಿ ದೇಶವನ್ನು ಬೆಳಗುವ ಹೊಸ ಪ್ರತಿಭೆಗಳು ಉದಯಿಸುತ್ತವೆ ಎಂದರು.
ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ, ನಾಡೋಜ ವೂಡೆ ಪಿ.ಕೃಷ್ಣ ಮಾತನಾಡಿ ‘ಕಳೆದ 26 ವರ್ಷಗಳಿಂದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಿವೃತ್ತ ಹಿರಿಯ ನೌಕರ ರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರ ಅನುಪಮ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ, ಇದೊಂದು ಅಪೂರ್ವ ಕ್ಷಣ ಎಂದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 20 ಹಿರಿಯ ನೌಕರರಿಗೆ ‘ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾದ ಟಿ.ಎಸ್.ಹೆಂಜಾರಪ್ಪ, ಡಬ್ಲ್ಯೂ ಹೆಚ್ ಅನಿಲ್ ಕುಮಾರ್, ಗೌರವ ಕೋಷಾಧ್ಯಕ್ಷ ಬಿ.ಎಂ. ಪಾರ್ಥಸಾರಥಿ, ಗೌರವ ಸಹ ಕಾರ್ಯದರ್ಶಿ ಎಸ್.ಶೇಷ ನಾರಾಯಣ, ಗೌರವ ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್. ವೆಂಕಟೇಶ್ ಸೇರಿದಂತೆ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu
Kogilu layout Yelahanka
9845085793