


ಇ-ಖಾತಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಿ : ಕೆ.ಅಶೋಕನ್
ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಕೋಡಗಲಹಟ್ಟಿ ಯಲ್ಲಿ ಇ-ಖಾತಾ ಅಭಿಯಾನ :
ಬ್ಯಾಟರಾಯನಪುರ : ಕಂದಾಯ ಇಲಾಖೆಯ ಕೆಲಸಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ಸುಲಭವಾಗಿ ಜನತೆಗೆ ತಲುಪುವಂತೆ ಮಾಡುವ ದಿಸೆಯಲ್ಲಿ ಇ-ಖಾತ ಅಭಿಯಾನ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳು ವಂತಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಅಶೋಕನ್ ತಿಳಿಸಿದರು.
ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಹುಣಸಮಾರನಹಳ್ಳಿ ಮತ್ತು ಕೋಡಗಲಹಟ್ಟಿ ಗ್ರಾಮಗ ಳಲ್ಲಿ ಮಂಗಳವಾರ ಏರ್ಪಡಿಸಿದ್ದ ಇ-ಖಾತಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು ‘ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ಅವರು ಹೆಚ್ಚು ಕಾಳಜಿ ವಹಿಸಿ, ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತಂದು ಸರಳೀಕೃತಗೊಳಿಸಿ, ಸ್ವತ್ತುಗಳ ಮಾಲೀಕರು ತಮ್ಮ ಸ್ವತಿನ ಕಂದಾಯ ಪಾವತಿಸಿ, ಸಮರ್ಪಕ ದಾಖಲೆ ಸಲ್ಲಿಸಿ ಸುಲಭವಾಗಿ ಇ-ಖಾತಾ ಪಡೆಯಲು ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ, ಹೆಚ್ಚಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಹುಣಸಮಾರನಹಳ್ಳಿ ಪುರಸಭೆಯ ಮುಖ್ಯ ಅಧಿಕಾರಿ ಕಾಂತರಾಜು ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ, ಮನೆ, ಸೇರಿದಂತೆ ಹಲವು ರೀತಿಯ ಆಸ್ತಿಗಳನ್ನು ಹೊಂದಿರುವವರು ದಾಖಲೆ ಸಮೇತ ಅರ್ಜಿ ಸಲ್ಲಿಸಿದರೆ ಕೂಡಲೇ ಇ ಖಾತಾ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಮೇ 10ರ ವರೆಗೂ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬೇಡಿ, ನೇರವಾಗಿ ದಾಖಲೆಗಳನ್ನು ಸಲ್ಲಿಸಿದರೆ ಕೂಡಲೇ ನಿಮ್ಮ ಮನೆಗಳ, ನಿವೇಶನಗಳ ಖಾತೆ ಮಾಡಿಕೊಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಜೆ.ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿಗೌಡ, ಮುನಿರಾಜು, ಶ್ರೀನಿವಾಸ್ ಗೌಡ, ಹುಣಸಮಾರನಹಳ್ಳಿ ಪುರಸಭೆಯ ವ್ಯವಸ್ಥಾಪಕ ಮಾರುತಿ, ಕಂದಾಯ ಅಧಿಕಾರಿ ನಾಗೇಶ್ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಗು ಗ್ರಾಮಸ್ಥರಿದ್ದರು.