ಜನಮನ ಗೆದ್ದ ಸಂತ ಜಗತ್ತಿನ ಅನೇಕ ದೇಶಗಳು ತಮ್ಮಲ್ಲಿರುವ ಸೇನಾಶಕ್ತಿಯ ಬಲದಿಂದ ಬಲಾಢ್ಯ ಯುದ್ಧೋಪಕರಣಗಳ ಮೂಲಕ ಇಡೀ ವಿಶ್ವವನ್ನೇ ಗೆಲ್ಲಬೇಕೆಂದು ಹವಣಿಸುತ್ತಾ ನೆಮ್ಮದಿಯನ್ನೇ ಕಳೆದುಕೊಂಡು ಶತಶತಮಾನಗಳಿಂದ ಹೋರಾಡುತ್ತಾ ಬಂದರು, ಜಗತ್ತನ್ನ ಗೆಲ್ಲುವುದು ಹೋಗಲಿ ಬಿಡಿ ತಮ್ಮ ಅಸ್ತಿತ್ವವನ್ನೇ ಉಳಿಸಿಕೊಳ್ಳಲಾಗುತ್ತಿಲ್ಲ. ಆದರೆ ಭಾರತ ಮಾತ್ರ ಹತ್ತಾರು ಸಾವಿರ ವರ್ಷಗಳಿಂದ ತನ್ನ ಪರಂಪರೆಯ ಸುಗಂಧವನ್ನು ಇಡೀ ಜಗತ್ತಿನಾದ್ಯಂತ ಸುಸುತ್ತಾ ಬಂದಿದೆ. ಪಶ್ಚಿಮಾತ್ಯ ಜನ ಪ್ರಾಣಿಗಳ ಹಾಗೆ ಕಾಡಿಂದ ಕಾಡಿಗೆ ಅಲಿಯುತ್ತಿರುವಾಗ ಈ ದೇಶದ ಗುರುಕುಲಗಳಲ್ಲಿ ಮಹಾಜ್ಞಾನದ ಗಂಗೆ ಹರಿಯುತ್ತಿದ್ದಳು. ನಮ್ಮ ಸಂಸ್ಕೃತಿ ಎಷ್ಟೋ ಸುಧೀರ್ಘಕಾಲದಿಂದ ಬೆಳೆದು ಬಂದು ಇಂದಿಗೂ ಪ್ರಸ್ತುತವಾಗಿದೆ. ಇಷ್ಟೊಂದು ಹಳೆಯ ಪರಂಪರೆಗಳು ಈಗ ಜೀವಂತವಾಗಿರುವುದು ನಮಗೆಲ್ಲಿಯೂ ಕಾಣಲಾರವು.ಆದರೆ ಈ ಸಂಸ್ಕೃತಿ ಎದುರಿಸಿದಷ್ಟು ದಾಳಿಗಳನ್ನು ಮತ್ಯಾರು ಎದುರಿಸಿರಲಾರರು. ಅನೇಕ ದಾಳಿಗಳ ಮಧ್ಯೆಯು ಇಂದಿಗೂ ತನ್ನ ಗತವೈಭವದಿಂದ ಮೆರೆಯುತ್ತಿದೆ. ಈ ದೇಶ ಈಗಲೂ ತನ್ನ ಅಂತರ್ಥತ್ವ ಕಾಯ್ದುಕೊಂಡು ಬಂದಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣವೇನು? ನನ್ನ ದೇಶ ಜಗತ್ತನ್ನು ಸೇನಾ ಶಕ್ತಿಯ ಬಲದಿಂದ ಗೆಲ್ಲಬೇಕೆಂದು ಬಯಸದೆ ಮಹಾತಪಸ್ವಿಗಳಿಗೆ ಜನ್ಮ ನೀಡಿ ಅವರ ಜ್ಞಾನದ ಬಲದಿಂದ ವಿಶ್ವಕ್ಕೆ ಸತ್ಯದ ದರ್ಶನ ಮಾಡಿಸುತ್ತಾ ನೆಮ್ಮದಿಯ ಪಾಠವನ್ನು ಹೇಳುತ್ತಾ "ವಸುದೈವ ಕುಟುಂಬಕಂ" ಎಂದು ಸಾರುತ್ತ ಇಡೀ ಜಗತ್ತನ್ನೇ ಒಂದು ಕುಟುಂಬವಾಗಿಸಿ ಬದುಕುವ ಕಲೆಯನ್ನು ಕಲಿಸುತ್ತಾ ವಿಶ್ವವನ್ನೇ ತನ್ನತ್ತ ಆಕರ್ಷಿಸಿಕೊಂಡಿದೆ. ಈ ನಾಡಿನಲ್ಲಿ ಶಂಕರರು, ಬುದ್ಧ, ಬಸವ,ಕನಕ, ರಾಮಕೃಷ್ಣರು ವಿವೇಕಾನಂದರಂತಹ ಇನ್ನು ಅನೇಕ ಮಹಾತಪಸ್ವಿಗಳು ಕಾಲಕಾಲಕ್ಕೂ ಹುಟ್ಟುತ್ತಾ ಬಂದು ಭವ್ಯ ಭಾರತವನ್ನ ದೇವಮಂದಿರವನ್ನಾಗಿಸಿದ್ದಾರೆ. ಈಗಲೂ ಅಂತಹ ತಪಸ್ವಿಗಳನ್ನು ಪುಣ್ಯದ ಈ ನೆಲದಲ್ಲಿ ಕಾಣಬಹುದು. ಹಾಗೇ ಇಂದು ನಮ್ಮೆಲ್ಲರ ಮಧ್ಯದಲ್ಲೇ ಇದ್ದುಕೊಂಡು ತಮ್ಮ ಜ್ಞಾನಪ್ರವಾಹವನ್ನು ಹರಿಸುತ್ತಾ ನಲುಗಿದ ಸಮಾಜಕ್ಕೆ ತಮ್ಮ ನುಡಿ ನಡೆಗಳ ಮೂಲಕವೇ ಭರವಸೆಯ ಬೆಳಕನ್ನು ಮೂಡಿಸಿದವರೇ ಮಣಕವಾಡದ ಪರಮಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿಯವರು. ಪೂಜ್ಯರ ವಾಣಿಗೆ ಮನಸೋಲದವರೇ ಇಲ್ಲ, ಅವರ ಪ್ರತಿಯೊಂದು ನುಡಿಗಳು ಜನಮನತಟ್ಟುತ್ತಿವೆ. ಆತ್ಮಸ್ಥೈರ್ಯವನ್ನು ಕಳೆದುಕೊಂಡು ಕುಗ್ಗಿದವರಿಗೆ ಅವರ ದಿವೋಪದೇಶಗಳು ಸ್ಪೂರ್ತಿಯ ಚಿಲುಮೆಗಳಾಗಿವೆ. ಇಂದಿನ ನಮ್ಮ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿಯೂ ಅವರ ಮಾತುಗಳಿಗೆ ಬಹುಬೇಡಿಕೆ. ಪೂಜ್ಯರು 1988ರಲ್ಲಿ ಗದಗ ಜಿಲ್ಲೆಯ ಕಲ್ಲೂರು ಗ್ರಾಮದ ಶರಣದಂಪತಿಗಳಾದ ಈಶ್ವರಯ್ಯ ಹಾಗೂ ಬೂದಮ್ಮರ ಪುಣ್ಯಗರ್ಭದಲ್ಲಿ ಜನಿಸಿ ಕನ್ನಡ, ಮರಾಠಿ,ಹಿಂದಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದು 2019ರಂದು ಗದಗ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಸುಕ್ಷೇತ್ರ ಮಣಕವಾಡದ ದೇವಮಂದಿರ ಮಠದ ಪೀಠಾಧೀಶರಾಗಿ ಇಡೀ ದೇಶವೇ ಒಂದು ಬಾರಿ ಆ ಪುಟ್ಟ ಗ್ರಾಮವನ್ನು ತಿರುಗಿ ನೋಡುವಂತೆ ಮಾಡಿದ ಮಹಾಯೋಗಿ. ಸರಿಯಾಗಿ ರಸ್ತೆಗಳೇ ಇಲ್ಲದ ಗ್ರಾಮದಲ್ಲಿ ಶಿಕ್ಷಣದ ಹೆಮ್ಮೆರವನ್ನ ಕಟ್ಟಿ ನೂರಾರುಮಕ್ಕಳಿಗೆ ಉತ್ಕೃಷ್ಟ ದರ್ಜೆಯ ಶಿಕ್ಷಣವನ್ನು ನೀಡುತ್ತಾ ಉಚಿತ ಪ್ರಸಾದ ನೀಲಯದ ಮೂಲಕ ನಿತ್ಯದಾಸೋಹ ನಡೆಸುತ್ತಾ ಅನೇಕ ಬಡ ಮಕ್ಕಳ ಬಾಳಿನಲ್ಲಿ ಬೆಳಕುತಂದ ಯುವಸಂತ. ಇಂದಿನ ಆಧುನಿಕ ಸನ್ಯಾಸಿಗಳಿಗೆ ಆದರ್ಶಪ್ರಾಯವಾಗಿ ನಿಲ್ಲುವ ಮಹಾಮೇರು ವ್ಯಕ್ತಿತ್ವ ಪೂಜ್ಯರದ್ದು. ಅವರು ಪ್ರವಚನವನ್ನ ಮಾಡುತ್ತಿದ್ದರೆ ಇಡೀ ಸಮಾಜವೇ ತದೇಕ ಚಿತ್ತದಿಂದ ಆಲಿಸುತ್ತದೆ. ಪೂಜ್ಯರ ಪ್ರವಚನಗಳು ಎಲ್ಲೇ ನಡೆದರೂ ಅಲ್ಲಿ ಜನರ ಪ್ರವಾಹವೇ ಹರಿದು ಬರುತ್ತದೆ. ಪೂಜ್ಯರ ಬಗ್ಗೆ ಕೆಲವೇ ಪದಗಳಿಂದ ಹೇಳಿ ಮುಗಿಸಲಾಗದು. ಸಮಾಜಕ್ಕೆ ಮಹಾಬರವಸೆಯಂತಿರುವ ಪೂಜ್ಯರ ಒಡನಾಟದಲ್ಲಿರುವ ನಾವುಗಳೇ ಧನ್ಯರು. ✍️ ಶ್ರೀರಾಮಕೃಷ್ಣ ದೇವರು ಶ್ರೀ ಷಣ್ಮುಖಾರೂಢ ಮಠ.ವಿಜಯಪುರ

Leave a Reply

Your email address will not be published. Required fields are marked *